ಅಗಲಿದ ಡಾ.ಭುಜಂಗ ಶೆಟ್ಟಿ ಅವರಿಗೆ ಸ್ಯಾಂಡಲ್ ವುಡ್ ಕಂಬನಿ

Public TV
1 Min Read

ಖ್ಯಾತ ನೇತ್ರತಜ್ಞ ಡಾ.ಭುಜಂಗ ಶೆಟ್ಟಿ ಅವರಿಗೂ ಸ್ಯಾಂಡಲ್ ವುಡ್ ಗೂ ಭಾವನಾತ್ಮಕ ಸಂಬಂಧವಿದೆ. ಡಾ.ರಾಜ್ ಕುಮಾರ್ ಅವರನ್ನು ಕಣ್ಣುದಾನಕ್ಕೆ ಪ್ರೇರೇಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಡಾ.ರಾಜ್ ಐ ಬ್ಯಾಂಕ್ ಮೂಲಕ ಲಕ್ಷಾಂತರ ಜನರಿಗೆ ಬೆಳಕಾದವರು ಭುಜಂಗ ಶೆಟ್ಟರು. ಹಾಗಾಗಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಶೆಟ್ಟಿರು ಅಂದರೆ ಎಲ್ಲಿಲ್ಲದ ಅಭಿಮಾನ ಹಾಗೂ ವಿಶೇಷ ಪ್ರೀತಿ.

ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಭುಜಂಗ ಶೆಟ್ಟರ ಪ್ರೇರಣೆಯಿಂದ ಕಣ್ಣುದಾನ ಮಾಡಿದ್ದಲ್ಲದೇ, ಅನೇಕರು ಇವರದ್ದೇ ಆಸ್ಪತ್ರೆಗಳಲ್ಲಿ ನೇತ್ರ ಚಿಕಿತ್ಸೆಗೂ ಒಳಗಾಗಿದ್ದಾರೆ. ಹಾಗಾಗಿ ಅವರ ನಿಧನದ ಸಂದರ್ಭದಲ್ಲಿ ಅನೇಕರು ಕಂಬನಿ ಮಿಡಿದಿದ್ದಾರೆ. ಅಗಲಿದ ನೇತ್ರ ತಜ್ಞನಿಗೆ ಸಂತಾಪಗಳನ್ನು ಸೂಚಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಭುಜಂಗ ಶೆಟ್ಟರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿರುವ ಜಗ್ಗೇಶ್, ‘ಇಂದಿನ ದೇವಯ್ಯ ಪಾರ್ಕ್ ಮೆಟ್ರೋ ಅಡಿಯಲ್ಲಿ 1980ರಲ್ಲಿ ಇವರ ಕಣ್ಣಿನ ಕ್ಲಿನಿಕ್ ಇತ್ತು. ಅಮ್ಮನ ಕಣ್ಣಿನ ಪರೀಕ್ಷೆಗಾಗಿ ಇವರ ಬಳಿ ಹೋಗಿದ್ದ ನೆನಪು. ನಂತರ ಅವರ ಬೆಳವಣಿಗೆ. ಅವರ ಆಸ್ಪತ್ರೆಯಲ್ಲಿ ನಡೆದ ನನ್ನ ಅನೇಕ ಚಿತ್ರದ ಚಿತ್ರೀಕರಣ. ರಾಜಣ್ಣ ಕಣ್ಣಿನ ದಾನಕ್ಕೆ ಇವರೇ ಪ್ರೇರಣೆ’ ಎಂದು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

ಡಾ.ಭುಜಂಗ ಶೆಟ್ಟಿ ನಾರಾಯಣ ನೇತ್ರಾಯಲ ಶುರು ಮಾಡಿದ್ದು 1993ರಲ್ಲಿ. ಬೆಂಗಳೂರಿನ ರಾಜಾಜಿನಗರದಲ್ಲಿ ಶುರುವಾದ ನೇತ್ರಾಲಯದಲ್ಲಿ ಡಾ.ರಾಜ್ ಕುಮಾರ್ ಅವರು 1994ರಲ್ಲಿ ತಮ್ಮ ತಂಗಿಯ ಕಣ್ಣಿನ ಆಪರೇಷನ್ ಮಾಡಿಸಲು ಅಲ್ಲಿಗೆ ಹೋಗಿದ್ದರು. ಭುಜಂಗ ಶೆಟ್ಟರು ಆಡಿದ ಕಣ್ಣಿನ ದಾನದ ಮಾತು ರಾಜ್ ಕುಮಾರ್ ಅವರನ್ನು ಪ್ರೇರೇಪಿಸಿತು. ನಂತರ ರಾಜ್ ಕುಮಾರ್ ಕೂಡ ಕಣ್ಣುದಾನಕ್ಕೆ ಮುಂದಾದರು. ಮತ್ತು ಡಾ.ರಾಜ್ ಕುಮಾರ್ ನೇತ್ರದಾನ ಕೇಂದ್ರ ಆರಂಭವಾಯಿತು.

Share This Article