ಅಕ್ರಮ ಹಣ ವರ್ಗಾವಣೆ ಕೇಸ್‌- ಸುಪ್ರೀಂನಿಂದ ರಾಣಾ ಅಯ್ಯೂಬ್‌ ಅರ್ಜಿ ವಜಾ

Public TV
2 Min Read

ನವದೆಹಲಿ: ಗಾಜಿಯಾಬಾದ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ಪ್ರಕರಣವನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ (Rana Ayyub) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ವಜಾಗೊಳಿಸಿದೆ.

ತನ್ನ ರಿಟ್ ಅರ್ಜಿಯಲ್ಲಿ ಅಯ್ಯೂಬ್ ಅವರು ಮುಂಬೈನಲ್ಲಿ ಅಕ್ರಮ ಹಣ ವರ್ಗಾವಣೆಯ(Money Laundering) ಅಪರಾಧ ನಡೆದಿರುವುದರಿಂದ ಗಾಜಿಯಾಬಾದ್‌ ನ್ಯಾಯವ್ಯಾಪ್ತಿಯಲ್ಲಿ ವಿಚಾರಣೆಗೆ ಬರುವುದಿಲ್ಲ. ಹೀಗಾಗಿ ವಿಚಾರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾ. ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪರ್ದಿವಾಲಾ ಅವರ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿದ್ದು ರಾಣಾ ಅಯ್ಯೂಬ್‌ಗೆ ಹಿನ್ನಡೆಯಾಗಿದೆ.

ಕಳೆದ ವರ್ಷ ನವೆಂಬರ್ 29 ರಂದು, ಗಾಜಿಯಾಬಾದ್‌ನ ವಿಶೇಷ ಪಿಎಂಎಲ್‌ಎ (PMLA) ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಅಯ್ಯೂಬ್‌ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

SUPREME COURT

ಏನಿದು ಪ್ರಕರಣ?
ಕೋವಿಡ್(Covid) ಪರಿಹಾರಕ್ಕಾಗಿ ಮೂರು ಅಭಿಯಾನಗಳಿಂದ 2.69 ಕೋಟಿ ರೂ. ಹಣವನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯೂಬ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕಪ್ಪುಹಣ ಕಾಯ್ದೆಯ ವಿವಿಧ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿ ತನಿಖೆ ನಡೆಸಿದ ಇಡಿ ಗಾಜೀಯಾಬಾದ್‌ನಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಒಟ್ಟು ಸಂಗ್ರಹವಾದ 2,69,44,680 ರೂ. ಹಣದಲ್ಲಿ ಕೇವಲ 29 ಲಕ್ಷ ರೂ. ಮಾತ್ರ ಪರಿಹಾರ ನಿಧಿಗೆ ಬಳಕೆಯಾಗಿದ್ದು ಉಳಿದ ಹಣ ಬಳಕೆಯಾಗಿಲ್ಲ ಎಂದು ಉಲ್ಲೇಖಿಸಿದೆ.

ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅಯ್ಯೂಬ್ ಅವರು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ(FCRA) ಅಡಿಯಲ್ಲಿ ನೋಂದಣಿ ಮಾಡದೇ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

ಸಂಗ್ರಹವಾದ ಹಣವನ್ನು ತಂದೆ ಮತ್ತು ಸಹೋದರಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಪೈಕಿ 50 ಲಕ್ಷ ರೂ. ಹಣವನ್ನು ಎಫ್‌ಡಿ ಇಟ್ಟರೆ, 50 ಲಕ್ಷ ರೂ. ಹಣವನ್ನು ಹೊಸದಾಗಿ ತೆರೆದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪರಿಹಾರ ಕಾರ್ಯಕ್ಕೆ ಕೇವಲ 29 ಲಕ್ಷ ರೂಪಾಯಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಪರಿಹಾರ ಕೆಲಸಕ್ಕೆ ಹೆಚ್ಚಿನ ವೆಚ್ಚ ಪಡೆಯಲು ಅಯ್ಯೂಬ್‌ ನಕಲಿ ಬಿಲ್‌ ಸಲ್ಲಿಸಿದ್ದಾರೆ ಎಂದು ಇಡಿ ಹೇಳಿದೆ.

ತನ್ನ ವೈಯಕ್ತಿಕ ವಿಮಾನ ಪ್ರಯಾಣದ ಟಿಕೆಟ್‌ ದರವನ್ನು ಪರಿಹಾರ ಕಾರ್ಯದ ವೆಚ್ಚಕ್ಕೆ ಅಯ್ಯೂಬ್‌ ಸೇರಿಸಿದ್ದಾರೆ. ಜನರಿಂದ ಹಣವನ್ನು ಸಂಗ್ರಹಿಸಿ ವಂಚನೆ ಮಾಡಲೆಂದೇ ರಾಣಾ ಅಯ್ಯೂಬ್‌ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದರು ಎಂದು ಇಡಿ ಆರೋಪಿಸಿದೆ.

ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್-‘ಕೆಟ್ಟೋ’ದಲ್ಲಿಏಪ್ರಿಲ್ 2020 ರಿಂದ ನಿಧಿ ಸಂಗ್ರಹ ಅಯ್ಯೂಬ್‌ ಅಭಿಯಾನವನ್ನು ಪ್ರಾರಂಭಿಸಿದ್ದರು. ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ನಿಧಿ ಸಂಗ್ರಹಿಸಲು ಸಹಾಯ, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯ, ಭಾರತದಲ್ಲಿ ಕೋವಿಡ್ 19 ನಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಅಯ್ಯೂಬ್‌ ನಿಧಿ ಸಂಗ್ರಹ ಮಾಡಿದ್ದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *