ಬೆಂಗಳೂರು: ಉದ್ಯಮಿಯೋರ್ವ ಸ್ಯಾಂಡಲ್ವುಡ್ ನಟಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪ ಪ್ರಕರಣದಡಿ ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಸಂತ್ರಸ್ತ ನಟಿ ಲೈಂಗಿಕ ಕಿರುಕುಳ ನೀಡಿದ ಸಂಬಂಧ ಅರವಿಂದ್ ರೆಡ್ಡಿ ವಿರುದ್ಧ ಆರ್ಆರ್ ನಗರ (RR Nagar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣ ಗೋವಿಂದರಾಜನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಅದರಂತೆ ಆರೋಪಿಯನ್ನು ಬಂಧಿಸಲಾಗಿತ್ತು. ಬಳಿಕ 46 ಎಸಿಎಂಎಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ಈ ಸಂಬಂಧ ಪೊಲೀಸರು ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್ ನೀಡಿದ್ದಾರೆ.ಇದನ್ನೂ ಓದಿ: ನಾನು ಬಯಸಿದಾಗ ನನ್ನೊಟ್ಟಿಗಿರಲಿಲ್ಲ, ದೂರ ಹೋಗ್ಬೇಕು ಅಂದಾಗ ಹತ್ತಿರ ಬರ್ತಿದ್ರು: ಸಂತ್ರಸ್ತ ನಟಿ ಭಾವುಕ
ನಟಿ ಈಗಾಗಲೇ ದೂರಿನಲ್ಲಿ, ಅರವಿಂದ್ ರೆಡ್ಡಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಎಷ್ಟೇ ದೂರ ಸರಿದ್ರೂ, ಹಿಂದೆ ಬಿದ್ದು ನನ್ನ ಜೊತೆಗೆ ಸಲುಗೆಯಿಂದ ಇರುವಂತೆ ಒತ್ತಾಯ ಮಾಡ್ತಿದ್ದಾರೆ. ನನ್ನ ಕೆಲ ಫೋಟೋಗಳು ಮತ್ತು ನನ್ನ ಬಗ್ಗೆ ಸ್ನೇಹಿತರು ಕುಟುಂಬದವರ ಬಳಿ ಕೆಟ್ಟದಾಗಿ ಹೇಳ್ಕೊಂಡು ಬರ್ತಿದ್ದಾರೆ. ಅಷ್ಟೇ ಅಲ್ಲದೇ ಲೈಂಗಿಕವಾಗಿ ಕಿರುಕುಳ ನೀಡ್ತಿದ್ದಾರೆ ಎಂದು ಆರೋಪಿಸಿದ್ದರು.
ಇನ್ನೂ ಆರೋಪಿ ಅರವಿಂದ್ ರೆಡ್ಡಿ, ನಟಿ ಮತ್ತು ನಾನು ಎರಡು ವರ್ಷದಿಂದ ಲಿವಿ ಇನ್ ರಿಲೇಶನ್ಶಿಪ್ನಲ್ಲಿ ಇದ್ದೆವು. ಈ ವೇಳೆ ಆಕೆಗೆ ಐಷಾರಾಮಿ ಕಾರು, ಸೈಟ್, ಮನೆ ಸೇರಿದಂತೆ ಐದು ಕೋಟಿ ರೂ.ಯಷ್ಟು ಖರ್ಚು ಮಾಡಿದ್ದೀನಿ. ಲಿವಿಂಗ್ನಿಂದ ಮದುವೆ ಆಗೋಣ ಅಂದಿದ್ದಕ್ಕೆ ನನ್ನ ವಿರುದ್ಧ ಆರೋಪ ಮಾಡ್ತಿದ್ದಾಳೆ. ಆಕೆ ಬೇರೊಬ್ಬ ವ್ಯಕ್ತಿಯ ಜೊತೆಗೆ ಓಡಾಡ್ತಿದ್ದಾಳೆ ಎಂದು ತಿಳಿಸಿದ್ದರು.ಇದನ್ನೂ ಓದಿ: ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು, ಅದಕ್ಕೆ ದೂರಾದೆ – ನಟಿ ಆರೋಪಕ್ಕೆ ಅರವಿಂದ್ ರೆಡ್ಡಿ ಪ್ರತಿಕ್ರಿಯೆ
ಪೊಲೀಸರು ಆರೋಪಿ ಯಾವಾಗಿನಿಂದ ಪರಿಚಯ, ಯಾವ ರೀತಿ ಕಿರುಕುಳ ನೀಡಿದ್ದಾನೆ, ಅರವಿಂದ್ ರೆಡ್ಡಿ ಎಷ್ಟು ಹಣ ನೀಡಿದ್ದಾರೆ ಎನ್ನುವ ಕುರಿತು ವಿಚಾರಣೆ ನಡೆಸಲಿದ್ದಾರೆ. ಈವರೆಗೆ ನಟಿ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ದಾಖಲೆ ನೀಡಿಲ್ಲ. ಹೀಗಾಗಿ ಅದಕ್ಕೆ ಪೂರಕವಾದ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಏನಿದು ಪ್ರಕರಣ?
ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅರವಿಂದ್ ರೆಡ್ಡಿ ಮಹಾರಾಜ ಬಳ್ಳಾರಿ ಟಸ್ಕರ್ಸ್ ಕ್ರಿಕೆಟ್ ತಂಡದ ಮಾಲೀಕನಾಗಿದ್ದ. ಜೊತೆಗೆ ಎವಿಆರ್ ಗ್ರೂಪ್ ಮಾಲೀಕನಾಗಿದ್ದ. ಅಲ್ಲದೇ ಚಲನಚಿತ್ರ ನಿರ್ಮಾಪಕ ಆಗಿರುವ ಅರವಿಂದ್ ರೆಡ್ಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದ. ಚಲನಚಿತ್ರ ನಟ, ನಟಿಯರಿಗಾಗಿಯೇ ಹಲವು ಕ್ರಿಕೆಟ್ ಪಂದ್ಯಾವಳಿ ಕೂಡ ಆಯೋಜಿಸಿದ್ದ. ಅರವಿಂದ್ ರೆಡ್ಡಿ ಒಡೆತನದ ಎವಿಆರ್ ಗ್ರೂಪ್ ದುಬೈ, ಶ್ರೀಲಂಕಾ ಸೇರಿದಂತೆ ಹಲವು ಕಡೆ ನಡೆದ ಟೂರ್ನಮೆಂಟ್ಗೆ ಸ್ಪಾನ್ಸರ್ ಮಾಡಿತ್ತು. 2021ರಲ್ಲಿ ನಟಿ ಹಾಗೂ ಅರವಿಂದ್ಗೆ ಪರಿಚಯವಾಗಿತ್ತು. ಅದಾದ ಕೆಲವು ವರ್ಷಗಳ ಬಳಿಕ ಆತ ಮಾನಸಿಕ ಹಾಗೂ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ. ಈ ಕುರಿತು ನಟಿ ಆರೋಪಿ ವಿರುದ್ಧ ದೂರು ದಾಖಲಿಸಿದ್ದರು.ಇದನ್ನೂ ಓದಿ:ನನ್ನ ಕೆಪಾಸಿಟಿ ಇದ್ದಿದ್ದು 10,000 ರೂ. – ಖರ್ಚು ಮಾಡಿದಷ್ಟೂ ಹಣ ವಾಪಸ್ ಕೊಡುವ ತಾಕತ್ತು ಇಲ್ಲ: ಸಂತ್ರಸ್ತ ನಟಿ
