ಮರಳು ಅಕ್ರಮ ಸಾಗಾಣೆ ತಡೆಯಲು ಬಂದಿದ್ದ ಅಧಿಕಾರಿಯ ಪ್ರಾಣವನ್ನೇ ತೆಗೆದ ಚಾಲಕ!

Public TV
1 Min Read

ರಾಯಚೂರು: ಅಕ್ರಮವಾಗಿ ಮರಳು ಸಾಗಿಸುತ್ತ ಲಾರಿಯನ್ನು ತಡೆಯಲು ಬಂದಿದ್ದ ಅಧಿಕಾರಿಯ ಮೇಲೆ ಚಾಲಕನೊಬ್ಬ ಲಾರಿ ಹರಿಸಿ ಪ್ರಾಣವನ್ನೇ ಕಿತ್ತುಕೊಂಡ ಘಟನೆ ಜಿಲ್ಲೆಯ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾನ್ವಿ ತಾಲೂಕಿನ ಚೀಕಪರ್ವಿ ಗ್ರಾಮದ ಮಾನ್ವಿಯ ಸಾಹೇಬ್ ಪಟೇಲ್ ಮೃತ ಅಧಿಕಾರಿ. ಘಟನಾ ಸ್ಥಳದಲ್ಲಿಯೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮಾನ್ವಿ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ:
ಸಾಹೇಬ್ ಪಟೇಲ್ ಅವರು ಚೀಕಪರ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮಾನ್ವಿಯ ಬುದ್ದಿನ್ನಿ ಸಮೀಪದ ತುಂಗಭದ್ರಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆಡಿದ್ದ ಅವರು ಇಂದು ಪರಿಶೀಲನೆ ನಡೆಸಲು ಹೋಗಿದ್ದರು. ಈ ವೇಳೆ ಚಾಲಕ ತಪ್ಪಿಸಿಕೊಳ್ಳಲು ಸಾಹೇಬ್ ಪಟೇಲ್ ಅವರ ಕಾಲುಗಳ ಮೇಲೆ ಲಾರಿ ಹರಿಸಿದ್ದಾನೆ. ಪರಿಣಾಮ ಎರಡೂ ಕಾಲು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಮಾನ್ವಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾಹೇಬ್ ಮೃತಪಟ್ಟಿದ್ದಾರೆ.

ಸಾಹೇಬ್ ಪಟೇಲ್ ಅವರ ಮೃತ ದೇಹವನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ. ಮೃತರ ಕಟುಂಬಸ್ಥರು ಚಾಲಕನನ್ನು ಹಾಗೂ ಅಕ್ರಮವಾಗಿ ಮರಳು ಸಾಗುವವರ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ನಮಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ತನಿಖೆ ಆರಂಭಿಸಿದ್ದು, ಲಾರಿ ಮಾಲೀಕ ಹಾಗೂ ಚಾಲಕನ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾನ್ವಿ ಪೊಲೀಸರು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *