ಹಿಜಬ್ ಧರಿಸಿದ್ದಕ್ಕಾಗಿ ಭಯಭೀತಗೊಳಿಸುವುದು ದಬ್ಬಾಳಿಕೆ, ಮುಸಲ್ಮಾನರ ಶೋಷಣೆಯಾಗಿದೆ: ಪಾಕ್‌ ಸಚಿವ

Public TV
1 Min Read

ಇಸ್ಲಾಮಾಬಾದ್: ಹಿಜಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸಲ್ಮಾನರ ಶೋಷಣೆಯಾಗಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಮಹಮೂದ್ ಖುರೇಷಿ ಹೇಳಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?: ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗುವುದು ಮೂಲಭೂತ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಮೂಲಕವಾಗಿ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಬ್ ಧರಿಸಿದ್ದಕ್ಕಾಗಿ ಅವರನ್ನು ಭಯಭೀತಗೊಳಿಸುವುದು ಸಂಪೂರ್ಣವಾಗಿ ದಬ್ಬಾಳಿಕೆಯಾಗಿದೆ. ಇದು ಮುಸಲ್ಮಾನರ ಶೋಷಣೆಯಾಗಿದೆ. ಭಾರತ ಸರ್ಕಾರ ಈ ವಿವಾದದ ಭಾಗವಾಗಿದೆ ಎಂಬುದನ್ನು ಜಗತ್ತು ಅರಿತುಕೊಳ್ಳಬೇಕು ಎಂದು ಆರೋಪಿಸಿದ್ದಾರೆ.

ವಿಶೇಷವೆಂದರೆ ಇಡೀ ಏಷ್ಯಾದಲ್ಲಿಯೇ ಮುಸ್ಲಿಂ ಹೆಣ್ಣುಮಕ್ಕಳ ಅನಕ್ಷರತೆ ಹೆಚ್ಚಿರೋ ದೇಶಗಳಲ್ಲಿ ಪಾಕಿಸ್ಥಾನ ಅಗ್ರ ಸ್ಥಾನದಲ್ಲಿದ್ದು, ಭಾರತಕ್ಕೆ ಬುದ್ಧಿ ಹೇಳೋಕೆ ಬಂದಿರೋದು ಮಾತ್ರ ದ್ವಂದ್ವ ನೀತಿಯ ಪರಾಕಾಷ್ಠೆಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಬಿಕಿನಿ, ಜೀನ್ಸ್, ಹಿಜಬ್ ಹೀಗೆ ತಾನು ಏನು ಧರಿಸಬೇಕೆಂದು ನಿರ್ಧರಿಸುವುದು ಮಹಿಳೆಯ ಹಕ್ಕು : ಪ್ರಿಯಾಂಕಾ ಗಾಂಧಿ

ಕರ್ನಾಟಕದಲ್ಲಿ ಹಿಜಬ್ ಧರಿಸಿ ಕಾಲೇಜು ಕ್ಯಾಂಪಸ್ ಒಳಗೆ, ಕ್ಲಾಸ್‍ರೂಮ್‍ನೊಳಗೆ ಬರಬೇಡಿ ಎಂದು ಹೇಳಿದ್ದಕ್ಕೆ ಮುಸ್ಲಿಂ ಹುಡುಗಿಯರು ಪ್ರತಿಭಟನೆ ಶುರುವಿಟ್ಟುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಹಿಂದೂ ಸಮುದಾಯದವರು ಕೇಸರಿಶಾಲು ಹಾಕಿಕೊಂಡು ಬರುತ್ತಿದ್ದಾರೆ. ಅವರು ಕ್ಲಾಸ್‍ರೂಮ್‌ನಲ್ಲೂ ಧರ್ಮಾಚರಣೆ ಮಾಡುತ್ತಾರೆ ಎಂದಾದರೆ, ನಾವೂ ನಮ್ಮ ಧರ್ಮಾಚರಣೆ ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಒಟ್ಟಿನಲ್ಲಿ ಇದೀಗ ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹಿಜಬ್-ಕೇಸರಿಶಾಲು ವಿವಾದ ತಾರಕಕ್ಕೇರಿದ ಪರಿಣಾಮ ಕರ್ನಾಟಕದಲ್ಲಿ ಇಂದಿನಿಂದ ಮೂರು ದಿನ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *