ಸ್ಟಾರ್ ಮಸಾಜ್ : ಮಂಡ್ಯ ರಮೇಶ್, ಸಾಧು ವಿರುದ್ಧ ಯುವತಿಯಿಂದ ದೂರು

Public TV
3 Min Read

ಮೈಸೂರು: ಮಸಾಜ್ ಸೆಂಟರ್ ನಲ್ಲಿ  ಲೈಂಗಿಕ ದೌರ್ಜನ್ಯ ಕೇಸ್‍ಗೆ ಟ್ವಿಸ್ಟ್ ಸಿಕ್ಕಿದ್ದು ದೌರ್ಜನ್ಯಕ್ಕೆ ಒಳಗಾದ ಯುವತಿ ಕನ್ನಡದ ಹಾಸ್ಯ ನಟರಾದ ಸಾಧುಕೋಕಿಲ ಮತ್ತು ಮಂಡ್ಯ ರಮೇಶ್ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.

ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿರುವ ಸ್ಪಾ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾ ನಲ್ಲಿದ್ದ ಓರ್ವ ಯುವತಿಯನ್ನು ರಕ್ಷಿಸಿ, ಸ್ಪಾ ಮಾಲೀಕ ರಾಜೇಶ್ ನನ್ನು ಬಂಧಿಸಿದ್ದರು.  ಇದೇ ವೇಳೆ ಹಾಸ್ಯ ನಟರಾದ ಸಾಧು ಕೋಕಿಲ ಮತ್ತು ಮಂಡ್ಯ ರಮೇಶ್ ಸಹ ಈ ಕೇಂದ್ರಕ್ಕೆ ಆಗಮಿಸಿ ನನ್ನ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಯುವತಿ ಆರೋಪಿಸಿ ಈಗ ದೂರು ನೀಡಿದ್ದಾಳೆ.

ದೂರಿನಲ್ಲಿ ಏನಿದೆ?
ಬಾಡಿ ಮಸಾಜ್ ಹೆಸರಲ್ಲಿ ಸಾಧು ಕೋಕಿಲ, ಮಂಡ್ಯ ರಮೇಶ್ ಬಂದು ಕಿರುಕುಳ ನೀಡಿದ್ದಾರೆ. ಮಸಾಜ್ ಪಾರ್ಲರ್ ಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ಈ ವೇಳೆ ತಮ್ಮ ಖಾಸಗಿ ಅಂಗಗಳನ್ನು ಮುಟ್ಟುವಂತೆ ಒತ್ತಾಯಸಿದ್ದರು. ಅಷ್ಟೇ ಅಲ್ಲದೇ ನನ್ನ ಗುಪ್ತಾಂಗವನ್ನು ಮುಟ್ಟುತ್ತಿದ್ದರು. ಹಣದ ಆಮಿಷ ತೋರಿಸಿ ಇಬ್ಬರೂ ಲೈಂಗಿಕ ಸುಖಕ್ಕೆ ಒತ್ತಾಯಿಸಿದ್ದರು. ನಾನು ಒಪ್ಪದೇ ಇದ್ದಾಗ ಮಾಲೀಕನಿಗೆ ಹೇಳುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ನೊಂದ ಯುವತಿ ಲಿಖಿತ ದೂರು ನೀಡಿದ್ದಾಳೆ.

ಬ್ಯೂಟಿ ಪಾರ್ಲರ್ ಅಂತಾ ಕೆಲಸಕ್ಕೆ ಕರೆತಂದಿದ್ದರು. ಮಸಾಜ್ ಮಾಡುವ ಕೆಲಸವೆಂದು ನನಗೆ ಗೊತ್ತಿರಲಿಲ್ಲ. ಪಾಂಡವಪುರದ ಬಳೆ ಅಂಗಡಿಯಲ್ಲಿ ಪರಿಚಯವಾಗಿದ್ದು, ನನ್ನನ್ನು ಇಲ್ಲಿ ಕೆಲಸಕ್ಕೆ ಸೇರಿಸಿದ್ದರು. ನನಗೆ ತೊಂದರೆ ಆಗುತ್ತಿದೆ ಅಂತಾ ಹೇಳಿದ್ದಕ್ಕೆ ಅವರು ಹೇಳಿದಂತೆ ಸಹಕರಿಸು ಎಂದು ಮಾಲೀಕ ರಾಜೇಶ್ ಹೇಳಿದ್ದ. ಅವನು ಕೂಡ ನನ್ನ ಮೇಲೆ ಅತ್ಯಾಚಾರಕ್ಕೆ ಪ್ರಯತ್ನ ಮಾಡಿದ್ದ. ಪಾರ್ಲರ್ ಗೆ ಬೆಂಗಳೂರಿನಿಂದ ಮೂವರು ಪೊಲೀಸ್ ಅಧಿಕಾರಿಗಳು ಬಂದಿದ್ದರು. ಅವರೂ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅವರು ಯಾರೆಂದು ನನಗೆ ಗೊತ್ತಿಲ್ಲ. ಆದರೆ ರಾಜೇಶ್ ಇದನ್ನ ನನ್ನ ಬಳಿ ಹೇಳಿ ಸಹಕರಿಸುವಂತೆ ತಾಕೀತು ಮಾಡುತ್ತಿದ್ದ ಎಂದು ದೂರಿನಲ್ಲಿ ಹೇಳಿದ್ದಾಳೆ.

ನೊಂದ ಯುವತಿ ಈ ಹಿಂದೆ ಮೈಸೂರಿನ ಒಡನಾಡಿ ಸಂಸ್ಥೆಗೆ ಪತ್ರದ ಮೂಲಕ ತನ್ನ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ತಿಳಿಸಿದ್ದಳು. ಪತ್ರದ ಮಾಹಿತಿ ಪಡೆದ ಒಡನಾಡಿ ಸಂಸ್ಥೆ ಸರಸ್ವತಿಪುರಂ ಠಾಣೆಯ ಪೊಲೀಸರು ಹಾಗೂ ಮಹಿಳಾ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಯುವತಿಯನ್ನ ರಕ್ಷಿಸಲಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಳ್ಳಿಯೊಂದರ ನಿವಾಸಿಯಾಗಿರುವ ಯುವತಿ ಸಿನಿಮಾಗಳಲ್ಲಿ ಅವಕಾಶ ಕೊಡಿಸಲಾಗುತ್ತದೆ ಎಂದು ನಂಬಿಸಿ ಸ್ಪಾ ಮಾಲೀಕ ರಾಜೇಶ್ ಮೈಸೂರಿಗೆ ಕರೆದುಕೊಂಡು ಬಂದಿದ್ದನು. ಸಿನಿಮಾದಲ್ಲಿ ಅವಕಾಶ ಸಿಗುವರೆಗೂ ಸ್ಪಾ ನಲ್ಲಿ ಫ್ರೀಯಾಗಿ ಕೆಲಸ ಮಾಡಬೇಕೆಂದು ಷರತ್ತು ವಿಧಿಸಲಾಗಿತ್ತು. ರಾಜೇಶ್ ಈ ಹಿಂದೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದ ಎಂದು ಒಡನಾಡಿ ಸಂಸ್ಥೆಯ ಮುಖ್ಯಸ್ಥ ಪರಶು ಹೇಳಿದ್ದಾರೆ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯುವತಿ, ಮಸಾಜ್ ಸೆಂಟರ್ ಗೆ ಬಂದವರು ಸಾಧುಕೋಕಿಲಾ, ಮಂಡ್ಯ ರಮೇಶ್ ಎನ್ನುವುದು ನನಗೆ ಆರಂಭದಲ್ಲಿ ತಿಳಿದಿರಲಿಲ್ಲ. ಆದರೆ ನಂತರ ಚಲನ ಚಿತ್ರಗಳಲ್ಲಿ ಇವರು ಅಭಿನಯಿಸುರುವುದನ್ನು ನೋಡಿದ ಬಳಿಕ ಇಲ್ಲಿಗೆ ಬಂದವರು ಅವರೇ ಎನ್ನುವುದು ಗೊತ್ತಾಯಿತು ಎಂದು ಹೇಳಿದ್ದಾಳೆ.

ಪೊಲೀಸರ ವಿರುದ್ಧ ದೂರು: ಸೆಕ್ಸ್ ಸ್ಕ್ಯಾಂಡಲ್ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಯತ್ನಿಸಿದ್ದಾರೆ ಎಂದು ಆರೋಪಿಸಿ ಒಡನಾಡಿ ಸಂಸ್ಥೆ ದೂರು ನೀಡಿದೆ. ಸರಸ್ವತಿಪುರಂ ಪೊಲೀಸ್ ಠಾಣೆ ಹೆಡ್ ಕಾನ್ಸ್ ಟೇಬಲ್ ಧನಪಾಲ್ ವಿರುದ್ಧ  ಒಡನಾಡಿ ಸಂಸ್ಥೆಯ ಗಾಯಿತ್ರಿದೇವಿ ದೂರು ದಾಖಲು ಮಾಡಿದ್ದಾರೆ.

ಒಂದೇ ವಾಹನದಲ್ಲಿ ಆರೋಪಿ ಹಾಗೂ ಸಂತ್ರಸ್ತೆಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ಆರೋಪಿ ರಾಜೇಶ್ ಸಂತ್ರಸ್ತ ಯುವತಿಯ ಕಾಲು ಹಿಡಿದು ಕ್ಷಮಾಪಣೆ ಕೇಳಲು ಪೊಲೀಸರು ಅವಕಾಶ ನೀಡಿದ್ದಾರೆ. ಯುವತಿಯ ಮನವೊಲಿಸಲು ಪೊಲೀಸರೇ ಪ್ರೇರಣೆ ನೀಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

https://www.youtube.com/watch?v=xm-cMvGLmvQ

ರಾಜೇಶ್- ಸ್ಪಾ ಸೆಂಟರ್ ಮಾಲೀಕ

 

Share This Article
Leave a Comment

Leave a Reply

Your email address will not be published. Required fields are marked *