ಗದಗದಲ್ಲಿ ನಿಲ್ಲದ ಪ್ರವಾಹ ಪೀಡಿತರ ಕಣ್ಣೀರು – ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆ

Public TV
1 Min Read

-ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ

ಗದಗ: ನೆರೆ ಬಂದುಹೋದ್ರು ನೆರೆ ಸಂತ್ರಸ್ತರ ಕಣ್ಣಿರು ಮಾತ್ರ ಇನ್ನೂ ನಿಲ್ಲದಾಗಿದೆ. ಆಳುವ ಸರ್ಕಾರಗಳು, ಜನಪ್ರತಿನಿಧಿಗಳು ನೆರೆಸಂತ್ರಸ್ತರನ್ನ ಮರೆತಂತಿದೆ. ಸಂತ್ರಸ್ತ ಮಹಿಳೆಯರ ಸ್ನಾನಸ್ಥಳ, ಶೌಚಾಲಯ, ವಾಸ ಮಾಡುವ ಸ್ಥಳದ ಸ್ಥಿತಿ ನೋಡಿದ್ರೆ ಇಡೀ ಮನುಕುಲವೆ ತಲೆತಗ್ಗಿಸುವಂತಿದೆ. ನೆರೆಬಂದು ಎರಡು ತಿಂಗಳಾದರೂ ನೊಂದ ಜನರ ಧ್ವನಿಯಾಗಬೇಕಾದ ವೋಟುಪಡೆದ ಮಹಾನ್ ಧನಿಗಳು ಎಲ್ಲಿಹೋದ್ರು? ಸಂತ್ರಸ್ತರ ಬಾಳ ನೋವಿನ ಪಯಣದ ಬುತ್ತಿ ಕುರಿತಾದ ಒಂದು ವರದಿ ಇಲ್ಲಿದೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನೆರೆ ಸಂತ್ರಸ್ತರಿಗೆ ಭೂಮಿಯೇ ಹಾಸಿಗೆ, ಆಕಾಶವೇ ಹೊದಿಕೆಯಾಗಿದೆ. ಮಲಪ್ರಭಾ ನದಿಯ ನೆರೆಯಿಂದಾಗಿ ಸಂತ್ರಸ್ತ ಮಹಿಳೆಯರ ಕಷ್ಟ ಹೇಳತೀರದಾಗಿದೆ. ನೆರೆ ಬಂದು 2 ತಿಂಗಳಾದರೂ ಸೂಕ್ತ ವಾಸ್ತವ್ಯ, ಪರಿಹಾರ ಸಿಗದೇ ಮಹಿಳೆಯರು ಪರದಾಡುತ್ತಿದ್ದಾರೆ. ಇದ್ದ ಮನೆ, ಜಮೀನು, ಆಸ್ತಿ ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಸಂತ್ರಸ್ತರ ಕರುಳು ಹಿಂಡುವ ಅಸಲಿ ಬದುಕನ್ನು ಬಿಚ್ಚಿಡ್ತಿದೆ.

ಸಂತ್ರಸ್ತ ಮಹಿಳೆಯರು ಸ್ನಾನ ಮಾಡಬೇಕೆಂದರೆ ಸುತ್ತಲು ಪರದೆಯಂತೆ ಸೀರೆ ಹಿಡಿದು ಮರೆಮಾಡಿ ಸ್ನಾನ ಮಾಡಬೇಕು. ಶೌಚಾಲಯ ಸ್ಥಿತಿ ಇದಕ್ಕಿಂತ ಕೆಟ್ಟದಾಗಿದೆ. ವಯಸ್ಕ ಮಹಿಳೆಯರು ರಾತ್ರಿ ಹೊತ್ತು ನಿದ್ರೆ ಮಾಡಲು ಹೆದರುತ್ತಿದ್ದಾರೆ. ಕತ್ತಲಾದರೆ ಮಹಿಳೆಯರು, ವಯೋವೃದ್ಧರು, ಮಕ್ಕಳು ಗುಡಿಸಲಿನಿಂದ ಹೊರಗೆ ಬರಲಾಗದೇ ಪರದಾಡುವಂತಾಗಿದೆ.

ಮಲಪ್ರಭೆ ಕೆರಳಿ ಇದ್ದ ಬದುಕು ಕಸಿದು ಕೊಂಡಾಯ್ತು. ಆದರೆ ಕೊಚ್ಚಿ ಹೋದ ಬದುಕನ್ನು ಮತ್ತೆ ಕಟ್ಟಿ ಕೊಡಬೇಕಿದ್ದ ಜನಪ್ರತಿನಿಧಿಗಳು, ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಆದರೆ ನೆರೆಗಿಂತಲೂ ಭೀಕರ ಪರಿಸ್ಥಿತಿ ಎದುರಿಸುತ್ತಿರುವುದು ಸಂತ್ರಸ್ತ ಮಹಿಳೆಯರು. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ. ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *