ಕೋಳಿಫಾರಂನ ಕಲುಷಿತ ನೀರಿನ ಟ್ಯಾಂಕ್ ಶುಚಿಗೊಳಿಸಲು ಹೋಗಿ 7 ಕಾರ್ಮಿಕರು ಬಲಿ!

Public TV
1 Min Read

ಕೋಲಾರ: ಕೋಳಿಫಾರಂನ ಕಲುಷಿತ ನೀರಿನ ಟ್ಯಾಂಕ್ ಶುಚಿ ಮಾಡಲು ಇಳಿದ 7 ಜನ ಕೂಲಿ ಕಾರ್ಮಿಕರು ವಿಷಕಾರಿ ಅನಿಲ ಸೇವನೆಯಿಂದಾಗಿ ಉಸಿರುಗಟ್ಟಿ ಧಾರುಣವಾಗಿ ಸಾವನ್ನಪ್ಪಿ ಒರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಗಡಿ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಸಮೀಪದ ಮುರಂಪಲ್ಲಿ ಬಳಿ ಇಂದು ಬೆಳಗ್ಗೆ 10.30ಕ್ಕೆ ಈ ಘಟನೆ ನಡೆದಿದೆ. ವೆಂಕಟೇಶ್ವರ ಶೀತಲ ಘಟಕದಲ್ಲಿ ಸಂಗ್ರಹವಾಗಿದ್ದ ಕೊಳಚೆ ನೀರು ಸ್ವಚ್ಛ ಮಾಡಲು ಟ್ಯಾಂಕ್ ಗೆ ಇಳಿದಿದ್ದ ವೇಳೆ ಉಸಿರುಗಟ್ಟಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಶುದ್ಧಿ ಮಾಡಲು ಇಳಿದಿದ್ದ 7 ಜನ ಅಸ್ವಸ್ಥರನ್ನ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದ್ದರೂ ಚಿಕಿತ್ಸೆ ಫಲಕಾರಿಯಾಗದೆ 7 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸದ್ಯ ಒರ್ವನ ಸ್ಥಿತಿ ಗಂಭೀರವಾಗಿದ್ದು, ಮೃತರನ್ನ ರಮೇಶ್, ರಾಮಚಂದ್ರ, ರೆಡ್ಡಪ್ಪ, ಕೇಶವ, ಗೋವಿಂದಸ್ವಾಮಿ, ಬಾಬು ಹಾಗೂ ಶಿವ ಎಂದು ಗುರುತಿಸಲಾಗಿದ್ದು, ಮೃತರು ಪಲಮನೇರು ಮೂಲದ ಕೂಲಿ ಕಾರ್ಮಿಕರು ಎಂದು ಗುರುತಿಸಲಾಗಿದೆ.

ಟ್ಯಾಂಕ್‍ನಲ್ಲಿ ಪ್ರತಿನಿತ್ಯ ಕೋಳಿಫಾರಂನ ತ್ಯಾಜ್ಯವನ್ನ ಶೇಖರಣೆ ಮಾಡಲಾಗುತ್ತಿತ್ತು. ಶೇಖರಣೆಯಾಗಿದ್ದ ತ್ಯಾಜ್ಯ ವಿಷಾನಿಲವಾಗಿ ಪರಿವರ್ತನೆಗೊಂಡಿದ್ದು, ಟ್ಯಾಂಕಿಗೆ ಇಳಿದ ಕಾರ್ಮಿಕರು ಎಲ್ಲರೂ ವಿಷಾನಿಲ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೈಪ್‍ಗಳನ್ನು ಅಳವಡಿಸಲು ಕಾರ್ಮಿಕರು ಟ್ಯಾಂಕಿನೊಳಗೆ ಹೋದಾಗ ಉಸಿರಾಡಲು ತೊಂದರೆಯಾಗಿ ಅಲ್ಲಿಯೇ ಪ್ರಜ್ಞೆಯಿಲ್ಲದೆ ಬಿದ್ದಿದ್ದರು. ಆಗ ತಕ್ಷಣ ಸಹ-ಕಾರ್ಮಿಕರು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಪಲಮನೇರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *