ನರಿಬುದ್ಧಿ ಬಿಡದ ಪಾಕಿಸ್ತಾನ – ಪಾಕ್ ಗೂಢಾಚಾರಿ ಅರೆಸ್ಟ್

Public TV
1 Min Read

ಜೈಪುರ: ರಾಜಸ್ಥಾನದ ಬಾರ್ಮೆರ್ ಪ್ರದೇಶದಲ್ಲಿ ಪಾಕಿಸ್ತಾನದ ಗೂಢಾಚಾರಿಯನ್ನು ರಕ್ಷಣಾ ಪಡೆಗಳು ಬಂಧಿಸಲಾಗಿದೆ.

ರಾಜಸ್ಥಾನದ ಬಾರ್ಮೆರ್ ಗಡಿ ಪ್ರದೇಶವನ್ನು ದಾಟಿ ಬರುತ್ತಿದ್ದ ವೇಳೆ ಬೇಹುಗಾರಿಕಾ ವ್ಯಕ್ತಿಯನ್ನು ಬಂಧಿಸಲಾಗಿದೆ. ಪಾಕಿಸ್ತಾನ ಸೈನ್ಯಕ್ಕೆ ಸಹಾಯ ಮಾಡುವ ಉದ್ದೇಶದಿಂದ ಭಾರತೀಯ ಸೇನೆ ಹಾಗೂ ಗಡಿ ಭದ್ರತಾ ಪಡೆ (ಬಿಎಸ್‍ಎಫ್)ಯ ಮಾಹಿತಿಯನ್ನು ಆರೋಪಿ ಸಂಗ್ರಹಿಸುತ್ತಿದ್ದ ಎಂಬ ಮಾಹಿತಿ ಲಭಿಸಿದೆ.

ಮಾಧ್ಯಮ ವರದಿಯ ಅನ್ವಯ, ಪಾಕಿಸ್ತಾನದಿಂದ ಬಂದ ವ್ಯಕ್ತಿಯನ್ನು ಕಿಶೋರ್ ಎಂದು ಗುರುತಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಜೈಪುರಕ್ಕೆ ಕಳುಹಿಸಿಕೊಡಲಾಗಿದೆ. ಗಡಿಯಲ್ಲಿ ಅಳವಡಿಸಿದ್ದ ಬೇಲಿಯ ಕೆಳಗೆ ತೆವಳಿಕೊಂಡು ಗಡಿದಾಟಿದ್ದ ಎನ್ನಲಾಗಿದ್ದು, ಸ್ಥಳೀಯ ಗ್ರಾಮಸ್ಥರು ಗಮನಿಸಿ ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದಾರೆ.

ಕಿಶೋರ್ ಬಾಯ್ಬಿಟ್ಟಿರುವ ಮಾಹಿತಿಯ ಅನ್ವಯ, ಆತನನ್ನು ಬಿಎಸ್‍ಎಫ್ ಹಾಗೂ ಭಾರತದ ಸೈನ್ಯದ ಮಾಹಿತಿಯನ್ನು ಸಂಗ್ರಹಿಸಿ ತರುವಂತೆ ಗೂಢಾಚಾರಿಯಂತೆ ಕಳುಹಿಸಲಾಗಿತ್ತು ಎಂದು ತಿಳಿಸಿದ್ದಾನೆ. ಮೊದಲ ಆತನ ಹಳ್ಳಿಯಿಂದ ಭಾರತ ಗಡಿ ಪ್ರದೇಶದ ಬಳಿಗೆ ರೈಲಿನ ಮೂಲಕ ಕರೆ ತಂದಿದ್ದು, ಆ ಬಳಿಕ ಪಾಕ್ ಸೇನೆ ಆತನಿಗೆ ಗಡಿ ದಾಟಲು ಸಹಾಯ ಮಾಡಿದೆ ತಿಳಿಸಿದ್ದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗಡಿ ದಾಟುವ ಸಂದರ್ಭದಲ್ಲಿ ಹಸಿರು ಬಣ್ಣದ ಬಟ್ಟೆ ಧರಿಸಿದ್ದ ಕಾರಣ ಆತ ರಕ್ಷಣಾ ಪಡೆಯ ಕಣ್ಣಿಗೆ ಕಾಣದಂತೆ ಬಂದಿರುವ ಕುರಿತು ಮಾಹಿತಿ ಲಭಿಸಿದೆ. ಅಲ್ಲದೇ ಪಾಕಿಸ್ತಾನ ಸೇನೆ ಹಾಗೂ ಐಎಸ್‍ಐ ಸಹಾಯದಿಂದ ಉಗ್ರರು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಬಂಧಿತ ತಿಳಿಸಿದ್ದಾನೆ. ಈಗಾಗಲೇ ಭಾರತದ ಜಮ್ಮು ಕಾಶ್ಮೀರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಭಾರತೀಯ ಗೂಢಾಚಾರ ಇಲಾಖೆ ಎಚ್ಚರಿಕೆ ನೀಡಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಈಗಾಗಲೇ ಸೂಚನೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *