‘ಸನಾತನ ಅಯೋಧ್ಯಾ ಕಾ ರಾಮ್’ ಲಹರಿ ಮ್ಯೂಸಿಕ್ ಮೂಲಕ ಸಾಂಗ್ ರಿಲೀಸ್

Public TV
2 Min Read

ಇಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರತಿಷ್ಟಾಪನೆ. ಈ ಶುಭ ಸಂದರ್ಭದಲ್ಲಿ ಸರಿಗಮಪ ಖ್ಯಾತಿಯ ಮೈಸೂರಿನ ತನುಶ್ರೀ ಆರ್ (Tanushree) ‘ಸನಾತನ ಅಯೋಧ್ಯಾ ಕಾ ರಾಮ್’ (Sanatana Ayodhya Ka Ram) ಎಂಬ ಹಾಡನ್ನು ಹಾಡಿದ್ದಾರೆ. ಅವರೆ ಸಂಗೀತವನ್ನು ಸಂಯೋಜಿಸಿದ್ದಾರೆ. ಖ್ಯಾತ ಮ್ಯೂಸಿಕ್ ಸಂಸ್ಥೆ ಮೂಲಕ ಈ ಹಾಡು ಲೋಕಾರ್ಪಣೆಯಾಗಿದೆ.

ಅಯೋಧ್ಯೆಯಲ್ಲಿ ಶ್ರೀ ರಾಮನ ಪ್ರತಿಷ್ಟಾಪನೆ ಆಗುತ್ತಿರುವ ಈ ಶುಭ ಸಂದರ್ಭದಲ್ಲಿ ಮೈಸೂರಿನ ತನುಶ್ರೀ ತಾವೇ ಸಂಗೀತ ನೀಡಿ, ಹಾಡಿರುವ ಈ ಹಾಡು ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಲಹರಿ ಮ್ಯೂಸಿಕ್ ಮೂಲಕ ಈವರೆಗೂ ಲಕ್ಷಾಂತರ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಆದರೆ ಕೇಳಿದ ತಕ್ಷಣ ಮೈರೋಮಾಂಚನವಾಗುವ ಈ ರಾಮನ ಹಾಡನ್ನು ಬಿಡುಗಡೆ ಮಾಡುತ್ತಿರುವುದು  ನನಗೆ ನಿಜಕ್ಕೂ ಬಹಳ ಖುಷಿಯಾಗಿದೆ.  ಹಾಡು ಕೇಳಿದ ನನ್ನ ಅನೇಕ ಸ್ನೇಹಿತರು ತುಂಬಾ ಚೆನ್ನಾಗಿದೆ ಎಂದು ತಿಳಿಸುತ್ತಿದ್ದಾರೆ. ತನುಶ್ರೀ ಅವರಿಗೆ ಮುಂದೆ ಸಂಗೀತ ಕ್ಷೇತ್ರದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದು ಲಹರಿ ವೇಲು (Lahari Velu) ಹಾರೈಸಿದರು.

ಕೇವಲ ಅರ್ಧ ಗಂಟೆಯಲ್ಲಿ ಸಿದ್ದವಾದ ಹಾಡಿದ್ದು ಎಂದು ಮಾತು ಆರಂಭಿಸಿದ ಗಾಯಕಿ ತನುಶ್ರೀ, ನನಗೆ ಸಂಗೀತದಲ್ಲಿ ಆಸಕ್ತಿ ಬರಲು ನಮ್ಮ‌ ತಾಯಿ ಪ್ರಸಿದ್ದ ಜನಪದ ಗಾಯಕಿ ಶುಭ ರಾಘವೇಂದ್ರ ಅವರು ಕಾರಣ.  ಇನ್ನು ಶ್ರೀರಾಮನ ಕುರಿತಾದ “ಸನಾತನ ಅಯೋಧ್ಯಾ ಕಾ ರಾಮ್” ಹಾಡನ್ನು ಹಿಂದಿಯಲ್ಲಿ ಹಾಡಿದ್ದೇನೆ. ನಾನೇ ಸ್ವರ ಸಂಯೋಜನೆ ಮಾಡಿದ್ದೇನೆ. ನನ್ನ ತಂದೆ ಡಿ.ಎನ್ ರಾಘವೇಂದ್ರ ಸಾಹಿತ್ಯ ಬರೆದಿದ್ದಾರೆ. ನಿರ್ಮಾಣ ಹಾಗೂ ನಿರ್ದೇಶನವನ್ನು ನನ್ನ ತಂದೆಯವರೆ ಮಾಡಿದ್ದಾರೆ. ಏಸೆನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಪೂಜಾ ಹಾಗೂ ಮನೋಜ್ ಅವರು ಈ ಹಾಡನ್ನು ಪ್ರಸ್ತುತ ಪಡಿಸಿದ್ದಾರೆ. ಸದ್ಯದಲ್ಲೇ ಕನ್ನಡ ಸೇರಿದಂತೆ ಹತ್ತು ಭಾಷೆಗಳಲ್ಲಿ ಪ್ಯಾನ್  ಇಂಡಿಯಾ ಗೀತೆಯಾಗಿ ಈ ಹಾಡು ಬರಲಿದೆ ಎಂದು ತಿಳಿಸಿದರು.

ಈಗಾಗಲೇ ನನ್ನ ಮಗಳು ಸರಿಗಮಪ ಮೂಲಕ ಎಲ್ಲರಿಗೂ ಪರಿಚಿತಳಾಗಿದ್ದಾಳೆ. ಅನೇಕ ಟ್ರ್ಯಾಕ್ ಗಳನ್ನು ಹಾಡಿದ್ದಾಳೆ. ಭಗವಾನ್ ಶ್ರೀರಾಮನ ಕುರಿತಾದ ಈ ಹಾಡನ್ನು ನಾನು ಬರೆದಿದ್ದೇನೆ. ತನುಶ್ರೀ ಈ ಹಾಡನ್ನು ಸುಶ್ರಾವ್ಯವಾಗಿ ಹಾಡುವುದರ ಜೊತೆಗೆ ಮೊದಲ ಬಾರಿಗೆ ಸ್ವರ ಸಂಯೋಜನೆಯನ್ನು ಮಾಡಿದ್ದಾಳೆ. ಹಾಡು ಬರೆಯುವುದರೊಂದಿಗೆ ನಿರ್ದೇಶನ ಹಾಗೂ ನಿರ್ಮಾಣವನ್ನು ತಾವೇ ಮಾಡಿರುವುದಾಗಿ ತನುಶ್ರೀ ತಂದೆ  ಡಿ.ಎನ್ ರಾಘವೇಂದ್ರ ತಿಳಿಸಿದರು.

ಏಸೆನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ನ ಪೂಜಾ ಮತ್ತು ಮನೋಜ್ ಕೂಡ ರಾಮನ ಹಾಡಿನ ಬಗ್ಗೆ ಮಾತನಾಡಿದರು.

Share This Article