ಸರಿಗಮಪ ಗಾಯಕಿ ರುಬಿನಾಳನ್ನು ಪ್ರಶಂಸಿಸಿದ ಶಿಕ್ಷಣ ಇಲಾಖೆ

Public TV
1 Min Read

ಬೆಂಗಳೂರು: ಖಾಸಗಿ ವಾಹಿನಿಯ ರಿಯಾಲಿಟಿ ಶೋ ಸರಿಗಮಪ ಗಾಯಕಿ, ಸರ್ಕಾರಿ ಶಾಲೆ ವಿದ್ಯಾರ್ಥಿನಿ ರುಬಿನಾಳನ್ನು ಶಿಕ್ಷಣ ಇಲಾಖೆ ಪ್ರಶಂಸಿಸಿದೆ.

ಸರ್ಕಾರಿ ಶಾಲೆಯ ಮಹತ್ವ ತಿಳಿಸಿದ ರುಬಿನಾಗೆ ಶಿಕ್ಷಣ ಇಲಾಖೆ ಅಭಿನಂದನೆ ಸಲ್ಲಿಸಿದೆ. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ದೇಶಕ ಜಯಕುಮಾರ್ ವಿದ್ಯಾರ್ಥಿನಿ ರುಬಿನಾಗೆ ಪ್ರಶಂಸಾ ಪತ್ರ ನೀಡಿದ್ದಾರೆ. ರುಬಿನಾ ಹಾವೇರಿ ಜಿಲ್ಲೆಯ ಮೇವುಂಡಿ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಳೆ. ಈಕೆ ತನ್ನ ಹಾಡಿನ ಮೂಲಕವೇ ಶಾಲೆಯ ಮಹತ್ವ ತಿಳಿಸಿದ್ದಳು. ಸದ್ಯ ರುಬಿನಾ ಗಾಯನಕ್ಕೆ ಶಿಕ್ಷಣ ಇಲಾಖೆ ಫಿದಾ ಆಗಿದೆ. ಈ ಹಾಡಿನ ಸಾಲುಗಳು ಬರೆದ ಶಿಕ್ಷಕರಿಗೂ ಇಲಾಖೆ ಅಭಿನಂದನೆ ಸಲ್ಲಿಸಿದೆ.

ರುಬೀನಾ ‘ರಾಜಕುಮಾರ’ ಚಿತ್ರದ `ಬೊಂಬೆ ಹೇಳುತೈತೆ’ ಹಾಡಿಗೆ ತನ್ನ ಸರ್ಕಾರಿ ಶಾಲೆಯ ಬಗ್ಗೆ ಬರೆದು ಸರಿಗಮಪ ವೇದಿಕೆಯಲ್ಲಿ ಹಾಡಿದ್ದಳು. ಈ ಹಾಡು ಕೇಳಿ ತೀರ್ಪುಗಾರರಾದ ರಾಜೇಶ್ ಕೃಷ್ಣನ್, ಅರ್ಜುನ್ ಜನ್ಯ ಹಾಗೂ ವಿಜಯ್ ಪ್ರಕಾಶ್ ಇಷ್ಟಪಟ್ಟಿದ್ದರು. ಬಳಿಕ ವಿಜಯ್ ಪ್ರಕಾಶ್ ಅವರು ಈ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸರ್‍ಗೆ ತೋರಿಸಬೇಕು ಎಂದು ಹೇಳಿದ್ದರು. ಈ ವಿಷಯ ಪುನೀತ್‍ಗೆ ತಿಳಿಯುತ್ತಿದ್ದಂತೆ ಅವರು ರುಬೀನಾಳನ್ನು ಭೇಟಿ ಮಾಡಿದ್ದಾರೆ.

ಪುನೀತ್ ರುಬಿನಾಳನ್ನು ತಮ್ಮ ಮನೆಗೆ ಕರೆಸಿಕೊಂಡು ತನ್ನ ಮುಂದೆಯೇ ಹಾಡಲು ಹೇಳಿದ್ದರು. ಬಳಿಕ ಪುನೀತ್ ರುಬೀನಾಳ ಹಿನ್ನೆಲೆ ಕೇಳಿದ್ದಾರೆ. ರುಬೀನಾ ತಾನು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವುದಾಗಿ ಹೇಳಿದಾಗ ಪುನೀತ್ ಬಹಳ ಹೆಮ್ಮೆಪಟ್ಟರು. ಅಲ್ಲದೆ ನಿನ್ನ ಕಣ್ಣು ಹಾಗೂ ವಾಯ್ಸ್ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರುಬೀನಾ ತಂದೆಗೆ ಶುಭ ಕೋರಿದ್ದರು. ರುಬಿನಾಳ ಹಾಡು ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವೈರಲ್ ಆಗುತ್ತಿದ್ದು, ಜಾಲತಾಣಿಗರು ಕೂಡ ವಿದ್ಯಾರ್ಥಿನಿಯ ಹಾಡಿಗೆ ಮನಸೋತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *