ಬಂಟಿ ಔರ್ ಬಬ್ಲಿ ಸಿನಿಮಾ ರೀತಿಯಲ್ಲಿ ಸ್ಯಾಂಡಲ್‍ವುಡ್ ಜೋಡಿಯಿಂದ ಜನರಿಗೆ ಮೋಸ

Public TV
2 Min Read

ಬೆಂಗಳೂರು: ಬಾಲಿವುಡ್‍ನ `ಬಂಟಿ ಔರ್ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಹಾಗೂ ರಾಣಿ ಮುಖರ್ಜಿ ಮೋಸ ಮಾಡೋ ರೀತಿಯಲ್ಲೇ ಇಲ್ಲೊಂದು ಸ್ಯಾಂಡಲ್‍ವುಡ್ ಜೋಡಿ ರಿಯಲ್ ಲೈಫ್‍ನಲ್ಲಿ ಜನರಿಂದ ಹಣ ಪಡೆದು ಮೋಸ ಮಾಡಿದ್ದಾರೆ.

ಸ್ಯಾಂಡಲ್‍ವುಡ್‍ನ ನಟ ಮತ್ತು ಕೊ-ಆರ್ಡಿನೇಟರ್ ಆಗಿರುವ ಚಂದು ಆಚಾರ್ಯ ಮತ್ತು ವೀಣಾ ಜೋಡಿ ಜನರಿಗೆ ಮಹಾ ಮೋಸ ಮಾಡಿದ್ದಾರೆ. ಇವರು ಬೊಮ್ಮಸಂದ್ರದಲ್ಲಿ ಜನಸ್ಫೋಟ ಸೌಂದರ್ಯ ಕೊ-ಆಪರೇಟೀವ್ ಬ್ಯಾಂಕ್ ಮಾಡಿದ್ರು. ಚಂದು ಆಚಾರ್ಯ ನೂರಾರು ಜನರಿಂದ ಲಕ್ಷಾಂತರ ರೂ. ಹಣ ಪಡೆದು ವಂಚನೆ ಮಾಡಿದ್ದಾನೆ.

ವಂಚಿಸಿದ್ದು ಹೇಗೆ?: ಮೊದಲು ವೀಣಾ ಜನರನ್ನು ಸಂಪರ್ಕಿಸಿ, ನೀವು ನಮ್ಮಲ್ಲಿ ಹಣ ಹೂಡಿದರೆ ಒಂದು ಸೈಟ್ ಮತ್ತು ಪ್ರತೀ ತಿಂಗಳ ಕಂತಿಗೆ ಅಕ್ಕಿ, ಬೇಳೆ ನೀಡುತ್ತೇವೆ ಎಂದು ಹೇಳಿ ಆಮಿಷ ಒಡ್ಡಿ ನಂಬಿಸಿದ್ದಳು. ನಂತರ ಇದನ್ನ ನಂಬಿದ ನೂರಾರು ಜನರು ಇವರು ಬೋಗಸ್ ಕಂಪನಿಗೆ ಹಣ ಕಟ್ಟಿದ್ದಾರೆ. ಒಂದು ತಿಂಗಳಾದ ಮೇಲೆ ಮನೆಗೆ ರೇಷನ್, ಬೇಳೆ ಕೊಡದಾಗ ಇವರು ಮೋಸ ಮಾಡಿ ಹಣವನ್ನು ವಂಚಿಸಿದ್ದಾರೆ ಎಂದು ಗೊತ್ತಾಗಿದೆ. ನಂತರ ಮೋಸ ಹೋದ ಜನರು ಬಾಗಲಗುಂಟೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ.

ಚಂದು ಆಚಾರ್ಯ, ಕಂಡೋರ ಹೆಂಡ್ತಿಯನ್ನು ಕರೆದುಕೊಂಡು ಬಂದಿದ್ದನಂತೆ. ವೀಣಾಳನ್ನು ಪಾಲಾಕ್ಷಯ್ಯ ಎಂಬವರು ಮದುವೆ ಮಾಡಿಕೊಂಡಿದ್ದರು. ಸಿನಿಮಾ ಹಾಗೂ ಸೀರಿಯಲ್‍ನಲ್ಲಿ ಚಾನ್ಸ್ ಕೊಡಿಸ್ತೀನಿ ಅಂತಾ ತಲೆ ಕಡೆಸಿ ಗಂಡ ಪಾಲಾಕ್ಷಯ್ಯ ಬಾಂಬೆಗೆ ಕೆಲಸಕ್ಕೆ ಹೋದಾಗ ವೀಣಾಳನ್ನ ಕರೆದುಕೊಂಡು ಹೋಗಿದ್ದಾನೆ. ಅಷ್ಟೇ ಅಲ್ಲದೇ ತಿಂಗಳ ಹಿಂದೆ ಪಾಲಾಕ್ಷಯ್ಯ ಮನೆಗೆ ನುಗ್ಗಿ ಮನೆಯಲ್ಲಿರೊ ಸಾಮಾನನ್ನ ಹೊತ್ತೊಯ್ದಿದ್ದಾರೆ.

ವೀಣಾ ಹಾಗೂ ಪಾಲಾಕ್ಷಯ್ಯ ದಂಪತಿಗೆ 15 ವರ್ಷದ ಮಗಳಿದ್ದು, ಅವಳನ್ನೂ ಕರೆದುಕೊಂಡು ಹೋಗಿದ್ದಾರೆ. ನೀನು ನಿನ್ನ ಅಪ್ಪನ ಜೊತೆ ಮಾತಾಡಿದ್ರೆ ವಿಷ ಕುಡಿದು ಸತ್ತು ಹೋಗುತ್ತೀನಿ ಎಂದು ಮಗುವನ್ನ ಹೆದರಿಸುತ್ತಿದ್ದಳು. ನನ್ನ ಮಗುವನ್ನ ನನಗೆ ಕೊಡಿ ಅಂತಾ ನಾನು ಎಷ್ಟು ಕೇಳಿಕೊಂಡರೂ ಕೊಟ್ಟಿಲ್ಲ. ನನಗೆ ಚಂದು ಆಚಾರ್ಯ ಕೊಲೆ ಬೆದರಿಕೆ ಹಾಕಿದ್ದ. ಹೇಗಾದರೂ ಮಾಡಿ ನ್ಯಾಯ ದೊರಕಿಸಿಕೊಡಿ ಅಂತಾ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪಾಲಾಕ್ಷಯ್ಯ ದೂರು ದಾಖಲಿಸಿದ್ದಾರೆ.

ಚಂದು ಆಚಾರ್ಯ ಮತ್ತು ವೀಣಾ ಜನರಿಂದ ಹಣ ಸಂಗ್ರಹಿಸಿ ಪರಾರಿಯಾಗಿದ್ದು, ತಲೆ ಮರೆಸಿಕೊಂಡು ಓಡಾಡ್ತಿದ್ದಾರೆ. ಸದ್ಯಕ್ಕೆ ಪೊಲೀಸರು ಇವರ ಹುಡುಕಾಟದಲ್ಲಿ ತೊಡಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *