ನಿಖಿಲ್ ಸೋಲಿಸಲು ಜೆಡಿಎಸ್ ಮುಖಂಡರೇ ಸ್ಕೆಚ್?

Public TV
1 Min Read

– ತಟಸ್ಥ ಎಂದಿದ್ದ ಕಾಂಗ್ರೆಸಿಗರ ಗುಟ್ಟು ರಟ್ಟು!

ಮಂಡ್ಯ: ಲೋಕಾಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸುಮಲತಾ ಅವರಿಗೆ ಬೆಂಬಲ ನೀಡಿದ್ದು, ಮೇ 23 ರಂದು ಬರುವ ಫಲಿತಾಂಶದಲ್ಲಿ ಖಂಡಿತ ಸುಮಲತಾ ಅವರಿಗೆ ಜಯ ಸಿಗಲಿದೆ ಎಂದು ಉಚ್ಚಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರ ಚಲುವರಾಯಸ್ವಾಮಿ ಸೇರಿದಂತೆ ಮಂಡ್ಯದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿಗಳು ಹಾಗೂ ಜೆಡಿಎಸ್ ನಾಯಕರು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇರೆ ಯಾವುದೇ ಅವಕಾಶ ಇರಲಿಲ್ಲ. ಅಲ್ಲದೇ ಕಾಂಗ್ರೆಸ್ ನಾಯಕರಿಗೆ ಯಾವಾಗಲೂ ಪಕ್ಷದ ಕಾರ್ಯಕರ್ತರೇ ಶಕ್ತಿ. ಆದ್ದರಿಂದ ಕಾರ್ಯಕರ್ತರ ಹಿನ್ನೆಲೆಯಲ್ಲಿ ಅವರು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಚಲುವರಾಯಸ್ವಾಮಿ, ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳ ಬೆಂಬಲಿಗರು 100ಕ್ಕೆ 100ರಷ್ಟು ಸುಮಲತಾ ಪರ ಕೆಲಸ ಮಾಡಿದ್ದಾರೆ. ಬೆಂಬಲಿಗರು ಕೆಲಸ ಮಾಡಿದ್ದಾರೆ ಅಂದ ಮೇಲೆ ನಾಯಕರಿಗೆ ಹೇಳದೇ ಮಾಡುವುದಿಲ್ಲ. ಸುಮಲತಾ ಪರ ಚುನಾವಣೆ ಮಾಡುವುದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿಗಳಿಗೆ ಅನಿವಾರ್ಯವಾಗಿತ್ತು ಎಂದಿದ್ದಾರೆ.

ಮಂಡ್ಯ ಕ್ಷೇತ್ರದ ಅಭ್ಯರ್ಥಿ ಪರ ಮಾಧ್ಯಮಗಳಲ್ಲಿ ಯಾವುದೇ ಚರ್ಚೆ ಆದ್ರು, ಈ ಬಾರಿ ಕ್ಷೇತ್ರದಲ್ಲಿ ನಮ್ಮ ಗೆಲುವು ನಿಶ್ಚಿತ. ಏಕೆಂದರೆ ಜನ ನಮ್ಮ ಜೊತೆ ಇದ್ದರು. ನೀವು ಹೇಳಿದ ನಾಯಕರು ಕೂಡ ನಮ್ಮ ಪರ ಇದ್ದರು. ಪ್ರಮುಖವಾಗಿ ಜೆಡಿಎಸ್ ನಾಯಕರು ಸುಮಲತಾ ಅವರನ್ನು ಭೇಟಿ ಮಾಡಿ ಬೆಂಬಲ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಅವರ ಹೆಸರನ್ನು ಪ್ರಸ್ತಾಪ ಮಾಡಲು ಆಗಲ್ಲ. ಎಲ್ಲಾ ನಾಯಕರ ಆಶೀರ್ವಾದ ನಮ್ಮ ಮೇಲಿದ್ದ ಪರಿಣಾಮ ಮೇ 23ರ ಫಲಿತಾಂಶ ಒಳ್ಳೆಯದಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *