‘ಸದ್ದು’ ಮಾಡುತ್ತಿದೆ ಸ್ಯಾಂಡಲ್ ವುಡ್ ಮತ್ತೊಂದು ಸಿನಿಮಾ

Public TV
2 Min Read

ಸ್ಪೆನ್ಸ್, ಥ್ರಿಲ್ಲರ್ ಮಾದರಿಯ ಸಿನಿಮಾಗಳನ್ನು ಪ್ರೇಕ್ಷಕ ನಿಧಾನಗತಿಯಲ್ಲೇ ತಗೆದುಕೊಳ್ಳುತ್ತಾನೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೊಸಬರು ಮತ್ತು ಪ್ರತಿಭಾವಂತ ಟೀಮ್‍ ಹೊಂದಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಬೆಲ್‍ ಬಾಟಮ್’ ಸಿನಿಮಾದ ನಂತರ ಆ ಮಾದರಿಯ ಮತ್ತೊಂದು ಸಿನಿಮಾವನ್ನು ಪ್ರೇಕ್ಷಕ ಕೊಂಡಾಡುತ್ತಿದ್ದಾನೆ ಎನ್ನುವ ನೆನಪನ್ನು ‘ಸದ್ದು ವಿಚಾರಣೆ ನಡೆಯುತ್ತಿದೆ’ ಚಿತ್ರ ಮಾಡಿದೆ. ಭಾಸ್ಕರ್ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ಮಾಡುವಂತಹ ಸಾಕಷ್ಟು ಸಂಗತಿಗಳು ಇವೆ ಎನ್ನುವುದು ವಿಶೇಷ.

ಈ ಚಿತ್ರದ ಮೂಲಕ ಪಶುವೈದ್ಯರಾಗಿರುವ ಮಧುನಂದನ್ ಸಿನಿಮಾ ರಂಗಕ್ಕೆ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಥೇಟ್ ನೆನಪಿರಲಿ ಪ್ರೇಮ್ ರೀತಿಯಲ್ಲಿ ಕಾಣುವ ಇವರು, ಈ ಸಿನಿಮಾದಲ್ಲಿ ಪೃಥ್ವಿ ಎಂಬ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದು, ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ್ದಾರೆ. ಇದು ಇವರ ಚೊಚ್ಚಲ ಸಿನಿಮಾವಾಗಿದ್ದರೂ, ರಂಗಭೂಮಿ ಮೇಲಿನ ಸೆಳೆತ ಮತ್ತು ನಟನಾಗಬೇಕು ಎನ್ನುವ ಹಂಬಲವೇ ಇಂಥದ್ದೊಂದು ಪಾತ್ರ ಮಾಡಿಸಿದೆ. ಆ ಪಾತ್ರವನ್ನು ನೋಡುಗ ಕೂಡ ಮೆಚ್ಚಿಕೊಂಡಿದ್ದಾನೆ. ಇದನ್ನೂ ಓದಿ: ಕಾಶ್ಮೀರ್‌ ಫೈಲ್ಸ್‌ ಕಾಲ್ಪನಿಕ ಅಂತಾ ಸಾಬೀತುಪಡಿಸಿದ್ರೆ, ಸಿನಿಮಾ ಮಾಡೋದನ್ನೇ ಬಿಡ್ತೀನಿ- ವಿವೇಕ್ ಅಗ್ನಿಹೋತ್ರಿ

ಈ ಸಿನಿಮಾದ ಮತ್ತೊಂದು ವಿಶೇಷ  ಅಂದರೆ, ಎಲ್ಲಾ ವರ್ಗದ ಪ್ರೇಕ್ಷಕರನ್ನು ಮನದಲ್ಲಿಟ್ಟುಕೊಂಡು ಚಿತ್ರಕಥೆ ಹೆಣೆದಿದ್ದಾರೆ ನಿರ್ದೇಶಕ ಭಾಸ್ಕರ್ ರಾವ್. ಪುಟ್ಟ ಪುಟ್ಟ ಪಾತ್ರಕ್ಕೂ ಹಿನ್ನೆಲೆ ಕೊಟ್ಟಿದ್ದಾರೆ. ಹಾಗಾಗಿ ಚಿತ್ರಕಥೆಯಲ್ಲಿ ಹಲವು ತಿರುವುಗಳಿದ್ದರೂ, ನೋಡುಗನನ್ನು ಈ ಸಿನಿಮಾ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ತಿರುವುಗಳಲ್ಲಿ ಥ್ರಿಲ್ ಕೊಡುತ್ತದೆ. ಒಂದಷ್ಟು ದೃಶ್ಯಗಳು ನಗಿಸುತ್ತಲೇ ಮತ್ತೆ ಸಿನಿಮಾದ ಕಥೆಯೊಳಗೇ ನಮ್ಮನ್ನು ತಂದು ಬಿಡುವುದು ಚಿತ್ರದ ಹೆಗ್ಗಳಿಕೆ.

ಅಚ್ಯುತ್ ಕುಮಾರ್, ರಾಘು ಶಿವಮೊಗ್ಗ, ಪಾವನಾ, ರಾಕೇಶ್ ಮಯ್ಯ, ಜಹಾಂಗೀರ್, ಕೃಷ್ಣ ಹೆಬ್ಬಾಳೆಯಂತಹ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ನಟನೆ. ಅಚ್ಯುತ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಹೊಸ ಅನುಭವವನ್ನೇ ಕೊಟ್ಟರೆ, ರಾಘು ಶಿವಮೊಗ್ಗ ಖಳನಾಯಕನಾಗಿ ಅಚ್ಚರಿ ಮೂಡಿಸುತ್ತಾರೆ. ಪಾವನಾ ಮತ್ತು ರಾಕೇಶ್ ಮಯ್ಯ ಲವ್ ಸ್ಟೋರಿ ಈ ಹೊತ್ತಿನ ಸಮಾಜಕ್ಕೆ ಹಿಡಿದ ಕನ್ನಡಿಯಂತಿದೆ. ಜಹಾಂಗೀರ್ ಒದ್ದಾಟ, ಕೃಷ್ಣ ಹೆಬ್ಬಾಳೆಯವರ ಗತ್ತು ಸಿನಿಮಾಗೆ ಮತ್ತಷ್ಟು ಕಸುವು ತುಂಬಿದೆ.

ಮೇಲ್ನೋಟಕ್ಕೆ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಮರ್ಡರ್ ಮಿಸ್ಟರಿ ಸಿನಿಮಾ ಅನಿಸಿದರೂ, ಕ್ಯಾಮೆರಾ ಕೆಲಸ, ಹಿನ್ನೆಲೆ ಸಂಗೀತ, ಹಾಡು ಮತ್ತು ಪಾತ್ರಗಳ ಹಿನ್ನೆಲೆಯ ಕಾರಣದಿಂದಾಗಿ ನಾನು ಅಂದುಕೊಂಡಿದ್ದನ್ನು ಸುಳ್ಳು ಮಾಡುತ್ತಾ, ಹೊಸ ಲೋಕವನ್ನೇ ಸಿನಿಮಾ ನಮ್ಮೆದುರು ತಂದಿಡುತ್ತಿದೆ. ಭಾಸ್ಕರ್ ನಿರ್ದೇಶನದ ಚೊಚ್ಚಲು ಸಿನಿಮಾ ಇದಾಗಿದ್ದರೂ, ಹಾಗೆ ಅನಿಸುವುದಿಲ್ಲ. ಆ ರೀತಿಯಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಪ್ರತಿಭಾವಂತರ ತಂಡವೇ ಈ ಚಿತ್ರದಲ್ಲಿ ಇರುವುದರಿಂದ, ಚಿತ್ರವು ಸ್ಯಾಂಡಲ್ ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *