ರಾಯಚೂರಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಮರಳು ಜಪ್ತಿ

Public TV
1 Min Read

ರಾಯಚೂರು: ಅಕ್ರಮ ಮರಳು ಸಂಗ್ರಹಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಬೆಲೆ ಬಾಳುವ ಮರಳನ್ನು ದೇವದುರ್ಗ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ದೇವದುರ್ಗ ಠಾಣೆ ಪೊಲೀಸರು ತಾಲೂಕಿನ ನಿಲುವಂಜಿಯಲ್ಲಿ 7 ಲಕ್ಷ ರೂ. ಮೌಲ್ಯದ 1,400 ಮೆಟ್ರಿಕ್ ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಹೂವಿನಹೆಡಗಿಯ ಬಸಪ್ಪ ಅಕ್ರಮವಾಗಿ ನಿಲುವಂಜಿ ಗ್ರಾಮದ ಜಮೀನೊಂದರಲ್ಲಿ ಮರಳು ಸಂಗ್ರಹಿಟ್ಟಿದ್ದ. ದೇವದುರ್ಗ ಪೊಲೀಸರು ಜಮೀನಿನ ಮೇಲೆ ದಾಳಿ ಮಾಡಿ ಮರಳನ್ನು ಜಪ್ತಿ ಮಾಡಿದ್ದಾರೆ. ಆರೋಪಿ ಬಸಪ್ಪನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ಕೃಷ್ಣಾ ನದಿದಂಡೆ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಮಿತಿಮೀರಿ ನಡೆಯುತ್ತಿದೆ. ಪರವಾನಿಗೆಯಿಲ್ಲದೆ ಮರಳುಗಾರಿಕೆ ನಡೆಸಿ ಜಮೀನುಗಳಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಲಾಗುತ್ತಿದೆ.

ಅಕ್ರಮ ಮರಳುಗಾರಿಕೆ ತಡೆಯಲು ಜಿಲ್ಲಾಡಳಿತ ಏನೆಲ್ಲಾ ಕ್ರಮಗಳನ್ನ ಕೈಗೊಂಡಿದ್ದರೂ ಮರಳು ಮಾಫಿಯಾ ಮಾತ್ರ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಹಗಲು ಮಾತ್ರವಲ್ಲದೆ ರಾತ್ರಿಯೂ ಸಹ ನಿಯಮಬಾಹಿರವಾಗಿ ಮರಳುಗಾರಿಕೆ ನಡೆಸಿ ಹೊರ ಜಿಲ್ಲೆ, ರಾಜ್ಯಗಳಿಗೆ ಮರಳನ್ನು ಸಾಗಿಸಲಾಗುತ್ತಿದೆ. ದೇವದುರ್ಗ, ಮಾನ್ವಿ, ರಾಯಚೂರು ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆದಿದೆ. ಆದರೆ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *