ಹಿಂದೂಗಳನ್ನು ಮಾತ್ರ ಗುರಿ ಮಾಡೋದು ಯಾಕೆ: ಬಾಬಾ ರಾಮ್‍ದೇವ್ ಪ್ರಶ್ನೆ

Public TV
2 Min Read

ನವದೆಹಲಿ: ಸುಪ್ರೀಂ ಕೋರ್ಟ್ ದೆಹಲಿಯಲ್ಲಿ ದೀಪಾವಳಿಗೆ ಪಟಾಕಿ ಮಾರಾಟ ಮಾಡದಂತೆ ನಿಷೇಧ ವಿಧಿಸಿರುವ ಕುರಿತು ಬಾಬಾ ರಾಮ್‍ದೇವ್ ಆಕ್ಷೇಪವನ್ನು ಎತ್ತಿ ಹಿಂದೂಗಳನ್ನು ಮಾತ್ರ ಗುರಿ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಬಾಬಾ ರಾಮ್‍ದೇವ್ ಈ ಕುರಿತು ಹೇಳಿಕೆಯನ್ನು ನೀಡಿದ್ದು, ಹಿಂದೂಗಳನ್ನು ಮಾತ್ರ ಗುರಿ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸರ್ಕಾರವು ಈ ಕುರಿತು ಸುಪ್ರೀಂ ಕೋರ್ಟ್‍ಗೆ ಮನವಿಯನ್ನು ಸಲ್ಲಿಸಬೇಕಾಗಿದೆ. ಪ್ರಸ್ತುತ ಹಿಂದೂ ಧಾರ್ಮಿಕ ಹಬ್ಬಗಳ ಕುರಿತು ನ್ಯಾಯಾಲಯಗಳಲ್ಲಿ ಪ್ರಶ್ನೆ ಮಾಡುವುದು ಅಭ್ಯಾಸವಾಗಿದೆ. ಇಂತಹ ಅಭ್ಯಾಸವನ್ನು ಕೊನೆಗಾಣಿಸಬೇಕು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಸುಪ್ರೀಂ ತೀರ್ಪಿಗೆ ತಮ್ಮ ಬೆಂಬಲವನ್ನು ನೀಡಿ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ವಿರುದ್ಧ ಕಿಡಿಕಾರಿದ ಅವರು, ಬುದ್ಧಿವಂತ ವ್ಯಕ್ತಿಗಳು ಈ ರೀತಿ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದರು.

ಕಾಂಗ್ರೆಸ್ ಸಂಸದ ಶಶಿ ತರೂರ್ ನಿಷೇಧದ ಕುರಿತು, ನೀವು ಹೇಳಿರುವ ಆಚರಣೆಗಳ ಉದಾಹರಣೆಗಳನ್ನ ನೋಡುವುದಾದ್ರೆ ಅವೆಲ್ಲಾ ಅಚರಣೆಗಳ ಅವಿಭಾಜ್ಯ ಅಂಗ. ಅವುಗಳನ್ನ ಬ್ಯಾನ್ ಮಾಡುವುದೆಂದರೆ ದೀಪಾವಳಿಗೆ ದೀಪಗಳನ್ನ ಬ್ಯಾನ್ ಮಾಡಿದಂತೆ. ಪಟಾಕಿಗಳು ಹೆಚ್ಚುವರಿಯಾಗಿ ಸೇರಿಸಲಾಗಿರುವಂತಹದ್ದು ಎಂದು ಟ್ವೀಟ್ ಮಾಡಿ ತಮ್ಮ ಬೆಂಬಲವನ್ನು ಸೂಚಿಸಿದ್ದರು.

ಸುಪ್ರೀಂ ಕೋರ್ಟ್ ಅಕ್ಟೋಬರ್ 09 ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಿರುವ ಕಾರಣ ದೀಪಾವಳಿ ಹಬ್ಬದಲ್ಲಿ ಪಟಾಕಿಗಳನ್ನು ಮಾರಾಟ ಮಾಡದಂತೆ ನಿಷೇಧವನ್ನು ನಿಧಿಸಿತ್ತು. ಈ ನಿಷೇಧವು ನವೆಂಬರ್ 01 ರವರೆಗೂ ಅನ್ವಯಿಸಲಿದೆ. ಕಳೆದ ವರ್ಷವು ದೆಹಲಿಯ ಎನ್‍ಸಿಆರ್ ಪ್ರದೇಶದಲ್ಲಿ ಪಟಾಕಿಗಳನ್ನು ಮಾರಾಟ ಮಾಡದಂತೆ ನಿಷೇಧವನ್ನು ವಿಧಿಸಲಾಗಿತ್ತು, ಅಲ್ಲದೇ ಮಾರಾಟ ಲೈಸೆನ್ಸ್‍ಗಳನ್ನು ನೀಡದಂತೆ ಸೂಚಿಸಿತ್ತು.

ಪಟಾಕಿ ಸಿಡಿತದಿಂದ ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಕೋರ್ಟ್ 2016ರಲ್ಲಿ ಪಟಾಕಿ ಮಾರಾಟಕ್ಕೆ ತಡೆ ನೀಡಿತ್ತು. 2016ರ ನವೆಂಬರ್‍ನಲ್ಲಿ ರಾಷ್ಟ್ರ ರಾಜಧಾನಿ ವಲಯದಲ್ಲಿ ಪಟಾಕಿ ಮಾರಾಟಕ್ಕೆ ಕೋರ್ಟ್ ನಿಷೇಧ ಹೇರಿತ್ತು. ಇದೇ ಸೆ.12ರ ತೀರ್ಪಿನಲ್ಲಿ ಪಟಾಕಿ ಮೇಲಿನ ತಡೆಯನ್ನು ತೆರವುಗೊಳಿಸಿ ನವೆಂಬರ್ 1ರಿಂದ ಮಾರಾಟಕ್ಕೆ ಅನುಮತಿ ನೀಡಿರುವುದಾಗಿ ನ್ಯಾಯಮೂರ್ತಿ ಎ ಕೆ ಸಿಕ್ರಿ ನೇತೃತ್ವದ ನ್ಯಾಯಪೀಠ ಹೇಳಿದೆ.

2005 ರಲ್ಲಿಯೂ ದೀಪಾವಳಿ ಸಂದರ್ಭದಲ್ಲಿ ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯ ಅವಧಿಯಲ್ಲಿ ಪಟಾಕಿಗಳನ್ನು ಸಿಡಿಸಲು ನಿಷೇಧವನ್ನು ವಿಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *