ಬೆಂಗಳೂರು: ಮಳೆ ಬಂದಿಲ್ಲ ಅಂದರೆ ಜಪ ತಪ, ಯಾಗ, ಹೋಮ, ಹಾವನ, ಕತ್ತೆ-ಕಪ್ಪೆಗಳ ಮದುವೆ ಮಾಡುತ್ತಿದ್ದ ಜನರು ಈಗ ಸಾಕು ಈ ಮಳೆಯ ಅವಾಂತರ ಅಂತಾ ವರುಣನ ಆರ್ಭಟವನ್ನು ನಿಲ್ಲಿಸಲು ಶರಭ ಯಾಗವನ್ನು ಮಾಡುತ್ತಿದ್ದಾರೆ.
ಕಳೆದ ಎರಡೂವರೆ ತಿಂಗಳಲ್ಲಿ ನಿರಂತರವಾಗಿ ಸುರಿದ ಮಳೆಗೆ ಜನರು ಅಬ್ಬಾ! ಸಾಕು ಈ ಮಳೆ ಅಂತಾ ಭಯದಿಂದ ನಿಟ್ಟುಸಿರು ಬಿಡುತ್ತಿದ್ದಾರೆ. ಆದ್ದರಿಂದ ಮಳೆಯಿಂದ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಅವರು ಕಳೆದ ಮೂರು ದಿನಗಳಿಂದ ಒಂದು ಗುಹೆಯಲ್ಲಿ ಕುಳಿತು ಪ್ರಾರ್ಥನೆ ಮಾಡುತ್ತಾ ಶರಭ ಯಾಗವನ್ನು ಮಾಡುತ್ತಿದ್ದಾರೆ.
ಶರಭ ಯಾಗವನ್ನು ಶರಭದೇವರ ಹೆಸರಿನಲ್ಲಿ ಮಾಡುತ್ತಾರೆ. ಪಂಚಭೂತಗಳ ನಿಯಂತ್ರಣವನ್ನು ಈ ಶರಭ ಯಾಗದಿಂದ ಮಾಡಬಹುದು. ಮಳೆ ಬರಿಸಲು ಪ್ರಜ್ಜನ್ನ ಯಾಗ ಮಾಡುತ್ತಾರೆ. ಈ ಶರಭ ಯಾಗದಿಂದ ಮಳೆಯನ್ನು ನಿಲ್ಲಿಸಬಹುದು ಹಾಗೂ ಮಳೆಯನ್ನು ತಡೆಯಲುಬಹುದು. ಈ ಹಿಂದೆ ರಾಜರೂ ಈ ಯಾಗವನ್ನು ಮಾಡುಸುತ್ತಿದ್ದರು. ನಾವು ಈ ಯಾಗ ಮಾಡಿ ಮಳೆ ನಿಲ್ಲಿಸಿದ ಉದಾಹರಣೆಗಳು ಇದೆ ಅಂತಾ ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಹೇಳಿದ್ದಾರೆ.
ಈ ವರ್ಷದ ದಾಖಲೆಯ ಮಳೆ ಅನೇಕ ತೊಂದರೆಗಳನ್ನು ಮಾಡಿದೆ. ಅತಿವೃಷ್ಠಿಯಿಂದ ಜನರ ಜೀವನ ಅಸ್ತವ್ಯಸ್ತವಾಗಿದ್ದು, ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 18ರ ನಂತರ ಮಳೆ ಕಡಿಮೆಯಾಗುತ್ತೆ ಅಂತಾ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.