ಐವರ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್- ಡೆತ್ ನೋಟ್‍ನಲ್ಲಿ ಅಪ್ಪನ ವಿರುದ್ಧವೇ ಮಕ್ಕಳ ಆರೋಪ

Public TV
2 Min Read

– ಸ್ಥಳ ಮಹಜರು ಮಾಡಿದ ಪೊಲಿಸರು

ಬೆಂಗಳೂರು: ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಸ್ಥಳ ಮಹಜರು ಮಾಡಿದ್ದು, ಈ ವೇಳೆ ಮೂರು ಜನ ಬರೆದಿರುವ ಡೆತ್ ನೋಟ್‍ಗಳು ಪತ್ತೆಯಾಗಿವೆ. ಮೂವರೂ ತಮ್ಮ ತಂದೆ ಶಂಕರ್ ವಿರುದ್ಧವೇ ಆರೋಪ ಮಾಡಿದ್ದಾರೆ.

ತಿಗಳರಪಾಳ್ಯದ ಮನೆಯಲ್ಲಿ ಎಸಿಪಿ, ಇನ್‍ಸ್ಪೆಕ್ಟರ್ ಗಳ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಗಿದ್ದು, ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರ್, ಇಬ್ಬರು ಅಳಿಯಂದಿರು, ಒಬ್ಬ ಸಂಬಂಧಿಕ ಸಹ ಇದ್ದರು. ಪರಿಶೀಲನೆ ವೇಳೆ ಮಧುಸಾಗರ್, ಸಿಂಚನ, ಸಿಂಧುರಾಣಿ ಮೂವರ ಡೆತ್ ನೋಟ್ ಗಳು ಪತ್ತೆಯಾಗಿವೆ. ಮೂವರು ಸಹ ಅಪ್ಪನ ವಿರುದ್ಧ ಆರೋಪ ಮಾಡಿದ್ದು, ತಂದೆಯ ಅನೈತಿಕ ಸಂಬಂಧ, ದೌರ್ಜನ್ಯ ನಡೆಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ.

ಸಾವಿನ ಸಂಬಂಧ ಇನ್ನೂ ಕೆಲ ಸಾಕ್ಷ್ಯಗಳು ಲ್ಯಾಪ್ ಟಾಪ್ ನಲ್ಲಿ ಇರುವ ಶಂಕೆ ಇದೆ. ಹೀಗಾಗಿ ಅವುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. 9 ತಿಂಗಳ ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಸಿಂಧುರಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸಹ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಾಧ್ಯತೆ

ಮನೆಯ ರೂಮ್‍ಗಳಲ್ಲಿ ಅಲ್ಲಲ್ಲಿ ನೋಟುಗಳು ಹರಿದು ಬಿದ್ದಿದ್ದವು. ಬಹುತೇಕ ಎಲ್ಲರೂ ಶಂಕರ್ ಮೇಲೆಯೇ ಆರೋಪ ಮಾಡಿದ್ದಾರೆ. ಅಪ್ಪ ಸರಿಯಿಲ್ಲ ಎಂದು ದೂರಿದ್ದಾರೆ. ಹೀಗಾಗಿ ಮನೆ ಮಾಲೀಕ ಶಂಕರ್ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪಡಿ ಕೇಸ್ ದಾಖಲಾಗುವ ಸಾಧ್ಯತೆ ಹೆಚ್ಚಿದೆ.

ಡೆತ್ ನೋಟ್‍ನಲ್ಲಿ ಏನಿದೆ?
ಅಪ್ಪನಿಗೆ ಅನೈತಿಕ ಸಂಬಂಧ ಇತ್ತು, ಇದರಿಂದ ಸಂಸಾರದಲ್ಲಿ ಗಲಾಟೆಗಳು ನಡೆಯುತ್ತಿದ್ದವು. ಅಪ್ಪ ಸರಿಯಾಗಿ ಇದ್ದಿದ್ದರೆ ನಾವ್ಯಾಕೆ ಸಾಯುವ ಯೋಚನೆ ಮಾಡಬೇಕಿತ್ತು. ನಾವೆಲ್ಲ ಸಾಯುವುದಕ್ಕೆ ಅಪ್ಪ ಅಕ್ರಮ ಸಂಬಂಧ ಹೊಂದಿರುವುದೇ ಕಾರಣ ಎಂದು ಮಧುಸಾಗರ್ ಡೆತ್‍ನೋಟ್‍ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹದಿಂದ್ಲೇ ಸಾಮೂಹಿಕ ಆತ್ಮಹತ್ಯೆ – ದುರಂತಕ್ಕೆ ಪತ್ನಿಯೇ ಕಾರಣವೆಂದ ಪತಿ ಶಂಕರ್

ಅಪ್ಪ ಮತ್ತು ಪತಿಯಂದಿರು ಕಿರುಕುಳ ಕೊಡುತ್ತಿದ್ದರು. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದೆವು. ಗಂಡನ ಮನೆಯಲ್ಲೂ ಸುಖ ಸಿಗಲಿಲ್ಲ, ತವರು ಮನೆಯಲ್ಲೂ ಸುಖ ಸಿಗಲಿಲ್ಲ, ಇನ್ಯಾವ ಖುಷಿಗೆ ಬದುಕಬೇಕು. ಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಇಲ್ಲಿಗಾದ್ರೂ ಕೊನೆಯಾಗಲಿ ಎಂದು ಸಿಂಚನ, ಸಿಂಧುರಾಣಿ ಡೆತ್ ನೋಟ್ ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *