ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗ ಜಲಾಭಿಷೇಕಕ್ಕೆ ಸುಪ್ರೀಂನಿಂದ ಹೊಸ ನಿಯಮ

Public TV
1 Min Read

ನವದೆಹಲಿ: ಶಕ್ತಿಪೀಠಗಳಲ್ಲಿ ಒಂದಾಗಿರುವ ಉಜ್ಜೈನಿಯ ಮಹಾಕಾಳೇಶ್ವರ ಜ್ಯೋತಿರ್ಲಿಂಗಕ್ಕೆ ಇನ್ನು ಮುಂದೆ ಸಿಕ್ಕ ಸಿಕ್ಕ ನೀರನ್ನು ಬೇಕಾಬಿಟ್ಟಿ ಸುರಿಯುವಂತಿಲ್ಲ. ಶಿವಲಿಂಗಕ್ಕೆ ಶುದ್ಧೀಕರಿಸಿದ ನೀರಿನಿಂದ ಜಲಾಭಿಷೇಕ ಮಾಡಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಪರಂಪರೆಯ ಭಸ್ಮ ಮತ್ತು ಪಂಚಾಮೃತದಿಂದಾಗಿ ದೇವಸ್ಥಾನವಾದ ಮಹಾಕಾಳೇಶ್ವರ ಗರ್ಭಗುಡಿಯಲ್ಲಿರುವ ಶಿವಲಿಂಗ ಗಾತ್ರ ಕುಗ್ಗುತ್ತಿದೆ ಎಂದು ಉಜ್ಜೈನಿಯ ಸಾರಿಕಾ ಗುರು ಎಂಬವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಈ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಭಾರತದ ಭೂವೈಜ್ಞಾನಿಕ ಮತ್ತು ಪುರಾತತ್ವ ಇಲಾಖೆಯ ಸದಸ್ಯರ ತಂಡವನ್ನು ಒಳಗೊಂಡ ಸಮಿತಿಯನ್ನು ರಚಿಸಿ ಪರಿಶೀಲಿಸುವಂತೆ ಆದೇಶಿಸಿತ್ತು. ಈ ಸಮಿತಿ ಪರಿಶೀಲಿಸಿ ನೀಡಿದ ಶಿಫಾರಸಿನ ಆಧಾರದಲ್ಲಿ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಇನ್ನು ಮುಂದೆ ಜ್ಯೋತಿರ್ಲಿಂಗಕ್ಕೆ ಕೇವಲ ಶುದ್ಧೀಕರಿಸಿದ ನೀರಿನಿಂದ ಅಭಿಷೇಕ ಮಾಡಬೇಕು. ಓರ್ವ ಭಕ್ತ ಅರ್ಧ ಲೀಟರ್ ನೀರನ್ನು ಅಭಿಷೇಕಕ್ಕೆ ಬಳಸಬಹುದು ಎಂದು ಸೂಚಿಸಿದೆ.

ಮೊಸರು, ತುಪ್ಪ, ಸಕ್ಕರೆ ಅಭಿಷೇಕಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಪ್ರತಿಯೊಬ್ಬ ಭಕ್ತಾದಿಯೂ ಅಭಿಷೇಕಕ್ಕೆ ನಿಗದಿಪಡಿಸಿರುವ ಪ್ರಮಾಣದ ನೀರಿನಲ್ಲೇ ಶಿವಲಿಂಗಕ್ಕೆ ಅಭಿಷೇಕ ಮಾಡಬೇಕು. ಅಷ್ಟೇ ಅಲ್ಲದೇ ಇಂದಿನಿಂದಲೇ  ಈ ಆದೇಶ ಜಾರಿಯಾಗಬೇಕೆಂದು ಸುಪ್ರೀಂ ಸೂಚಿಸಿದೆ.

 

Share This Article
Leave a Comment

Leave a Reply

Your email address will not be published. Required fields are marked *