ಫಡ್ನವಿಸ್, ಅಜಿತ್ ಪವಾರ್ ಪದಗ್ರಹಣಕ್ಕೆ ಬಂದಿದ್ದ ಎನ್‍ಸಿಪಿ ಶಾಸಕ ನಾಪತ್ತೆ

Public TV
1 Min Read

ಮುಂಬೈ: ಮಹಾರಾಷ್ಟ್ರ ಸರ್ಕಾರ ರಚನೆ ಮಾಡಲು ಬಿಜೆಪಿ, ಎನ್‍ಸಿಪಿ ಜೊತೆಗೂಡಿದೆ. ಶನಿವಾರ ದೇವೇಂದ್ರ ಫಡ್ನವಿಸ್ ಸಿಎಂ ಆಗಿ, ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದಾರೆ. ಈ ಮಧ್ಯೆ ಪ್ರಮಾಣವಚನ ಕಾರ್ಯಕ್ರಮಕ್ಕಾಗಿ ರಾಜಭವನಕ್ಕೆಂದು ತೆರೆಳಿದ್ದ ಎನ್‍ಸಿಪಿ ಎಂಎಲ್‍ಎ ಒಬ್ಬರು ನಾಪತ್ತೆಯಾಗಿದ್ದಾರೆ.

ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ದಿಢೀರ್ ಬೆಳವಣಿಗೆಯಿಂದ ಬಿಜೆಪಿ, ಎನ್‍ಸಿಪಿ ಜೊತೆಗೂಡಿ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಆದರೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಪ್ರಮಾಣವಚನ ಕಾರ್ಯಕ್ರಮಕ್ಕೆಂದು ಬಂದಿದ್ದ ಶಹಾಪುರ ಎನ್‍ಸಿಪಿ ಎಂಎಲ್‍ಎ ದೌಲತ್ ದರೋಡಾ ನಾಪತ್ತೆಯಾಗಿದ್ದಾರೆ.

ಶುಕ್ರವಾರ ರಾತ್ರಿ ಶಹಪುರದಿಂದ ಮಗ ಕರಣ್ ಜೊತೆ ದೌಲತ್ ಅವರು ಥಾನೆಗೆ ಹೊರಟಿದ್ದರು. ಥಾನೆಯಿಂದ ಅಪ್ಪ ಮಗ ಒಟ್ಟಿಗೆ ಮುಂಬೈ ತಲುಪಿದ್ದರು. ಆದರೆ ಶನಿವಾರ ಬೆಳಗ್ಗೆಯಿಂದ ದೌಲತ್ ಅವರ ಫೋನ್ ನಾಟ್‍ರಿಚೇಬಲ್ ಆಗಿದೆ. ಜೊತೆಗಿದ್ದ ಮಗನಿಗು ಕೂಡ ತಂದೆ ಎಲ್ಲಿ ಹೋದರು ಎಂಬುದು ತಿಳಿದಿಲ್ಲ.

ಈ ಹಿನ್ನೆಲೆ ಮಾಜಿ ಎಂಎಲ್‍ಎ ಪಾಂಡುರಂಗ್ ಬರೋರಾ ಅವರು ದೌಲತ್ ಅವರು ನಾಪತ್ತೆಯಾಗಿದ್ದಾರೆ ಎಂದು ಶಹಾಪುರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಶನಿವಾರ ಬೆಳಗ್ಗೆ ಮುಂಬೈ ತಲುಪಿದಾಗಿನಿಂದ ತಂದೆ ನನ್ನ ಸಂಪರ್ಕಕ್ಕೆ ಸಿಕ್ಕಿಲ್ಲ. ಇಬ್ಬರೂ ಜೊತೆಗೂಡಿಯೇ ಮುಂಬೈ ಹೋಗಿದ್ದೆವು. ಆದರೆ ಇದ್ದಕ್ಕಿದ್ದ ಹಾಗೆ ತಂದೆ ನಾಪತ್ತೆಯಾಗಿದ್ದಾರೆ ಎಂದು ಕರಣ್ ಪೊಲೀಸರಿಗೆ ತಿಳಿಸಿದ್ದಾರೆ.

ಈ ಹಿಂದೆ ಬಿಜೆಪಿಗೆ ಬೆಂಬಲಿಸುವ ಬದಲು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ಬೆಂಬಲಿಸಿ ಎಂದು ನಾನು ಅಪ್ಪನಿಗೆ ಹೇಳಿದ್ದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ ಎಂದು ಕರಣ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *