ಬಿಜೆಪಿಗೆ ಉತ್ತರ ನೀಡಲೆಂದೇ ಈ ಪ್ಲಾನ್ ಮಾಡಿದ್ದು: ಶರಣಗೌಡ

Public TV
1 Min Read

– ರಾಯಚೂರು ಎಸ್‍ಪಿ ಕಚೇರಿಗೆ ದೂರು

ರಾಯಚೂರು: ಬಿಜೆಪಿಯವರು ಕಳೆದ ಕೆಲವು ದಿನಗಳಿಂದ ನಮ್ಮನ್ನು (ಜೆಡಿಎಸ್)ಕಾಡುತ್ತಿದ್ದರು. ಹೀಗಾಗಿ ಅವರಿಗೆ ಉತ್ತರ ನೀಡುವ ಉದ್ದೇಶದಿಂದಲೇ ಆಡಿಯೋ ಪ್ಲಾನ್ ಮಾಡಿದ್ದು ಎಂದು ಗುರುಮಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಹೇಳಿದ್ದಾರೆ.

ಎಸ್‍ಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಆಪರೇಷನ್ ಆಡಿಯೋ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಶಿವನಗೌಡ, ಪ್ರೀತಂಗೌಡ ಹಾಗೂ ಮರಂಕಲ್ ವಿರುದ್ಧ ಎಸ್‍ಪಿ ಡಿ.ಕಿಶೋರ್ ಬಾಬು ಅವರಿಗೆ ದೂರು ನೀಡಿದ್ದೇನೆ. ರಾಜಕೀಯವಾಗಿ ಜೆಡಿಎಸ್ ಮುಗಿಸುತ್ತೇವೆ ಎಂದು ಯಾರು ಹೇಳಿದ್ದಾರೋ ಅವರು ಒಡ್ಡಿದ ಆಮಿಷಗಳ ಬಗ್ಗೆ ವಿವರಿಸಿದ್ದೇವೆ. ಈ ಸಂಬಂಧ ಮೂರು ಪುಟದ ದೂರು ಹಾಗೂ 4 ಸಿಡಿಗಳನ್ನ ನೀಡಿದ್ದೇವೆ ಎಂದು ತಿಳಿಸಿದರು.

ಸ್ಪೀಕರ್ ರಮೇಶ್ ಕುಮಾರ್ ಅವರ ಹೆಸರು ಹೇಳಿ, 50 ಕೋಟಿ ರೂ. ಡೀಲ್ ಕುರಿತು ಮಾತನಾಡುವಾಗ ಯಾರು ಇದ್ದರು ಎನ್ನುವುದು ತನಿಖೆಯಲ್ಲಿ ಗೊತ್ತಾಗುತ್ತದೆ. ನನಗೆ ಯಾರು ಧೈರ್ಯ ತುಂಬಿಲ್ಲ. ನನ್ನಲ್ಲೇ ಸಾಕಷ್ಟು ಧೈರ್ಯ ಇದೆ. ಅವರು ಎಲ್ಲ ರೀತಿಯ ಆಮಿಷ ಒಡ್ಡಿದ್ದನ್ನು ತಿರಸ್ಕರಿಸಿಯೇ ಪ್ಲಾನ್ ಮಾಡಿದ್ದೆ ಎಂದು ಶರಣಗೌಡ ಹೇಳಿದರು.

ಆಡಿಯೋ ಮಾಡಿಸಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಅವರ ಹೆಸರನ್ನು ಹೇಳುವುದು ಸರಿಯಲ್ಲ. ಅವರು ಸರ್ಕಾರ ಉಳಿಸಿಕೊಳ್ಳಲು ಪ್ರತಿ ದಿನವೂ ನೋವು ಅನುಭವಿಸುತ್ತಿದ್ದರು. ಹೀಗಾಗಿ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪ್ಲಾನ್ ಮಾಡಿ ಆಪರೇಷನ್ ಕಮಲವನ್ನು ಭೇದಿಸಿದ್ದೇನೆ. ಯಾವುದೇ ಕಾರಣಕ್ಕೂ ಸಿಎಂ ಕುಮಾರಸ್ವಾಮಿ ಅವರನ್ನು ಪ್ರಕರಣದಲ್ಲಿ ಸೇರಿಸುವುದು ಸರಿಯಲ್ಲ ಎಂದ ಅವರು, ನನಗೆ ಜೀವ ಬೇದರಿಕೆ ಬಂದರೆ ನಾನೇ ರಕ್ಷಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *