ಲುಂಗಿ ವಿಚಾರಕ್ಕೆ ಕಿರಿಕ್ – ಕಾರ್ಮಿಕರ ಮೇಲೆ ಸ್ಥಳೀಯರಿಂದ ಹಲ್ಲೆ

Public TV
2 Min Read

ವಡೋದರಾ: ಲುಂಗಿ ಧರಿಸಿದ್ದ ಎಂಜಿನಿಯರ್ ಮತ್ತು 6 ಕಾರ್ಮಿಕರ ಮೇಲೆ ಗುಜರಾತಿನ ಸಾಮಾದ ಸ್ಥಳೀಯರು ಸೋಮವಾರ ರಾತ್ರಿ ಹಲ್ಲೆ ನಡೆಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ರಾತ್ರಿ ಸಾಮಾದ ಶಾಲೆಯೊಂದರ ಕಟ್ಟಡ ನಿರ್ಮಾಣಕ್ಕಾಗಿ ಬಿಹಾರದ ಮಧುಬಾನಿ ಜಿಲ್ಲೆಯಿಂದ ವಲಸೆ ಬಂದಿದ್ದ ಸಿವಿಲ್ ಇಂಜಿನಿಯರ್ ಯಾದವ್ ಮತ್ತು 6 ಮಂದಿ ಇನ್ನಿತರ ಕಾರ್ಮಿಕರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ಹೊರಗೆ ಕುಳಿತ್ತಿದ್ದರು.

ಈ ಸಮಯಕ್ಕೆ ಸಾಮಾದ 3 ಮಂದಿ ಸ್ಥಳೀಯರು ಲುಂಗಿ ಧರಿಸಿದ್ದ ಎಂಜಿನಿಯರ್ ಮತ್ತು ಕಾರ್ಮಿಕರನ್ನ ಪ್ರಶ್ನಿಸಿದ್ದಾರೆ. ಬಳಿಕ ಯಾದವ್ ಮತ್ತು ಸ್ಥಳೀಯರ ಮಧ್ಯೆ ಮಾತಿನ ಚಕಮಕಿ ಬೆಳೆದು ಅಲ್ಲಿದ್ದ 7 ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಯಾದವ್ ಸಹಾಯಕ್ಕಾಗಿ ತಕ್ಷಣ ಸ್ಥಳೀಯ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರ ವಾಹನ ಬರುತ್ತಿದ್ದಂತೆ, ಆ ಹಲ್ಲೆಕೋರರು ಅಲ್ಲಿದ್ದ ಬೈಕ್ ಮತ್ತು ಎರಡು ಪ್ಲಾಸ್ಟಿಕ್ ಚೇರ್ ಗಳನ್ನ ಸುಟ್ಟು ಹಾಕಿ ಪರಾರಿಯಾಗಿದ್ದಾರೆ.

ವಿಷಯ ತಿಳಿದ ಕಾಂಟ್ರಾಕ್ಟರ್ ಮಯೂರ್ ಪಟೇಲ್, ಸೂರತ್‍ನಿಂದ ಸಾಮಾಗೆ ಧಾವಿಸಿದ್ದಾರೆ. ಈ ಘಟನೆಯ ಕಾರಣವನ್ನ ಹೇಳಲು ಅಸಾಧ್ಯವಾಗಿದೆ. ಕಾರ್ಮಿಕರು ಧರಿಸಿದ್ದ ಲುಂಗಿಯಿಂದ ಇಷ್ಟೆಲ್ಲಾ ಅನುಹುತಕ್ಕೆ ಕಾರಣವಾಗಿದೆ. ಇದು ತೀರ ವಿಚಿತ್ರವಾದದ್ದು. ಮೊದಲನೇ ಮಹಡಿಯಲ್ಲಿ ಮಲಗಿದ್ದ 30-40 ಕಾರ್ಮಿಕರನ್ನ ಬಾಯಿ ಮುಚ್ಚಿಕೊಂಡು ಈ ಜಾಗವನ್ನ ಬಿಟ್ಟುಹೋಗದೇ ಇದ್ದರೆ ನಿಮ್ಮನ್ನು ಕೂಡ ಬೈಕ್ ಮತ್ತು ಕುರ್ಚಿಗೆ ಬೆಂಕಿ ಹಚ್ಚಿದಂತೆ ನಿಮಗೂ ಬೆಂಕಿ ಹಚ್ಚಲಾಗುವುದು ಎಂದು ಬೆದರಿಕೆ ಹಾಕಿದ್ದರು ಎಂದು ಪಟೇಲ್ ಹೇಳಿದ್ದಾರೆ.

ಸಾಮಾದ ಇನ್ಸ್ ಪೆಕ್ಟರ್  ಪಿಡಿ ಪಾರ್‍ಮರ್ ಮಾತನಾಡಿ, ಹಲ್ಲೆ ನಡೆಸಿದ ಮೂವರಲ್ಲಿ ಕೇಯೂರ್ ಪಾರ್‍ಮರ್ ಎಂಬಾತನನ್ನು ಬಂಧಿಸಿದ್ದು, ಉಳಿದವರನ್ನ ಹುಡುಕಲು ಜಾಲ ಬೀಸಿದ್ದು, ಶೀಘ್ರವೇ ಅವರನ್ನ ಬಂಧಿಸಲಾಗುವುದು ಎಂದು ಹೇಳಿದ್ದಾರೆ.

ಹಲವು ದಿನಗಳಿಂದ ಸ್ಥಳಿಯರು ಕಾರ್ಮಿಕರ ಜೊತೆಗೆ ಸರಿಯಾಗಿ ಲುಂಗಿ ಧರಿಸಿಕೊಂಡು ಕುಳಿತುಕೊಳ್ಳಿ ಎಂದು ಜಗಳವಾಡುತ್ತಿದ್ದರು. ಇದು ಯಾವುದೇ ವಲಸಿಗರ ಮೇಲೆ ನಡೆದ ದ್ವೇಷದ ಕೃತ್ಯವಲ್ಲ ಎಂದು ಪೊಲೀಸ್ ಆಯುಕ್ತ ಅನೂಪ್ ಸಿಂಗ್ ಗಾಲೌಟ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *