10 ರೂಪಾಯಿ ಕೇಸರಿ ಶಾಲು ಹಾಕಿ ದಂಗೆ ಮಾಡಿಸೋದು ಬಿಜೆಪಿ ಅಜೆಂಡಾ: ಸತೀಶ್ ಜಾರಕಿಹೊಳಿ

Public TV
3 Min Read

– ಕಾಂಗ್ರೆಸ್‍ಗೆ ಗಾಂಧಿ ಪರಿವಾರ ಅನಿವಾರ್ಯ

ಬೆಳಗಾವಿ: 10 ರೂಪಾಯಿ ಕೇಸರಿ ಶಾಲು ಹಾಕೋದು, ದಂಗೆ ಮಾಡಿಸೋದು ಬಿಜೆಪಿ ಪಕ್ಷದ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸೋಲು ಮತ್ತು ದಿ ಕಾಶ್ಮೀರ್ ಫೈಲ್ಸ್ ಚಿತ್ರದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಇನ್ನಷ್ಟು ಸಿನಿಮಾ ಬಿಡುಗಡೆ ಮಾಡಲಿ. ಎಲ್ಲಾ ಎದುರಿಸಲು ನಾವು ಸಿದ್ಧವಿರಬೇಕು. ಕಾಂಗ್ರೆಸ್ ಗಾಡಿ ಹಳೆಯದು ಇದನ್ನು ಮಾಡರ್ನ್ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವ ಚೇಂಜ್ ಮಾಡಲು ಆಗುವುದಿಲ್ಲ. ಗಾಂಧಿ ಪರಿವಾರ ಇದ್ದರೆ ಮಾತ್ರ ಕಾಂಗ್ರೆಸ್ ಪಾರ್ಟಿ ಇರುತ್ತೆ. ಅವರಿಲ್ಲದ್ದೇ ಕಾಂಗ್ರೆಸ್ ಪಾರ್ಟಿ ನಡೆಯಲ್ಲ. ನ್ಯಾಚುರಲ್ ಆಗಿ ಅಧ್ಯಕ್ಷ ಸ್ಥಾನದಲ್ಲಿ ಅವರೇ ಬೇಕು ಎಂಬ ಅಭಿಪ್ರಾಯ ಇದೆ. ಈ ಹಿಂದೆ ಶರದ್ ಪವಾರ್ ಸೇರಿ ನಾಲ್ಕಾರು ಜನ ಅಧ್ಯಕ್ಷರಾಗಿದ್ದರು. ಬಹಳಷ್ಟು ಸಲ ನಾಯಕತ್ವದ ಬದಲಾವಣೆ ಮಾಡಿ ನೋಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಗಾಂಧಿ ಪರಿವಾರ ಅನಿವಾರ್ಯ ಎಂದರು. ಇದನ್ನೂ ಓದಿ: ದಿ ಕಾಶ್ಮೀರ ಫೈಲ್ಸ್ ಚಿತ್ರ ವಿಕ್ಷಣೆ ಮಾಡಿದ ಮಠಾಧೀಶರು

ಬಿಜೆಪಿಯವರು ಅಪಪ್ರಚಾರಕ್ಕೆ ಹೆಚ್ಚು ಟೈಮ್ ಸ್ಪೆಂಡ್ ಮಾಡ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯನ್ನು ಯುಟಿಲೈಸ್ ಮಾಡಿದ್ರು. ಗೋವಾದಲ್ಲಿ ಟಿಎಂಸಿ, ಆಪ್, ರೆವ್ಯುಲೇಶನರಿ ಗೋವಾ ಅಂತಾ ಹೊಸ ಪಾರ್ಟಿ ಬಂತು. ಚುನಾವಣಾ ಸಮಯದಲ್ಲಿ ಹೊರಗಿದ್ದ ಎಂಜಿಪಿಯನ್ನು ಮತವಿಭಜನೆಗೆ ಬಳಸಿದ್ರು. ಕರ್ನಾಟಕದಲ್ಲಿ ನಮ್ಮದೇ ಆದ ಮತಗಳಿವೆ. ಕರ್ನಾಟಕವನ್ನು ಯುಪಿ, ಗೋವಾಗೆ ಹೋಲಿಸಲು ಆಗುವುದಿಲ್ಲ. ದಕ್ಷಿಣ ಭಾರತದಲ್ಲಿ ಕಾಂಗ್ರೆಸ್‍ಗೆ ಕರ್ನಾಟಕ ಗಟ್ಟಿಯಾದ ನೆಲವಾಗಿದೆ. ಬೇರೆಯವರ ಜೊತೆ ನಮ್ಮನ್ನು ಕಂಪೇರ್ ಮಾಡೋಕೆ ಆಗಲ್ಲ. ಎಲ್ಲಾ ಪಕ್ಷದವರಿಗೆ ಬುದ್ಧಿ ಬರಬೇಕು, ಸೋತು ಸುಣ್ಣ ಆಗಬೇಕು. ಆದರೆ ಎಲ್ಲಾ ಒಂದೇ ಸಲ ಆಗಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಾಲಿವುಡ್ ಪಾಪ ತೊಳೆದ ದಿ ಕಾಶ್ಮೀರ್ ಫೈಲ್ಸ್: ಕಂಗನಾ ರಣಾವತ್

ಈಗ ದಿ ಕಾಶ್ಮೀರ್ ಫೈಲ್ಸ್ ಚಿತ್ರ ಹಿಡಿದು ಕುಳಿತಿದ್ದಾರೆ. ಅದು ಅವರ ಅಜೆಂಡಾ, ರಸ್ತೆ, ನೀರು, ಉದ್ಯೋಗ ಅದು ಮುಖ್ಯವಲ್ಲ. 10 ರೂಪಾಯಿ ಕೇಸರಿ ಶಾಲು ಹಾಕೋದು, ದಂಗೆ ಮಾಡಿಸೋದು. ಬಿಜೆಪಿ ಆಡಳಿತ ರಾಜ್ಯದಲ್ಲಿ ಎಷ್ಟು ಜನ ಸತ್ತಿದ್ದಾರೆ. ಆ ರೀತಿ ಸಾಕಷ್ಟು ಆಗಿದೆ, ಅದು ಯಾವಾಗ ಆಗಿದೆ, ಏನ್ ಆಗಿದೆ ನೋಡೋಣ ಎಂದರು.

ಕಾಶ್ಮೀರದಲ್ಲಿನ ಪಂಡಿತರ ಮೇಲೆ ದೌರ್ಜನ್ಯ ಆಗಿದ್ದು ಸತ್ಯವಲ್ವಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು ಆಗಿತ್ತು, ಬೇರೆ ದಲಿತರು, ಹಿಂದುಳಿದವರ ಮೇಲೆ ಅನ್ಯಾಯ ಆಗಿದ್ದು ಸಹ ಚಿತ್ರ ತಗೆಯಬೇಕು. ಮೊನ್ನೆ ಶಿವಮೊಗ್ಗದಲ್ಲಿ ಹತ್ಯೆ ಆಗಿದ್ದು ಹೈಲೈಟ್ ಆಯ್ತು. ಉಡುಪಿಯಲ್ಲಿ ದಲಿತ ಸತ್ತಿದ್ದು ಝೀರೋ ಆಯ್ತು. ವಿಜಯಪುರದಲ್ಲಿ ದಲಿತ ಮಹಿಳೆ ಮೇಲೆ ರೇಪ್ ಆಯ್ತು, ಅವರು ಹಿಂದೂ ಅಲ್ವಾ?. ತಮಗೆ ಬೇಕಾದ್ರೆ ಮಾತ್ರ ಹೇಗೆ ಬೇಕೋ ಹಾಗೇ ಹೈಲೈಟ್ ಮಾಡ್ತಾರೆ ಅಷ್ಟೇ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ಉಗ್ರವಾದ ಹುಟ್ಟಲು ಕಾಂಗ್ರೆಸ್ ಕಾರಣ ಎಂಬ ಗೋವಿಂದ ಕಾರಜೋಳ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಉಗ್ರವಾದ ಹುಟ್ಟಿದ್ದು ಬಹಳ ಹಿಂದೆ ಈಗ ಅಲ್ಲ. ಬಿಜೆಪಿ ಅವರೇನು ಉಗ್ರವಾದ ನಿಯಂತ್ರಣ ಮಾಡಿದ್ದಾರೆ. ಏಳೆಂಟು ವರ್ಷಗಳಲ್ಲಿ ಬಿಜೆಪಿ ಅವರು ಏನು ಮಾಡಿದ್ದಾರೆ?. ಸೈನಿಕರು ಎಂಟು ವರ್ಷದಲ್ಲಿ ಎಷ್ಟು ಜನ ಸತ್ತಿದ್ದಾರೆ ನೋಡಿ, ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಅವರ ಪಕ್ಷಕ್ಕೆ ಲಾಭ ಇದೆ, ಅವರೇ ಟಿಕೆಟ್ ಮಾರಲು ಕುಳಿತರೂ ಅಚ್ಚರಿಪಡಬೇಕಾಗಿಲ್ಲ. ನಾವು ದಿ ಕಾಶ್ಮೀರ್ ಫೈಲ್ಸ್ ಚಿತ್ರ ನೋಡುತ್ತೇವೆ ಅದರಲ್ಲೇನಿದೆ. ಬಿಜೆಪಿ ಯಾಕೆ ಹೈಲೈಟ್ ಮಾಡುತ್ತಿದ್ದಾರೆ ನೋಡೋಣ.  ದಲಿತರಿಗೆ ನೀರು ಕೊಡದೇ ಇರುವ ಪ್ರಕರಣಗಳು ದೇಶದಲ್ಲಿ ಎಷ್ಟೋ ಇವೆ. ಉತ್ತರ ಪ್ರದೇಶದಲ್ಲಿ ದಲಿತರು ಕುದುರೆ ಮೇಲೆ ಮೆರವಣಿಗೆ ಹೊರಟ್ರೆ ಹೊಡೆಯುತ್ತಾರೆ. ಇಂತಹದರ ಬಗ್ಗೆ ಸಹ ಚಿತ್ರ ಬರಬೇಕು. ದಿ ಕಾಶ್ಮೀರ್ ಫೈಲ್ಸ್ ಚಿತ್ರ ಈಗ ಜಸ್ಟ್ ಟ್ರೇಲರ್. ಚುನಾವಣೆ ಹತ್ತಿರ ಬಂದಾಗ ಇನ್ನೂ ಹಲವು ಚಿತ್ರಗಳ ಬಿಡುಗಡೆ ಆಗಲಿವೆ ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *