ಹಾವೇರಿಯಲ್ಲಿ ಸೀಗೆ ಹುಣ್ಣಿಮೆ ಸಂಭ್ರಮ

Public TV
1 Min Read

ಹಾವೇರಿ: ಭೂಮಿ ತಾಯಿ ಫಸಲು ಹೊತ್ತು ನಿಂತಿರುವ ಸಮಯ, ಆದರೆ ಪ್ರಸ್ತಕ ವರ್ಷ ಅತಿವೃಷ್ಟಿ ಮತ್ತು ಧಾರಾಕಾರ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಆದರೂ ಸಹ ಭೂತಾಯಿ ಪೂಜೆ ಬಿಡಬಾರದು ಎಂಬ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ಸೀಗಿ ಅಥವಾ ಸೀಗೆ ಹುಣ್ಣಿಮೆಯನ್ನು ಸಂಭ್ರಮ ಸಡಗರದಿಂದ ಆಚರಣೆ ಮಾಡಿದ್ದಾರೆ.

ಹಾವೇರಿ ತಾಲೂಕು ನಾಗನೂರು ಗ್ರಾಮ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಭೂಮಿ ಹಬ್ಬ ಸೀಗೆ ಹುಣ್ಣಿಮೆಯನ್ನು ಆಚರಿಸಿದ್ದಾರೆ. ರೈತರು ಕುಟುಂಬ ಸಮೇತರಾಗಿ ಹೊಲಕ್ಕೆ ತೆರಳಿ, ಜಮೀನಿನಲ್ಲಿ ಪಂಚಪಾಂಡವರನ್ನು ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಾರೆ.

ಮನೆಯ ಹೆಣ್ಣುಮಕ್ಕಳು ಗರ್ಭವತಿಯಾದಾಗ ಯಾವ ರೀತಿ ವಿವಿಧ ರೀತಿಯ ಭಕ್ಷಭೋಜನಗಳಿಂದ ಸೀಮಂತ ಕಾರ್ಯ ಮಾಡುತ್ತಾರೋ, ಅದೇ ರೀತಿ ಫಸಲು ಹೊತ್ತು ನಿಂತ ಭೂತಾಯಿಗೆ ರೈತ ಭಕ್ಷಭೋಜನಗಳಿಂದ ಸಂತೃಪ್ತಿಗೊಳಿಸುವ ಹಬ್ಬವೇ ಸೀಗೆ ಹುಣ್ಣಿಮೆ.

ಅಲ್ಲದೆ ಯಾವಾಗಲೂ ಭೂಮಿ ತಾಯಿಗೆ ಪೂಜೆ ಸಲ್ಲಿಸುವುದಕ್ಕಿಂತ ಈ ಸೀಗೆ ಹುಣ್ಣಿಮೆಯಲ್ಲಿ ಪೂಜೆ ಸಲ್ಲಿಸುವುದು ತುಂಬಾ ವಿಶೇಷವಾಗಿರುತ್ತದೆ. ಚರಗ ಚೆಲ್ಲುವುದು, ತಾಯಿಗೆ ತಯಾರಿಸಿದ ಭಕ್ಷಭೋನಗಳು ಸೀಗೆ ಹುಣ್ಣಿಮೆಯ ಪ್ರಮುಖ ಆಕರ್ಷಣೆಯಾಗಿತ್ತು. ಈ ಹಬ್ಬಕ್ಕೆ ದೂರ ಸಂಬಂಧಿಕರು, ಬಂಧುಗಳು ಹಾಗೂ ಸ್ನೇಹಿತರು ಜಮೀನುಗಳಿಗೆ ತೆರಳಿ ಭಕ್ಷಭೋಜನ ಸವೆದು ಸಂಭ್ರಮದಿಂದ ಭೂಮಿ ಹಬ್ಬವನ್ನು ಆಚರಣೆ ಮಾಡುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *