ಅನುಶ್ರೀಗೆ ಕೊಟ್ಟ ಮಾತಿನಂತೆ ನಡೆದ್ಕೊಂಡ ಹನುಮಂತನ ತಾಯಿ

Public TV
2 Min Read

ಬೆಂಗಳೂರು: ಸರಿಗಮಪ ಕಾರ್ಯಕ್ರಮದಲ್ಲಿ ಕುರಿಗಾಯಿ ಎಂದೇ ಖ್ಯಾತಿಯಾಗಿರುವ ಹನುಮಂತ ಅವರ ತಾಯಿ ಶೀಲವ್ವ ಅವರು ಕೊನೆಗೂ ನಿರೂಪಕಿ ಅನುಶ್ರೀ ಆಸೆಯನ್ನು ನೆರವೇರಸಿದ್ದು, ಈ ಮೂಲಕ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಈ ಬಗ್ಗೆ ಅನುಶ್ರೀ ತಮ್ಮ ಫೇಸ್‍ಬುಕ್, ಇನ್ಸ್ ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ. “ತಮ್ಮ ಹನುಮಂತ ಕೊಟ್ಟ ಕೊಡಿಗೆ, ಅವರ ತಾಯಿಯ ಉಡುಗೆ” ಎಂದು ಬರೆದು ಕೊಂಡಿದ್ದು, ಅವರ ತಾಯಿ ಕೊಟ್ಟ ಉಡುಪನ್ನು ತೊಟ್ಟು ಹನುಮಂತ ಮತ್ತು ತಾಯಿ ಶೀಲವ್ವ ಜೊತೆ ಸೆಲ್ಫಿ ತೆಗೆದುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಿಯಾಲಿಟಿ ಶೋ ನಲ್ಲಿ ಶಾಲೆಯ ದಿನಗಳನ್ನು ನೆನಪಿಸಿಕೊಂಡ ಆ್ಯಂಕರ್ ಅನುಶ್ರೀ

ಇಂದು ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮ ಪ್ರೋಮೋವನ್ನು ವಾಹಿನಿ ತನ್ನ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿದೆ. ಅದರಲ್ಲಿ ಮೊದಲಿಗೆ ಹನುಮಂತ್ ದಿವಂಗತ ಡಾ. ರಾಜ್‍ಕುಮಾರ್ ಅಭಿನಯದ ‘ಸಂಪತ್ತಿಗೆ ಸವಾಲ್, ಸಿನಿಮಾದ ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡನ್ನು ಹಾಡಿದ್ದಾರೆ. ಆಗ ಅನುಶ್ರೀ ಹನುಮಂತನ ತಾಯಿ ಕೊಟ್ಟಿರುವ ಉಡುಗೆ ತೊಟ್ಟು ವೇದಿಕೆಯ ಮೇಲೆ ಎಂಟ್ರಿಕೊಟ್ಟಿದ್ದಾರೆ. ಅನುಶ್ರೀ ಅವರನ್ನು ಆ ಉಡುಪಿನಲ್ಲಿ ನೋಡಿ ಸಂಗೀತ ನಿರ್ದೇಶಕ ಹಂಸಲೇಖ ಅವರು, ಈ ಭೂಷಣ ಧರಿಸಿರುವುದರಿಂದ ನಮಗೆ ಹೆಮ್ಮೆ, ಗೌರವವಾಗಿದೆ ಎಂದು ಖುಷಿಯಿಂದ ಹೇಳಿದ್ದಾರೆ. ಇದನ್ನೂ ಓದಿ: ಸರ್ಪ್ರೈಸ್ ನೋಡಿ ದೊಡ್ಡ ವೇದಿಕೆಯಲ್ಲೇ ಕಣ್ಣೀರಿಟ್ಟ ಹನುಮಂತ

https://www.instagram.com/p/BsQCrpuhQN4/

ಅನುಶ್ರೀಗೆ ನೀಡಿರುವ ಉಡುಗೊರೆಯಲ್ಲಿ ಒಂದು ವಿಶೇಷತೆ ಇದೆ. ಅದೇನೆಂದರೆ ಅವರು ಧರಿಸಿದ್ದ ಉಡುಪಿನಲ್ಲಿದ್ದ ಮುತ್ತು-ಹವಳ, ಮಣಿ, ಕನ್ನಡಿ ಎಲ್ಲವನ್ನು ಹನುಮಂತನ ತಾಯಿ ಶೀಲವ್ವ ಅವರು ಸ್ವತಃ ತಮ್ಮ ಕೈಯಾರೆ ಪೋಣಿಸಿದ್ದಾರೆ. ಶೀಲವ್ವ ಪ್ರೀತಿಯಿಂದ ಕೊಟ್ಟಂತಹ ಉಡುಗೆಯಿಂದ ಅನುಶ್ರೀ ಸಂತಸ ಪಟ್ಟಿದ್ದು, ಪ್ರತಿಯಾಗಿ ವೇದಿಕೆಯ ಮೇಲೆಯೇ ಶೀಲವ್ವ ಅವರ ಕೆನ್ನೆಗೆ ಒಂದು ಮುತ್ತು ಕೊಟ್ಟಿದ್ದಾರೆ.

ಈ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹನುಮಂತನ ತಾಯಿ ಶೀಲವ್ವ ಅವರನ್ನು ವೇದಿಕೆಯ ಮೇಲೆ ಕರೆಸಿದ್ದರು. ಈ ವೇಳೆ ನಿರೂಪಕಿ ಅನುಶ್ರೀ, ಶೀಲವ್ವ ಧರಿಸಿದ್ದ ಉಡುಗೆಯನ್ನು ತನಗೂ ಕೊಡಿಸುವಂತೆ ಕೇಳಿಕೊಂಡಿದ್ದರು. ಅಂದರಂತೆಯೇ ಅವರ ತಾಯಿ ಅನುಶ್ರೀಗಾಗಿ ಲಂಬಾಣಿ ಶೈಲಿಯ ಉಡುಗೆಯನ್ನು ತಂದು ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *