ಪ್ರವಾಹದಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡ ಕುರಿಗಾಹಿಗಳು

Public TV
1 Min Read

ಯಾದಗಿರಿ: ಕೃಷ್ಣ ನದಿಯ ಪ್ರವಾಹದಿಂದ ಕುರಿ ಕಾಯಲು ಹೋದ ಕುರಿಗಾಹಿಗಳು ಕಳೆದ ಮೂರು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ನಾರಾಯಣಪುರ ಗ್ರಾಮದ ಕೋಟಿ ಮಾಳಿ ನಡುಗಡ್ಡೆಯಲ್ಲಿ ನಡೆದಿದೆ.

ಗ್ರಾಮದ ಮೂವರು ಕುರಿಗಾಹಿಗಳಾದ ಸೋಮಣ್ಣ, ಶೇಕರಪ್ಪ ಹಾಗೂ ಗದ್ದೆಪ್ಪ ನಡುಗಡ್ಡೆಯಲ್ಲಿ ಸಿಲುಕಿಕೊಂಡಿರುವವರು. ಇವರು ಮೂರು ದಿನಗಳ ಹಿಂದೆ ಸುಮಾರು 80 ರಷ್ಟು ಕುರಿಗಳ ಸಮೇತ ಮೇಲಿನಗಡ್ಡಿ ಸಮೀಪದ ಕೃಷ್ಣ ನದಿ ಮಧ್ಯ ಭಾಗದಲ್ಲಿರುವ ಕೋಟಿ ಮಾಳಿ ನಡುಗಡ್ಡೆಗೆ ಹೋಗಿದ್ದರು.

ಮಳೆಯಿಂದ ಬಸವಸಾಗರ ಜಲಾಶಯ ತುಂಬಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಕುರಿಗಳನ್ನು ಮೇಯಿಸಲು ಹೋದವರು ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದು, ವಾಪಸ್ ಬರುವುದಕ್ಕೆ ಸಾಧ್ಯವಾಗದೇ ಅನ್ನ-ಆಹಾರ ಇಲ್ಲದೇ ಪರದಾಡುತ್ತಿದ್ದಾರೆ. ಸದ್ಯಕ್ಕೆ ಕೇವಲ ಕುರಿ ಹಾಲನ್ನು ಕುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಬುಧವಾರ ಕೂಡ ಡ್ಯಾಂನಿಂದ 65 ಸಾವಿರ ಕ್ಯೂಸೆಕ್ ನೀರು ಹೊರ ಬಿಟ್ಟಿದ್ದರಿಂದ ನದಿ ದಾಟಿ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಕುರಿಗಾಹಿಗಳ ಕುಟುಂಬದವರು ಆತಂಕದಲ್ಲಿದ್ದು, ರಕ್ಷಣೆ ಮಾಡುವಂತೆ ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದ್ದಾರೆ. ಇಂದು ಜಿಲ್ಲಾಡಳಿತ ಕುರಿಗಾಹಿಗಳನ್ನು ವಾಪಸ್ ಕರೆ ತರುವುದಕ್ಕೆ ಮುಂದಾಗಿದೆ.

Share This Article
Leave a Comment

Leave a Reply

Your email address will not be published. Required fields are marked *