ಬಿಜೆಪಿ ಪರ ಕೆಲಸ ಮಾಡೋದನ್ನೇ ಕತ್ಲಲ್ಲಿ ಕುಳಿತು ಕಲ್ಲೆಸೆಯೋದು ಅಂದಿದ್ದು- ಸತೀಶ್ ವಾಗ್ದಾಳಿ

Public TV
2 Min Read

ಬೆಳಗಾವಿ: ಓರ್ವ ಸಚಿವರಾಗಿದ್ದಕೊಂಡು ನಾನು ಸರ್ಕಾರವನ್ನು ಬೀಳಿಸುತ್ತೇನೆ ಎಂದು ಹೇಳಿದ್ದರು. ಈ ಸರ್ಕಾರ ಸರಿಯಲ್ಲ, ಉಳಿಯಲ್ಲ ಎಂದು ಹೇಳುತ್ತಲೇ ಬಿಜೆಪಿ ಪರ ಕೆಲಸ ಮಾಡಿದರು. ಇದನ್ನೇ ಅವರು ಕತ್ತಲಲ್ಲಿ ಕುಳಿತು ಕಲ್ಲೆಸೆಯೋದು ಎಂದು ಹೇಳಿರುವುದಾಗಿ ಸಹೋದರ ಸತೀಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.

ಸಹೋದರ ರಮೇಶ್ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗೋಕಾಕ್ ತಾಲೂಕಿನ ಇತಿಹಾಸ ನೋಡಿದರೆ ಯಾರು ಯಾರನ್ನು ಹಾಳನ್ನು ಮಾಡಿದರು ಎನ್ನುವುದು ಗೊತ್ತಾಗುತ್ತದೆ. ಸಚಿವರಿದ್ದಾಗಲೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದರು ಎಂದು ದೂರಿದರು.

ಸಚಿವ ಸ್ಥಾನಕ್ಕಿಂತ ಬೇರೇನೂ ಕಿರೀಟ ಕೊಡೋಕೆ ಆಗಲ್ಲ. ಲಖನ್ ಸ್ಪರ್ಧೆ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳಲಿದೆ. ಕಾಂಗ್ರೆಸ್ ಎಂದು ಹೇಳಿ ಬಿಜೆಪಿ ಪರ ಕೆಲಸ ಮಾಡುತ್ತಾರೆ. ಇದನ್ನೇ ಕತ್ತಲಲ್ಲಿ ಕುಳಿತು ಕಲ್ಲು ಎಸೆಯೋದು ಎಂದು ಹೇಳಿದ್ದು. ಬಹಿರಂಗವಾಗಿ ಬಿಜೆಪಿ ಸೇರಿದ್ರೆ ಗೋಕಾಕ್‍ನಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ. ನನ್ನ ವಿರುದ್ಧ ಯಾರು ಸ್ಪರ್ಧೆ ಮಾಡಿದ್ರೂ ಸ್ವಾಗತಿಸುತ್ತೇನೆ. ರಮೇಶ್ ಜಾರಕಿಹೊಳಿ ಬೇಗ ನಿರ್ಧಾರ ಕೈಗೊಂಡ್ರೆ ಒಳ್ಳೆಯದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಮಂಡಿಯೂರಿತ್ತು:
ರಮೇಶ್ ಜಾರಕಿಹೊಳಿ ಎದುರಿಗೆ ರಾಹುಲ್ ಗಾಂಧಿ ಮಂಡಿಯೂರಿದ್ದರು. ಕೇವಲ ರಾಹುಲ್ ಗಾಂಧಿ ಅಷ್ಟೇ ಅಲ್ಲ, ಸಿದ್ದರಾಮಯ್ಯ, ಪರಮೇಶ್ವರ್, ವೇಣುಗೋಪಾಲರಂತೆ ಕಾಂಗ್ರೆಸ್‍ನ ಎಲ್ಲ ನಾಯಕರು ರಮೇಶ್ ಜಾರಕಿಹೊಳಿ ಮುಂದೆ ಮಂಡಿಯೂರಿದ್ದರು. ಪತ್ರದಲ್ಲಿ, ಫೋನ್‍ನಲ್ಲಿ ಖುದ್ದು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ರಮೇಶ್ ಜಾರಕಿಹೊಳಿ ಉಳಿಸಿಕೊಳ್ಳುವ ಇನ್ನು ಯಾವ ಪ್ರಯತ್ನವೂ ಉಳಿದಿಲ್ಲ ಎಂದು ಸ್ಫೋಟಕ ಹೇಳಿಕೆಯೊಂದನ್ನು ನೀಡಿದರು.

ಜಾರಕಿಹೊಳಿ ಕುಟುಂಬ ಇಬ್ಭಾಗವಾಗಲು ಅಂಬಿರಾವ್ ಪಾಟೀಲ್ ಕಾರಣ. ರಮೇಶ್ ಜಾರಕಿಹೊಳಿ ಮಗನನ್ನು ಆಡಿಸಲು ಬಂದವನು ಇಂದು ಜಿಲ್ಲೆಯನ್ನು ಆಳುತ್ತಿದ್ದಾನೆ. ಅಂಬಿರಾವ್ ಪಾಟೀಲ್ ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಅದರಿಂದ ಜನ ಬೇಸತ್ತು ಹೋಗಿದ್ದಾರೆ. ರಮೇಶ್ ಜಾರಕಿಹೊಳಿ ಮಾಸ್ಟರ್ ಮೈಂಡ್ ಅಂಬಿರಾವ್ ಪಾಟೀಲ್ ಆಗಿದ್ದಾರೆ ಎಂದು ಹೇಳಿದರು.

ಇದು ಹಿಂದೆ ಮುಂದುವರಿದರೆ ನಾವು ಜಾರಕಿಹೊಳಿ ಸರ್‍ನೇಮ್ ಬದಲಿಸಿಕೊಂಡು ಪಾಟೀಲ್ ಮಾಡಿಕೊಳ್ಳಬೇಕಾಗುತ್ತದೆ. ಇಂದು ರಮೇಶ್ ಜಾರಕಿಹೊಳಿ ಪಕ್ಷ ಬೀಡುವುದಕ್ಕೆ ಅಂಬಿರಾವ್ ಪಾಟೀಲ್ ಕಾರಣ. ರಮೇಶ್ ಜಾರಕಿಹೊಳಿ ಪಕ್ಷ ಬೀಡುವುದಾದರೆ ಬಿಡಲಿ. ನಿರ್ಧಾರ ಯಾವುದೇ ಆಗಿದ್ದರೂ ಬೇಗನೆ ತೆಗೆದುಕೊಳ್ಳಲಿ. 20 ವರ್ಷಗಳಿಂದ ರಮೇಶ್ ಜಾರಕಿಹೊಳಿ ಒಂದೇ ಒಂದು ಕೆಡಿಪಿ ಮೀಟಿಂಗ್ ಮಾಡಿಲ್ಲ ಎಂದು ಸಹೋದರನ ವಿರುದ್ಧ ಹರಿಹಾಯ್ದರು.

Share This Article
Leave a Comment

Leave a Reply

Your email address will not be published. Required fields are marked *