ಬೆಂಗಳೂರು: ಇರಾನ್ (Iran) ಹಾರ್ಮುಝ್ ಜಲಸಂಧಿ (Hormuz Strait) ಬಂದ್ ಮಾಡಿದ್ರೆ ಭಾರತಕ್ಕೆ ಭಾರೀ ನಷ್ಟವಾಗಲಿದೆ, ಆರ್ಥಿಕತೆಗೂ ಹೊಡೆತ ಬೀಳಲಿದೆ ಎಂದು ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಎಸ್.ಆರ್ ಕೇಶವ್ (SR Keshav) ಹೇಳಿದ್ದಾರೆ.
ಇರಾನ್-ಇಸ್ರೇಲ್ ನಡುವೆ ಸಂಘರ್ಷ (Israel Iran Conflict) ತೀವ್ರಗೊಂಡಿದ್ದು, ಭಾರತದ ಆರ್ಥಿಕತೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಸಂಘರ್ಷ ಮುಂದುವರಿದ್ರೆ ಅಥವಾ ಇರಾನ್ ಮುಂದಿನ ಕ್ರಮ ಭಾರತದ (India) ಮೇಲೆ ಏನು ಪರಿಣಾಮಗಳು ಬೀರಬಹುದು ಅನ್ನೋ ಕುರಿತು ಎಸ್. ಆರ್ ಕೇಶವ್ ಮಾತನಾಡಿದ್ದಾರೆ.
ಆಮದು-ರಫ್ತಿನ ಪ್ರಮುಖ ಮಾರ್ಗ
ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೆ ಕಷ್ಟವಾಗುತ್ತದೆ. ಸಹಜವಾಗಿಯೇ ವಿಶ್ವದಲ್ಲಿ ಯಾವುದೇ ಯುದ್ಧವಾದ್ರೂ ವಿಶ್ವದ ಎಲ್ಲಾ ದೇಶಗಳಿಗೂ ಪರಿಣಾಮ ಬೀರುತ್ತೆ. ಅದೇ ರೀತಿ ಇಸ್ರೇಲ್-ಇರಾನ್ ಯುದ್ಧ ಸುದೀರ್ಘವಾದಷ್ಟು ಭಾರತಕ್ಕೆ ಲಾಸ್. ಏಕೆಂದ್ರೆ ಭಾರತದ 80% ರಷ್ಟು ಕಚ್ಚಾ ತೈಲವನ್ನ (Crude oil) ಆಮದು ಮಾಡಿಕೊಳ್ಳುತ್ತೆ. ಹಾರ್ಮೂಝ್ ಜಲಸಂಧಿ ಮಾರ್ಗದಿಂದಲೇ ಭಾರತಕ್ಕೆ ಆಮದು ಆಗಬೇಕು. ಭಾರತದಿಂದ ರಫ್ತಾಗುವ ಎಲ್ಲ ವಸ್ತುಗಳು ಸಹ ಈ ಜಲಸಂಧಿಯಿಂದಲೇ ಹೋಗಬೇಕು ಎಂದು ವಿವರಿಸಿದ್ರು.
ಈಗಾಗಲೇ ಆಮದು, ರಫ್ತು ಎರಡಲ್ಲೂ ಭಾರತಕ್ಕೆ ನಷ್ಟ ಶುರುವಾಗಿದೆ. ಇಸ್ರೇಲ್ ಜೊತೆಗಿನ ಸಂಘರ್ಷ ತೀವ್ರವಾದ ಬೆನ್ನಲ್ಲೇ ಇರಾನ್ ಜೊತೆಗೆ ವಹಿವಾಟು ಕಡಿಮೆ ಆಗಿದೆ. ಜೊತೆಗೆ ಸೌದಿ ಅರೇಬಿಯಾ, ಯುಎಇ, ಅರಬ್ ದೇಶಗಳಿಂದ ಸಾಗಣಿಕೆಗೆ ಈ ಜಲಸಂಧಿಯಲ್ಲೇ ಬರಬೇಕು. ಎಲ್ಲಾ ಆಮದು ಬರೋದಕ್ಕೆ ಈ ಜಲಸಂಧಿ ಮಾರ್ಗವೇ ಹತ್ತಿರವಾಗುತ್ತೆ. ಯೂರೋಪ್ ದೇಶಗಳಿಗೆ ಭಾರತ ರಪ್ತು ಮಾಡೋದಕ್ಕೂ ಈ ಮಾರ್ಗವೇ ಮುಖ್ಯ. ಹಾಗಾಗಿ ಇರಾನ್ ಹಾರ್ಮುಝ್ ಜಲಸಂಧಿ ಬಂದ್ ಮಾಡಿದ್ರೇ ಭಾರತಕ್ಕೆ ಭಾರೀ ನಷ್ಟವಾಗುತ್ತದೆ ಎಂದು ತಿಳಿಸಿದರು.
ಜೊತೆಗೆ ಏಷ್ಯಾ ದೇಶಗಳ ಸಂಪರ್ಕಕ್ಕೂ ನೇರ ಹೊಡೆತ ಬೀಳುತ್ತೆ. ಭಾರತ ಮಾತ್ರವಲ್ಲ ಬಹುತೇಕ ಎಲ್ಲ ಏಷ್ಯಾ ರಾಷ್ಟ್ರಗಳಿಗೆ ಹೊಡೆತ ಬೀಳುತ್ತೆ. ಸದ್ಯದ ಪರಿಸ್ಥಿಯಲ್ಲಿ ಇರಾನ್ಗೆ ಚೀನಾ ಬೇಕಿದೆ, ಇಸ್ರೇಲ್ಗೆ ಅಮೆರಿಕ ಬೇಕಿದೆ ಎಂದು ಮಾಹಿತಿ ನೀಡಿದರು.