ಉಜಿರೆಯಲ್ಲಿ ಮಾನವೀಯತೆ ಮೆರೆದ ರಿಯಲ್ ಸ್ಟಾರ್ ಉಪೇಂದ್ರ

Public TV
1 Min Read

ಮಂಗಳೂರು: ರಿಯಲ್ ಸ್ಟಾರ್ ಹಾಗೂ ಕೆಪಿಜೆಪಿ ಸ್ಥಾಪಕ ಉಪೇಂದ್ರ ಅವರು ಮಾನವೀಯತೆ ಮೆರೆದಿದ್ದಾರೆ. ಅಂಧ ಮಕ್ಕಳ ಸಹಾಯಕ್ಕಾಗಿ ರಸ್ತೆ ಬದಿಯಲ್ಲಿ ಹಾಡು ಹಾಡುತ್ತಾ ದೇಣಿಗೆ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ನಟ ಕಾರಿನಿಂದ ಇಳಿದು ಮಕ್ಕಳ ಜೊತೆ ಬೆರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ರಸ್ತೆ ಬದಿ ಹಾಡುತ್ತಾ ದೇಣಿಗೆ ಯಾಚಿಸುತ್ತಿದ್ದರು. ಈ ಸಂದರ್ಭದಲ್ಲಿ ಅದೇ ಮಾರ್ಗವಾಗಿ ತನ್ನ ಕಾರಿನಲ್ಲಿ ಹೋಗುತ್ತಿದ್ದ ನಟ ಉಪೇಂದ್ರ, ತಕ್ಷಣ ಕಾರು ನಿಲ್ಲಿಸಿ ಹಾಡು ಹೇಳುತ್ತಿದ್ದ ಅಂಧ ಮಕ್ಕಳ ಬಳಿ ಹೋಗಿದ್ದಾರೆ. ಮಕ್ಕಳ ಹಾಡಿಗೆ ಮೆಚ್ಚಿ ಮೂರು ಸಾವಿರ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ.

ಅಂಧರು ರಸ್ತೆ ಬದಿ ಹಾಡಿಕೊಂಡು ಹೋಗುತ್ತಿದ್ದರೂ ಮುಖ ತಿರುಗಿಸಿಕೊಂಡು ಹೋಗೋ ಜನರ ನಡುವೆ ಸ್ಟಾರ್ ನಟ ದಿಢೀರ್ ತಮ್ಮ ಬಳಿಗೆ ಬಂದು ಹಣ ನೀಡಿದ್ದು ಅಂಧ ಕಲಾವಿದರಿಗೆ ಖುಷಿ ತಂದಿದೆ.

ಬಳಿಕ ಎಲ್ಲಾ ಮಕ್ಕಳಿಗೂ ಶುಭ ಹಾರೈಸಿದ ಉಪೇಂದ್ರ ಮತ್ತೆ ಕಾರು ಹತ್ತಿದ್ದಾರೆ. ಯಾವುದೇ ಅಹಂಕಾರ ಇಲ್ಲದೆ ಅಂಧ ಮಕ್ಕಳ ಜೊತೆ ಉಪೇಂದ್ರ ತೋರಿದ ಪ್ರೀತಿಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *