ದೆಹಲಿ, ಹರಿಯಾಣದಲ್ಲಿ ಪ್ರತ್ಯೇಕ ಅಪಘಾತ – ಮೂವರು ಸಾವು, 20ಕ್ಕೂ ಅಧಿಕ ಮಂದಿಗೆ ಗಾಯ

2 Min Read

ನವದೆಹಲಿ: ಹರಿಯಾಣ (Haryana) ಹಾಗೂ ದೆಹಲಿಯಲ್ಲಿ (Newdelhi) ಸಂಭವಿಸಿದ್ದ ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಹರಿಯಾಣ ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದು, ದೆಹಲಿ-ಲಕ್ನೋ ಹೆದ್ದಾರಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಹರಿಯಾಣದ ನುಹ್ ಜಿಲ್ಲೆಯ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ ವೇಯಲ್ಲಿ ಭಾನುವಾರ (ಜ.18) ಬೆಳಿಗ್ಗೆ ಡಂಪರ್ ಹಾಗೂ ಅಮೆಜಾನ್ ಕಂಟೇನರ್ ಡಿಕ್ಕಿಯಾಗಿವೆ. ಪರಿಣಾಮ ಡಂಪರ್ ಚಾಲಕ ಮತ್ತು ಸಹಾಯಕ ಇಬ್ಬರು ಸಜೀವ ದಹನಗೊಂಡಿದ್ದು, 1 ಕೋಟಿ ರೂ.ಗೂ ಅಧಿಕ ಮೌಲ್ಯದ ಸರಕುಗಳನ್ನು ಸಾಗಿಸುತ್ತಿದ್ದ ಅಮೆಜಾನ್ ಕಂಟೈನರ್ ಸುಟ್ಟು ಭಸ್ಮವಾಗಿದೆ. ಭಾರೀ ವಾಹನವೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂದೆ ಇದ್ದ 5 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ತೀವ್ರ ಟ್ರಾಫಿಕ್ ಉಂಟಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ಅಬಕಾರಿ ಇಲಾಖೆ ಕರ್ಮಕಾಂಡ | ಸನ್ನದು ಪಡೆಯಲು 2.30 ಕೋಟಿ ಬೇಡಿಕೆ ಆರೋಪದ ಆಡಿಯೋ ವೈರಲ್ – ಹೆಚ್‌ಟಿ ಮಂಜು ದೂರು

ಇನ್ನೂ ಭಾರೀ ಮಂಜು ಕವಿದಿದ್ದರಿಂದ ವಾಹನ ಡಿಕ್ಕಿಯಾಗಿ ಓರ್ವ ಸಾವನ್ನಪ್ಪಿದ್ದು, 24 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮುಜಾಫರ್‌ನಗರ ಜಿಲ್ಲೆಯ ನಿವಾಸಿ ರಾಹುಲ್ (35) ಅವರು ಸಾವನ್ನಪ್ಪಿದ್ದು, ಬಸ್ ಸಹ-ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಇನ್ನೂ ಬಸ್ ಚಾಲಕ ಅತಾರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗೋರಖ್‌ಪುರದಿಂದ ಮೀರತ್‌ಗೆ ಹೊರಟಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹಿಂದೆ ಬಂದ ವಾಹನಗಳು ಒಂದಕ್ಕೊಂದು ಸುಮಾರು 15ಕ್ಕೂ ಹೆಚ್ಚು ವಾಹನಗಳು ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಮೂರು ರಸ್ತೆ ಬಸ್‌ಗಳು, ಒಂದು ಟ್ರಕ್ ಮತ್ತು ಹಲವಾರು ಕಾರುಗಳು ಜಖಂಗೊಂಡಿವೆ. ಅಪಘಾತದಿಂದಾಗಿ ಹೆದ್ದಾರಿಯ ಎರಡೂ ರಸ್ತೆಗಳಲ್ಲಿ ದೀರ್ಘ ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಸುಮಾರು ಅರ್ಧಗಂಟೆಯ ನಂತರ ಪುನಃ ವಾಹನ ಸಂಚಾರ ಆರಂಭವಾಯಿತು ಎಂದು ಫರೀದ್‌ಪುರ ಪೊಲೀಸ್ ಠಾಣೆಯ ಎಸ್‌ಎಚ್‌ಒ ತಿಳಿಸಿದ್ದಾರೆ.ಇದನ್ನೂ ಓದಿ: ಜೆಡಿಎಸ್‌ ಪಾಳಯದಲ್ಲಿ ಕ್ಷಿಪ್ರ ಕ್ರಾಂತಿ – ಜಿಟಿಡಿ ಕ್ಷೇತ್ರದಿಂದ ಸಾರಾ ಮಹೇಶ್‌ ಕಣಕ್ಕಿಳಿಸಲು ಪ್ಲ್ಯಾನ್‌!

Share This Article