ವಿಜೃಂಭಣೆಯಿಂದ ನಡೆದ ಐತಿಹಾಸಿಕ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ

Public TV
2 Min Read

ಕಲಬುರಗಿ: 18ನೇ ಶತಮಾನದ ಸಂತ ಶರಣಬಸವೇಶ್ವರರ 200ನೇ ಪುಣ್ಯತಿಥಿಯ ಸ್ಮರಣಾರ್ಥ ಐತಿಹಾಸಿಕ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ದೇಶ, ವಿದೇಶಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.

ನಿಗದಿತ ಸಮಯಕ್ಕೆ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರರನ್ನು ಸ್ತುತಿಸುವ ಘೋಷಣೆಗಳ ಮಧ್ಯೆ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರರ ಮೂರ್ತಿಯನ್ನು ಹೊತ್ತ ಅಲಂಕೃತ ರಥವನ್ನು ಎಳೆಯಲಾಯಿತು. ಇದನ್ನೂ ಓದಿ: ಕದ್ದ ಹುಂಡಿ ವಾಪಸ್ ತಂದಿಟ್ಟ ಕಳ್ಳರು

ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಮತ್ತು ದೇವರಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಗಮಿಸಿದ ಶರಣಬಸವೇಶ್ವರ ಮೂರ್ತಿಯನ್ನು ಹೊತ್ತ ರಥದ ಮೇಲೆ ಮೊದಲ ಬಾರಿಗೆ ಸಂಸ್ಥಾನವು ಹೆಲಿಕಾಪ್ಟರ್ ಮತ್ತು ಡ್ರೋನ್‍ಗಳ ಮೂಲಕ ಗುಲಾಬಿ ದಳಗಳನ್ನು ಸುರಿಸಿತು.

ಈ ಬಾರಿಯ ಜಾತ್ರೆಯು ಹಲವು ರೀತಿಯಲ್ಲಿ ವಿಶಿಷ್ಟವಾಗಿದ್ದು, ಇದೇ ಮೊದಲ ಬಾರಿಗೆ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಅಪ್ಪಾಜಿ ಹಾಗೂ 9ನೇ ಪೀಠಾಧಿಪತಿಯಾಗಿ ನೂತನವಾಗಿ ಪಟ್ಟಾಭಿಷೇಕಗೊಂಡ ಅವರ ಪುತ್ರ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ರಥೋತ್ಸವದ ಮೊದಲು ಹಾಗೂ ನಂತರದ ಎಲ್ಲ ಧಾರ್ಮಿಕ ವಿಧಿವಿಧಾನಗಳ ನೇತೃತ್ವ ವಹಿಸಿದ್ದರು. ಪ್ರಸಾದ ಬಟ್ಟಲು (ಸಂತ ಶರಣಬಸವೇಶ್ವರರು ತಮ್ಮ ಆಹಾರವನ್ನು ತೆಗೆದುಕೊಂಡ ಬೆಳ್ಳಿಯ ತಟ್ಟೆ) ಮತ್ತು ಲಿಂಗ ಸಜ್ಜಿಕೆ (ಸಂತರು ಧರಿಸಿದ್ದ ಬೆಳ್ಳಿಯ ಪೆಟ್ಟಿಗೆಯಲ್ಲಿ ಇರಿಸಲಾದ ಪವಿತ್ರಲಿಂಗದ ವಿಗ್ರಹ) ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ದೇಗುಲದಲ್ಲಿ ನೆರೆದಿದ್ದ ಸಾವಿರಾರು ಭಕ್ತರಿಗೆ ಪ್ರದರ್ಶಿಸಿದರು. ಈ ದಿನದಂದು ಸಂಸ್ಥಾನದ ಪೀಠಾಧಿಪತಿಗಳು ಸಾಂಪ್ರದಾಯಿಕವಾಗಿ ಪೀಠಾರೋಹಣ ಎಂದು ಕರೆಯಲ್ಪಡುವ ಪೀಠದ ಉಸ್ತುವಾರಿಯನ್ನು ಔಪಚಾರಿಕವಾಗಿ ವಹಿಸಿಕೊಳ್ಳುತ್ತಾರೆ. ಇದನ್ನೂ ಓದಿ: 8ಕ್ಕೂ ಹೆಚ್ಚು ಸ್ವಾಮೀಜಿಗಳೊಂದಿಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಸಿದ್ದಗಂಗಾ ಶ್ರೀ

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಮುಖ್ಯಸ್ಥರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸುಪ್ರೀಂ ಕೋರ್ಟ್‍ನ ಮಾಜಿ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ, ಹಿರಿಯ ವೈದ್ಯಕೀಯ ಕ್ಯಾನ್ಸರ್ ತಜ್ಞ ಡಾ.ಶೇಖರ ಪಾಟೀಲ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿದಂತೆ ಶರಣಬಸವ ವಿಶ್ವವಿದ್ಯಾಲಯದ ಡಾ ನಿರಂಜನ್ ವಿ. ನಿಷ್ಠಿ ಮತ್ತು ಡಾ. ಅಪ್ಪಾಜಿ ಅವರ ಕುಟುಂಬದ ಸದಸ್ಯರು ಹಾಗೂ ಇತರ ಪ್ರಮುಖರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *