ಐಶ್ವರ್ಯಾ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆದ ಶಾರೂಕ್

Public TV
1 Min Read

ಮುಂಬೈ: ಬಾಲಿವುಡ್ ಬಾದ್‍ಶಾ ಶಾರೂಕ್ ಖಾನ್, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮ್ಯಾನೇಜರ್ ಜೀವ ಉಳಿಸಿ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

ದೀಪಾವಳಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್‍ನ ಹಲವು ಕಲಾವಿದರು ಸೇರಿದಂತೆ ಕ್ರಿಕೆಟ್ ಆಟಗಾರರು ಕೂಡ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಶಾರೂಕ್, ಐಶ್ವರ್ಯಾ ರೈ ಅವರ ಮ್ಯಾನೇಜರ್ ಅವರನ್ನು ಬೆಂಕಿ ಅವಘಡದಿಂದ ಪಾರು ಮಾಡಿದ್ದಾರೆ.

ಐಶ್ವರ್ಯಾ ರೈ ಮ್ಯಾನೇಜರ್ ಅರ್ಚನಾ ಸದಾನಂದ್ ಅವರು ತಮ್ಮ ಮಗಳೊಂದಿಗೆ ಗಾರ್ಡನ್‍ನಲ್ಲಿ ನಿಂತಿದ್ದರು. ಈ ವೇಳೆ ಅವರು ಧರಿಸಿದ್ದ ಲೆಹೆಂಗಾಗೆ ಅಲ್ಲಿದ್ದ ದೀಪದ ಬೆಂಕಿಯ ಕಿಡಿ ತಾಕಿತ್ತು. ಇದನ್ನು ಗಮನಿಸಿದ ಶಾರೂಕ್ ತಕ್ಷಣ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಬೆಂಕಿಯನ್ನು ಆರಿಸುವ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ.

ಈ ಘಟನೆಯಲ್ಲಿ ಅರ್ಚನಾ ಅವರ ಕೈ ಹಾಗೂ ಬಲಗಾಲಿಗೆ ಶೇ. 15ರಷ್ಟು ಸುಟ್ಟು ಗಾಯವಾಗಿದೆ. ಅಲ್ಲದೆ ಶಾರೂಕ್ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಗೊಂಡಿರುವ ಅರ್ಚನಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಶಾರೂಕ್ ಅವರ ಈ ಕಾರ್ಯಕ್ಕೆ ಅಲ್ಲಿದ್ದ ಕಲಾವಿದರು ಮೆಚ್ಚುಗೆ ಸೂಚಿಸಿದ್ದು, ಸಮಯ ಪ್ರಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಇದೇ ವೇಳೆ ತಿಲಕ ಇಟ್ಟುಕೊಂಡು ಫೋಟೋ ಹಂಚಿಕೊಂಡಿದ್ದ ನಟ ಶಾರೂಕ್ ಖಾನ್ ಮುಸ್ಲಿಂ ಸಮುದಾಯದವರಿಂದ ಟೀಕೆಗೆ ಗುರಿಯಾಗಿದ್ದರು.

ಶಾರೂಕ್ ಖಾನ್ ಅವರ ಪತ್ನಿ ಗೌರಿ ಅವರು ಹಿಂದೂ ಆಗಿದ್ದು, ಪ್ರತಿ ವರ್ಷ ಅವರ ಮನೆಯಲ್ಲಿ ಗಣೇಶ್ ಹಬ್ಬ ಸೇರಿದಂತೆ, ದೀಪಾವಳಿಯನ್ನು ಆಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪತ್ನಿ ಹಾಗೂ ಪುತ್ರ ಅಬ್ರಾಮ್ ಖಾನ್‍ರೊಂದಿಗೆ ಹಣೆಗೆ ತಿಲಕ ಇಟ್ಟು ಶಾರೂಕ್ ಖಾನ್ ಫೋಟೋ ಹಂಚಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *