ಯಾರ ಸಾಧನೆ ಎಷ್ಟು? ಭಾನುವಾರ ಜನರಿಗೆ ಗೊತ್ತಾಗುತ್ತೆ: ವಿಶ್ವನಾಥ್‍ಗೆ ಸಾ.ರಾ.ಮಹೇಶ್ ಸವಾಲ್

Public TV
2 Min Read

ಮೈಸೂರು: ನಾನಾ ಅವರಾ ಅನ್ನೋದನ್ನ ಭಾನುವಾರ ಜನರ ಮುಂದೆ ನಿರೂಪಿಸುತ್ತೇನೆ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರಿಗೆ ಮಾಜಿ ಸಚಿವ ಸಾ.ರಾ ಮಹೇಶ್ ಬಹಿರಂಗ ಸವಾಲು ಹಾಕಿದ್ದಾರೆ.

ಕೆ.ಆರ್.ನಗರ ಅಭಿವೃದ್ಧಿ ಮಾಡುವುದರಲ್ಲಿ ಸಾ.ರಾ.ಮಹೇಶ್ ವಿಫಲರಾಗಿದ್ದಾರೆ. ಅವರಿಗಿಂತ ನಾನೇ ಹೆಚ್ಚು ಅಭಿವೃದ್ಧಿ ಮಾಡಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದರು. ಈ ಹೇಳಿಕೆಗೆ ಸಾ.ರಾ ಮಹೇಶ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಯಾವ ಯಾವ ಕೆಲಸ ಮಂಜೂರಾಗಿದೆ ಎಂದು ಅವರಿಗೆ ಗೊತ್ತಿಲ್ಲ. ಅವರು ದಿನ ಬೆಳಗ್ಗೆ ಎದ್ದರೆ ಯಾರಿಗೆ ವಿಷ ಹಾಕಬೇಕು? ಯಾವಾಗ ಸರ್ಕಾರ ಬೀಳಿಸಬೇಕು? ಯಾರ ಹತ್ತಿರ ದುಡ್ಡು ತಗೊಂಡು ಲೈಫ್ ಸೆಟಲ್ ಮಾಡ್ಕೋಬೇಕು ಎನ್ನುವ ಬಗ್ಗೆ ಯೋಚನೆಯಲ್ಲಿದ್ದರು. ಹೀಗಾಗಿ ಕೆ.ಆರ್.ನಗರಕ್ಕೆ ಯಾವ ಯಾವ ಕೆಲಸ ಮಂಜೂರಾಗಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಸಾ.ರಾ ಮಹೇಶ್ ಟಾಂಗ್ ಕೊಟ್ಟರು.

ಈ ಹೇಳಿಕೆಗೆ ಭಾನುವಾರ ಸುದ್ದಿಗೋಷ್ಠಿ ಕರೆದು ದಾಖಲೆ ಸಮೇತ ಉತ್ತರ ಕೊಡುತ್ತೇನೆ. ನಾನು ಅಭಿವೃದ್ಧಿ ಮಾಡಿದ್ದೀನಾ? ಇಲ್ಲಾ ಅವರು ಅಭಿವೃದ್ಧಿ ಮಾಡಿದ್ದಾರಾ ಅನ್ನೋದನ್ನ ಜಿಲ್ಲೆಯ ಹಾಗೂ ತಾಲೂಕಿನ ಜನರಿಗೆ ಹೇಳುತ್ತೇನೆ. ಅವರು ಇನ್ನೊಂದು ಪದ ಹೇಳಿದ್ದಾರೆ ಸುದ್ದಿಗೋಷ್ಠಿ ನಡೆದ ಮೇಲೆ ಅದು ನಾನಾ ಅಥವಾ ಅವರಾ ಎಂದು ಜನ ನಿರ್ಧಾರ ಮಾಡುತ್ತಾರೆ ಎಂದು ವಿಶ್ವನಾಥ್ ಅವರಿಗೆ ಸವಾಲ್ ಹಾಕಿದರು.

ವಿಶ್ವನಾಥ್ ಹೇಳಿದ್ದೇನು?
ಇವತ್ತು ದೇವೇಗೌಡರ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೆ ಎಂದರೆ ಅದಕ್ಕೆ ಸಾರಾ ಮಹೇಶ್ ಮತ್ತು ಆತನ ಕೆಲ ಸ್ನೇಹಿತರು ಕಾರಣ. ದೇವೇಗೌಡರ ಮನೆಗೆ ಇವತ್ತು ಅನ್ಯಾಯವಾಗಿದ್ದರೆ ಅದಕ್ಕೂ ಸಾರಾ ಮಹೇಶ್ ಕಾರಣ. ದೇವೇಗೌಡರ ಕಣ್ಣೀರಿಗೂ ಅವರೇ ಕಾರಣ ಎಂದು ಕಿಡಿಕಾರಿದ್ದರು.

ಸಾರಾ ಮಹೇಶ್ ದುರಹಂಕಾರದಿಂದ ಒಕ್ಕಲಿಗ ಶಾಸಕರೇ ಜೆಡಿಎಸ್‍ನಿಂದ ದೂರವಾದರು. ಇವತ್ತಿನ ದೇವೇಗೌಡರ ಈ ಸ್ಥಿತಿಗೆ ನಾವಲ್ಲ ಕಾರಣ ನೀವು. ಮಹೇಶ್ ಕ್ಷೇತ್ರದಲ್ಲಿ ಕೆಲವರಿಗೆ 500 ರೂಪಾಯಿ, 1 ಸಾವಿರ ರೂಪಾಯಿ ಕೊಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಆದರೆ ನನ್ನದ್ದು ಅಭಿವೃದ್ಧಿ ರಾಜಕಾರಣ. ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಿ. ಕೆ.ಆರ್. ನಗರದ ಅಭಿವೃದ್ಧಿಗೆ ನಾನು ಮಾಡಿದಷ್ಟು ಕೆಲಸ ನೀವು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *