ಬರಗೂರು ನನ್ನ ಜೊತೆ ಚರ್ಚೆಗೆ ಬರಲಿ – ರೋಹಿತ್‌ ಚಕ್ರತೀರ್ಥ ಓಪನ್‌ ಚಾಲೆಂಜ್‌

Public TV
2 Min Read

ಬೆಂಗಳೂರು: ಬರಗೂರು ರಾಮಚಂದ್ರಪ್ಪ ಅವರು ನನ್ನ ಜೊತೆ ಚರ್ಚೆಗೆ ಬರಲಿ. ಇದು ನನ್ನ ಓಪನ್‌ ಚಾಲೆಂಜ್‌. ನಾನು ಎಲ್ಲದ್ದಕ್ಕೂ ಉತ್ತರ ಕೊಡುತ್ತೇನೆ ಎಂದು ಬರಹಗಾರ ರೋಹಿತ್‌ ಚಕ್ರತೀರ್ಥ ಹೇಳಿದ್ದಾರೆ.

ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಕ್ಕಳಿಗೆ ಎಡಪಂಥೀಯ ವಿಚಾರವನ್ನು ತುಂಬುವ ಕೆಲಸ ಮಾಡಿತ್ತು. ಅದನ್ನು ನಾವು ಸರಿ ಮಾಡಿದ್ದೇವೆ. ಕಾಂಗ್ರೆಸ್ ಯಾವುದನ್ನು ಮಾಡಿತ್ತೋ ಅದನ್ನು ಸಂಪೂರ್ಣ ಉಲ್ಟಾ ಮಾಡಿದ್ದೇವೆ. ಎಂದು ಹೇಳಿದರು.

ಕಾಂಗ್ರೆಸ್ ಅವಧಿಯ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷರಾದ ಬರಗೂರು ರಾಮಚಂದ್ರಪ್ಪ ಅವರಿಗೆ ನಾನು ಚಾಲೆಂಜ್ ಹಾಕ್ತೀನಿ. ಅವರು ಎಲ್ಲಿ ಬೇಕಾದ್ರೂ ಕರೆದರೂ ಅಲ್ಲಿಗೆ ಬಂದು ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡ್ಗೆವಾರ್ ಭಾಷಣವನ್ನು ಓದಲಿದ್ದಾರೆ 10ನೇ ತರಗತಿ ವಿದ್ಯಾರ್ಥಿಗಳು

ಟಿಪ್ಪು ಮೈಸೂರು ಹುಲಿ ಅಲ್ಲ. ಮೈಸೂರು ಹುಲಿ ಅಂತ ಎಲ್ಲೂ ಪುರಾವೆ ಇಲ್ಲ. ಹೀಗಾಗಿ ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಹಾಕಿದ್ದೇವೆ. ಹೀಗಿದ್ದರೂ ಪಠ್ಯದಲ್ಲಿ ಟಿಪ್ಪುವನ್ನು ಕೈಬಿಟ್ಟಿಲ್ಲ. ಲಂಕೇಶ್, ಅನಂತಮೂರ್ತಿ, ಸಾರಾ ಅಬೂಬಕ್ಕರ್ ಸೇರಿದಂತೆ ಅನೇಕ ಲೇಖಕರ ಪಠ್ಯದ ಮೂಲಕ ಎಡಪಂಥೀಯ ಚಿಂತನೆಯನ್ನು ತುಂಬುವ ಕೆಲಸವನ್ನು ಕಾಂಗ್ರೆಸ್ ಮಾಡಿತ್ತು ಎಂದು ವಾಗ್ದಾಳಿ ನಡೆಸಿದರು.

ನಾನು ಆರ್‌ಎಸ್‌ಎಸ್‌ ವ್ಯಕ್ತಿಯಲ್ಲ. ಆರ್‌ಎಸ್‌ಎಸ್‌ ಶಾಖೆಗೂ ನಾನು ಹೋಗಿಲ್ಲ. ನಾನು ಆರ್‌ಎಸ್‌ಎಸ್‌ ಕಾರ್ಯಕರ್ತನೂ ಅಲ್ಲ. ಹೆಡ್ಗೆವಾರ್ ಅವರ ಮೌಲ್ಯಗಳನ್ನು ಮಕ್ಕಳು ಓದಬೇಕು. ಅದಕ್ಕೆ ಅವರ ಚಿಂತನೆಗಳನ್ನು ಸೇರಿಸಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ದೊಡ್ಡ ತಪ್ಪು ಮಾಡಿತ್ತು. ಅದನ್ನ ನಾವು ಸರಿ ಮಾಡಿದ್ದೇವೆ. ಮಕ್ಕಳು ಯಾವುದು ಓದಬೇಕೋ ಅ ಪಠ್ಯಗಳನ್ನು ಸೇರ್ಪಡೆ ಮಾಡಿದ್ದೇವೆ. ಹೆಡ್ಗೆವಾರ್ ರಾಷ್ಟ್ರವಾದ ಚಿಂತನೆ ಬಗ್ಗೆ ಭಾಷಣ ಮಾಡಿದ್ದರು. ಅವರ ಕಲ್ಪನೆಯನ್ನು ಮಕ್ಕಳು ಓದಬೇಕು. ಡಾ.ಕೇಶವ ಬಲಿರಾಂ ಹೆಡ್ಗೆವಾರ್ ಆದರ್ಶ ವ್ಯಕ್ತಿಯಾಗಿದ್ದು ಪಠ್ಯದಲ್ಲಿ ಅವರ ಭಾಷಣವನ್ನು ಸೇರಿಸಿದರಲ್ಲಿ ಯಾವುದೇ ತಪ್ಪು ಇಲ್ಲ ಎಂದರು.

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಹೆಡ್ಗೆವಾರ್ ಅವರ ಭಾಷಣದ ಪಠ್ಯವನ್ನು ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈ ಶಿಫಾರಸಿನಂತೆ 2022-23ರ ಶೈಕ್ಷಣಿಕ ವರ್ಷದಿಂದ ಈ 10ನೇ ತರಗತಿಯ ಐದನೇ ಪಾಠವಾಗಿ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಪಾಠವನ್ನು ಸೇರಿಸಲಾಗಿದೆ. ಈ ಪಾಠವನ್ನು ಸೇರಿಸಿದ್ದಕ್ಕೆ ಈಗ ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *