ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಂ ಶಾಸಕನಿಗೆ ಬಿಜೆಪಿ ಸಚಿವ ಒತ್ತಾಯ – ವಿಡಿಯೋ ವೈರಲ್

Public TV
1 Min Read

ರಾಂಚಿ: ಜಾರ್ಖಂಡ್‍ನ ಬಿಜೆಪಿ ಮಂತ್ರಿಯೊಬ್ಬರು ಕಾಂಗ್ರೆಸ್‍ನ ಮುಸ್ಲಿಂ ಶಾಸಕನಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಒತ್ತಾಯಿಸಿರುವ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾರ್ಖಂಡ್ ವಿಧಾನಸಭೆ ಕಟ್ಟಡದ ಮುಂಭಾಗವೇ ಈ ಘಟನೆ ನಡೆಸದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಟೀಕೆ ವ್ಯಕ್ತವಾಗುತ್ತಿದೆ. ‘ಸಹೋದರ ಇರ್ಫಾನ್ ನಾನು ಹೇಳಿದಂತೆ ಜೈ ಶ್ರೀರಾಮ್ ಎಂದು ಜೋರಾಗಿ ಹೇಳು’ವಂತೆ ಬಿಜೆಪಿ ಸಚಿವ ಸಿ.ಪಿ.ಸಿಂಗ್ ಅವರು ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಅವರಿಗೆ ಹೇಳಿಕೊಡುತ್ತಿದ್ದು, ಅಲ್ಲದೆ ಶಾಸಕರ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡು ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಬಿಜೆಪಿ ಸಚಿವರು ಮುಂದುವರಿದು, ಅವನ ಪೂರ್ವಜರು ರಾಮ್ ವಾಲೆ(ಹಿಂದೂಗಳು)ಯೇ ಹೊರತು ಬಾಬರ್ ವಾಲೆ(ಮುಸ್ಲಿಂ)ಯಲ್ಲ ಎಂದು ಶಾಸಕರಿಗೆ ಸ್ಪಷ್ಟಪಡಿಸುತ್ತಾರೆ. ಇದಕ್ಕೆ ಶಾಸಕ ಅನ್ಸಾರಿ ಪ್ರತಿಕ್ರಿಯಿಸಿ, ನೀವು ರಾಮನ ಹೆಸರನ್ನು ಬೆದರಿಸಲು ಬಳಸುತ್ತೀರಿ, ಈ ಮೂಲಕ ರಾಮನ ಹೆಸರಿಗೆ ಅವಮಾನ ಮಾಡುತ್ತೀರಿ. ಇಂತಹ ವಿಷಯಗಳಿಗೆ ಸಮಯ ನೀಡುವ ಬದಲು ಉದ್ಯೋಗ ಸೃಷ್ಟಿ, ವಿದ್ಯುತ್, ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಊರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಸಮಯ ನೀಡಿ ಎಂದು ತಿರುಗೇಟು ನೀಡಿದ್ದಾರೆ.

ನಾನು ನಿಮ್ಮನ್ನು ಹೆದರಿಸಲು ಈ ಮಾತನ್ನು ಹೇಳುತ್ತಿಲ್ಲ. ಬದಲಿಗೆ ನಿಮ್ಮ ಪೂರ್ವಜರು ‘ಜೈ ಶ್ರೀರಾಮ್’ ಎಂದು ಜಪಿಸುತ್ತಿದ್ದುದನ್ನು ಮರೆಯಬೇಡಿ. ತೈಮೂರ್, ಬಾಬರ್, ಘಜ್ನಿ ನಿಮ್ಮ ಪೂರ್ವಜರಲ್ಲ. ನಿಮ್ಮ ಪೂರ್ವಜರು ಶ್ರೀರಾಮನ ಅನುಯಾಯಿಗಳು ಎಂದು ಸಚಿವ ಸಿಂಗ್ ಹೇಳಿದ್ದಾರೆ.

ಸಿ.ಪಿ.ಸಿಂಗ್ ಜಾರ್ಖಂಡ್‍ನ ಬಿಜೆಪಿ ಸರ್ಕಾರದ ನಗರಾಭಿವೃದ್ಧಿ, ವಸತಿ ಹಾಗೂ ಸಾರಿಗೆ ಸಚಿವರಾಗಿದ್ದು, ಇರ್ಫಾನ್ ಅನ್ಸಾರಿ ಜಮ್ತಾರಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ಸ್ಪಷ್ಟನೆ ನೀಡಿದ್ದು, ಈ ಘಟನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ತಿಂಗಳು ಜಾರ್ಖಂಡ್‍ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ‘ಜೈ ಶ್ರೀರಾಮ್’ ಘೋಷಣೆ ಕೂಗುವಂತೆ ಹಿಂಸಿಸಲಾಗಿತ್ತು. ಅಲ್ಲದೆ, ಗಂಟೆಗಟ್ಟಲೇ ಆತನನ್ನು ಥಳಿಸಲಾಗಿತ್ತು. ಹಲ್ಲೆ ಮಾಡಿದ್ದರಿಂದ ವ್ಯಕ್ತಿ ಸಾವನ್ನಪ್ಪಿದ್ದ. ಆದರೆ, ಸಾವನ್ನಪ್ಪಿದ 24 ಯುವಕ ಬೈಕ್ ಕದಿಯಲು ಯತ್ನಿಸಿದ್ದ ಎಂದು ಆರೋಪ ಕೇಳಿ ಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *