ಮಸ್ತ್ ಮನರಂಜನೆ ಪಡೆಯಲು ಸುವರ್ಣಾವಕಾಶ!

Public TV
1 Min Read

ಪರೇಷನ್ ಅಲಮೇಲಮ್ಮ ಚಿತ್ರದ ಮೂಲಕವೇ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದ ಪ್ರತಿಭಾವಂತ ನಟ ರಿಷಿ. ಅದೊಂದೇ ಒಂದು ಚಿತ್ರದ ಪಾತ್ರ ಮತ್ತು ಅದರಲ್ಲಿ ನಟಿಸಿದ ರೀತಿಯಿಂದಲೇ ಆ ನಂತರದಲ್ಲಿ ಓರ್ವ ನಟನಾಗಿ ಸುವರ್ಣಾವಕಾಶಗಳನ್ನೇ ಪಡೆದುಕೊಳ್ಳುತ್ತಾ ಸಾಗಿ ಬಂದಿರುವ ಅವರೀಗ ಸಾರ್ವಜನಿಕರಿಗೆ ಸುವರ್ಣಾವಕಾಶ ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಮುಹೂರ್ತ ಕಂಡ ದಿನದಿಂದಲೇ ಪರಿಚಿತವಾದ, ವಿಶೇಷವಾದ ಈ ಟೈಟಲ್ಲಿನ ಕಾರಣದಿಂದಲೇ ಪ್ರೇಕ್ಷಕರನ್ನು ಸೆಳೆದುಕೊಂಡಿದ್ದ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿದೆ.

ಇದು ಅನೂಪ್ ರಾಮಸ್ವಾಮಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ದೇವರಾಜ್, ಪ್ರಶಾಂತ್ ರೆಡ್ಡಿ ಮತ್ತು ಜನಾರ್ದನ್ ಚಿಕ್ಕಣ್ಣ ಇದನ್ನು ನಿರ್ಮಾಣ ಮಾಡಿದ್ದಾರೆ. ಸಾಮಾನ್ಯವಾಗಿ ಒಂದು ವರ್ಗಗಳಿಗೆ ಸೀಮಿತವಾದ ಚಿತ್ರಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲು ಏದುಸಿರು ಬಿಡಬೇಕಾಗುತ್ತದೆ. ಪ್ರೇಕ್ಷಕರು ಯಾವ ಕಾರಣಕ್ಕಾಗಿ ಸಿನಿಮಾ ನೋಡಲು ಬರುತ್ತಾರೆಂಬ ಬಗ್ಗೆ ಸ್ಪಷ್ಟವಾದ ಪರಿಕಲ್ಪನೆ ಇಟ್ಟುಕೊಂಡು ಎಲ್ಲ ವರ್ಗದವರಿಗೂ ಸಲ್ಲುವಂತೆ ನಿರ್ಮಾಣಗೊಂಡ ಚಿತ್ರಗಳ ಪಾಲಿಗೆ ಗೆಲುವೆಂಬುದು ಸಲೀಸಾಗುತ್ತದೆ. ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರವೂ ಸಹ ಅಂಥಾದ್ದೇ ಬಗೆಯಲ್ಲಿ ರೂಪುಗೊಂಡಿದೆ.

ಪ್ರತೀ ಪ್ರೇಕ್ಷಕರ ಅಭಿರುಚಿಗಳು ಏನೇ ಇದ್ದರೂ ಅವರೆಲ್ಲರ ಪ್ರಧಾನ ಆಸಕ್ತಿ ಮನೋರಂಜನೆಯೇ ಆಗಿರುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಈ ಚಿತ್ರದಲ್ಲಿ ಭರಪೂರವಾದ ಮನೋರಂಜನಾತ್ಮಕ ಅಂಶಗಳಿವೆ. ಇಲ್ಲಿ ಬಹುತೇಕ ಭಾಗವನ್ನು ಕಾಮಿಡಿ ಕಚಗುಳಿ ಇಡುವಂತೆ ರೂಪಿಸಲಾಗಿದೆಯಂತೆ. ಯಾವುದೇ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿಯ ರಿಷಿ ಇಲ್ಲಿ ನಾನಾ ಶೇಡುಗಳ ಪಾತ್ರದ ಮೂಲಕ ಪ್ರೇಕ್ಷಕರನ್ನು ಮೋಡಿಗೀಡು ಮಾಡಲಿದ್ದಾರೆ. ಧನ್ಯಾ ಬಾಲಕೃಷ್ಣ ಕೂಡಾ ನಾಯಕಿಯಾಗಿ ಅಂಥಾದ್ದೇ ವಿಶೇಷತೆ ಹೊಂದಿರುವ ಪಾತ್ರದಲ್ಲಿ ನಟಿಸಿದ್ದಾರಂತೆ. ದತ್ತಣ್ಣ, ರಂಗಾಯಣ ರಘು, ಮಿತ್ರಾ ಮುಂತಾದವರು ಇಷ್ಟೇ ವಿಶೇಷವಾದ ಪಾತ್ರಗಳಲ್ಲಿ ನೋಡುಗರನ್ನು ತಾಕಲು ತಯಾರಾಗಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *