ಬೆಂಗಳೂರು: ಹಾಡುಗಳ ಮೂಲಕ ಕನ್ನಡ ಸಿನಿ ಅಭಿಮಾನಿಗಳಲ್ಲಿ ಬಹುನಿರೀಕ್ಷೆ ಹುಟ್ಟಿ ಹಾಕಿದ್ದ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಚಿತ್ರ ಟ್ರೇಲರ್ ಬಿಡುಗಡೆಯಾಗಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.
ಆಗಸ್ಟ್ 14ರ ಮಧ್ಯರಾತ್ರಿ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದ್ದು, ಟ್ರೇಲರ್ ನಲ್ಲಿ ಮಕ್ಕಳ ನಟನೆ ಹಾಗೂ ಮುಗ್ಧತೆ ಗಮನ ಸೆಳೆದರೆ, ಕನ್ನಡ ಶಾಲೆಯ ಉಳಿವಿನ ಬಗ್ಗೆ ನಿರ್ದೇಶಕರು ಬೆಳಕು ಚೆಲ್ಲಲು ಪ್ರಯತ್ನಿಸುವುದು ಸ್ಪಷ್ಟವಾಗುತ್ತದೆ.
ನಟ ಕಿಚ್ಚ ಸುದೀಪ್ ಅರ್ಪಣೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರ ಮಕ್ಕಳ ಮುಗ್ಧ ಸಂಭಾಷಣೆಯಿಂದ ಆರಂಭವಾಗಿದ್ದು, ಶಾಲೆಯ ತುಂಟಾಟ, ಕಾಸರಗೋಡು ಪ್ರದೇಶದ ಪರಿಸರವನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಟ್ರೇಲರ್ನಲ್ಲೇ ಸಂಗೀತ ಗಮನ ಸೆಳೆದಿದ್ದು, ಉಗ್ರ ಹೋರಾಟವೊಂದರ ಗಂಭೀರ ವಿಷಯವನ್ನು ತಣ್ಣಗೆ ವಿವರಿಸಿದಂತಿದೆ.
ಆರಂಭದಿಂದಲೂ ಚಿತ್ರದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಅನಂತ್ ಕುಮಾರ್ ಅವರ ಪಾತ್ರದ ಕುರಿತು ಒಂದು ಝಲಕ್ ನೀಡಲಾಗಿದೆ. ಅನಂತ್ ನಾಗ್ ಅವರು ಹೇಳುವ ಡೈಲಾಗ್ ಕೇಳುತ್ತಿದ್ದಂತೆ ಕನ್ನಡಿಗನ ಮನ ಬಡಿದೆಬ್ಬಿಸುವಂತಿದ್ದು, ಎಲ್ಲಿಯವರೆಗೆ ಒಬ್ಬ ವಿದ್ಯಾರ್ಥಿ ನಾನು ಕನ್ನಡ ಮಾಧ್ಯಮದಲ್ಲಿ ಕಲಿಯಬೇಕು ಅಂತ ಬಂದು ಶಾಲೆಗೆ ಕೂರುತ್ತಾನೋ ಅವನಿಗೆ ಕನ್ನಡದಲ್ಲಿ ಶಿಕ್ಷಣ ಕೊಡೋದು ಸರ್ಕಾರದ ಕರ್ತವ್ಯ ಎಂಬ ಮಾತು ಅನಂತ್ ನಾಗ್ ಅವರು ಹೇಳುವುದು ಇಷ್ಟವಾಗುತ್ತದೆ.
ಅಪ್ಪಟ ಕನ್ನಡ ಸಿನಿಮಾ ಎಂದು ಕರೆಯಬಹುದಾದ ಚಿತ್ರ ಎಂಬ ಭಾವನೆ ಟ್ರೇಲರ್ ಕೊನೆಯ ವೇಳೆಗೆ ನೋಡುವ ಮನಮುಟ್ಟುತ್ತದೆ. ಅಲ್ಲದೇ ಚಿತ್ರ ನೋಡಲೇ ಬೇಕೆಂಬ ಭಾವನೆಯನ್ನು ಮೂಡಿಸುತ್ತದೆ. ಇದನ್ನು ಓದಿ: ಪ್ರಾಥಮಿಕ ಶಾಲೆಯಲ್ಲೇ ಫೇಲ್ ಆಗಿದ್ದೆ ಅನ್ನೋದನ್ನ ಬಿಚ್ಚಿಟ್ರು ರಿಷಬ್ ಶೆಟ್ಟಿ
ಟ್ರೇಲರ್ ಕಲಾತ್ಮಕವಾಗಿ ಮೂಡಿಬಂದಿದ್ದರೂ ಪಕ್ಕ ಕಾಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ಹೊಸ ಬಗೆಯ ಪ್ರಯೋಗತ್ಮಾಕ ಚಿತ್ರ ಅನ್ನಿಸುತ್ತಿದೆ. ಚಿತ್ರಕ್ಕೆ ರಾಮ ರಾಮಾ ರೇ ಖ್ಯಾತಿಯ ವಾಸುಕಿ ವೈಭವ್ ಸಂಗೀತವಿದ್ದು, ಈಗಾಗಲೇ ಹಾಡುಗಳ ಮೂಲಕ ಚಿತ್ರ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಇದರ ಬೆನ್ನಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಇದೇ 23ಕ್ಕೆ ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ ಅಧಿಕೃತವಾಗಿ ಆರಂಭವಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv