ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

Public TV
1 Min Read

ವಿಜಯಪುರ: ಸಲಾಕೆ, ಬುಟ್ಟಿ ಹಿಡಿದು ಚರಂಡಿಯಿಂದಾದ ರಾಡಿಯನ್ನು ಸ್ವತಃ ಶಾಸಕ ದೇವಾನಂದ ಚವ್ಹಾಣ ಸ್ವಚ್ಛಗೊಳಿಸಿದ್ದಾರೆ. ಎಷ್ಟೇ ಸೂಚಿಸಿದರೂ ಮಹಾನಗರ ಪಾಲಿಕೆ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಖುದ್ದು ಶಾಸಕರೇ ಸ್ವಚ್ಛಗೊಳಿಸಿದ್ದಾರೆ.

ನಗರದ ನಾಗಠಾಣ ಮತಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ.15ರ ಕಾವಿ ಪ್ಲಾಟ್ ನಲ್ಲಿ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಸ್ವಚ್ಛಗೊಳಿಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕಾವಿ ಪ್ಲಾಟ್ ನಲ್ಲಿ ಚರಂಡಿ ನೀರು ರಸ್ತೆ ಹಾಗೂ ಕೆಲ ಮನೆಗಳಿಗೆ ನುಗ್ಗಿತ್ತು. ಇದರ ಬಗ್ಗೆ ಸಾರ್ವಜನಿಕರು ಶಾಸಕ ದೇವಾನಂದ ಅವರಿಗೆ ಅನೇಕ ಬಾರಿ ದೂರು ನೀಡಿದ್ದರು. ಅಲ್ಲದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆ ಆಯುಕ್ತರನ್ನು ಸ್ಥಳಕ್ಕೆ ಕರೆದೊಯ್ದು ಪರಿಸ್ಥಿತಿ ತೋರಿಸಿ, ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಇದನ್ನೂ ಓದಿ:ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

ಇಷ್ಟಾದರೂ ಯಾವುದೇ ಪ್ರಯೋಜನ ಆಗದ ಕಾರಣ ಖುದ್ದು ಶಾಸಕ ದೇವಾನಂದ ಚವ್ಹಾಣ ಸಲಾಕೆ, ಬುಟ್ಟಿ ಹಿಡಿದು ಸ್ವಚ್ಛತೆಗೆ ಮುಂದಾದರು. ಆಗ ದೌಡಾಯಿಸಿದ ಮಹನಾಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ದೇವಾನಂದ ತರಾಟೆಗೆ ತಗೆದುಕೊಂಡರು.

ಈ ಸಮಸ್ಯೆ ಮಳೆ ಬಂದಾಗೆಲಲ್ಲ ಆಗುತ್ತೆ, ಶಾಶ್ವತ ಪರಿಹಾರ ಒದಗಿಸಿ ಎಂದು ಸೂಚಿಸಿದರು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದಾಗಿ ಮಹನಗರ ಪಾಲಿಕೆ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಶಾಸಕ ದೇವಾನಂದ ಹಿಂದಿರುಗಿದರು.

Share This Article
Leave a Comment

Leave a Reply

Your email address will not be published. Required fields are marked *