ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ

Public TV
1 Min Read

ನವದೆಹಲಿ: ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

ಎಸ್‍ಸಿ/ಎಸ್‍ಟಿ ಸಮುದಾಯದ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬಡ್ತಿ ಮೀಸಲು ಸಂಬಂಧ ಎಂ.ನಾಗರಾಜು ಪ್ರಕರಣದಲ್ಲಿ 2006ರಲ್ಲಿ ಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೇ ಈ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಎಸ್‍ಸಿ, ಎಸ್‍ಟಿ ನೌಕರರ ಮುಂಬಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ. ಹಿಂದುಳಿದವರು ಎಂದು ಹೇಳಲು ಮಾಹಿತಿ ಸಂಗ್ರಹ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ.

2006ರ ತೀರ್ಪು ಮರುಪರಿಶೀಲಿಸುವಂತೆ ಮತ್ತು ಅನಗತ್ಯ ಷರತ್ತುಗಳನ್ನು ರದ್ದುಪಡಿಸುವಂತೆ ಕೆಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 30ರಂದು ನಡೆಸಿ ತೀರ್ಪನ್ನು ಸೆ.26ಕ್ಕೆ ಕಾಯ್ದಿರಿಸಿತ್ತು.

ಬಡ್ತಿ ನೌಕರರ ಜೇಷ್ಠ್ಯತೆ ನಿರ್ಣಯ ಕಾಯ್ದೆ -2002 ಪ್ರಶ್ನಿಸಿ ರಾಜ್ಯದ ಎಂ.ನಾಗರಾಜು ಎನ್ನುವವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‍ನ ಏಳು ಸದಸ್ಯರ ಪೀಠ, ಬಡ್ತಿ ಮೀಸಲಾತಿ ನೀಡುವುದೇ ಆದರೆ ನೌಕರರ ದಕ್ಷತೆಯನ್ನು ಪರಿಗಣಿಸಬೇಕು. ಎಸ್‍ಸಿ ಸಮುದಾಯಕ್ಕೆ ಶೇಕಡಾ 18ರಷ್ಟು ಮೀಸಲಾತಿ ನೀಡಬೇಕು ಮತ್ತು ಒಟ್ಟು ಹಿಂದುಳಿದಿರುವಿಕೆ ಮಾಹಿತಿ ಪರಿಗಣಿಸಬೇಕು ಎಂದು 2006ರಲ್ಲಿ ತೀರ್ಪು ನೀಡಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *