ಮೇಕೆದಾಟು ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು: ಸಲೀಂ ಅಹ್ಮದ್

Public TV
2 Min Read

ಹಾವೇರಿ: ಮೇಕೆದಾಟು ವಿಚಾರದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು. ಆದರೆ ಕೇಸ್‍ಗಳನ್ನು ಹಾಕುವ ಕೆಲಸ ಮಾಡಿದರು ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಕಿಡಿಕಾರಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ನಮಗೆ ಸಿಗುತ್ತಿರುವ ಬೆಂಬಲ ನೋಡಿ ಅನಿವಾರ್ಯವಾಗಿ ಮೇಕೆದಾಟುವಿಗೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ನೀಡಿದ್ದಾರೆ. ಮಹದಾಯಿ ಯೋಜನೆಯನ್ನು ಸರ್ಕಾರ ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಮಹದಾಯಿ ಯೋಜನೆ ಜಾರಿಗೆ ತರಬೇಕು. ನಮ್ಮದು ನಿರಂತರ ಹೋರಾಟ. ನಾವು ಗೆದ್ದಿದ್ದೇವೆ, ಸೋತಿದ್ದೇವೆ. ಅಖಿಲೇಶ್ ಯಾದವ, ಮಮತಾ ಬ್ಯಾನರ್ಜಿ ಅವರು ಇದು ಬಿಜೆಪಿ ಗೆಲುವಲ್ಲ, ಇವಿಎಂ ಗೆಲುವು ಎಂದು ಹೇಳಿದ್ದಾರೆ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ ಎಂದು ಆರೋಪಿಸಿದರು.

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಯಾವುದೇ ಕಾರಣ ನೀಡದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಂದೇ ಗಿಡದಲ್ಲಿ 1200 ಟೊಮೆಟೋ ಬೆಳೆದ- ಮುಂದೆ ಆಗಿದ್ದೇ ಬೇರೆ ಕಥೆ

ಸಿಎಂ ಇಬ್ರಾಹಿಂ ಅವರು 2007ನೇ ವರ್ಷದಲ್ಲಿ ಪಕ್ಷ ಸೇರಿದರು. 2013ರಲ್ಲಿ ಸಂಗಮೇಶ್ ಅವರನ್ನು ಬಿಟ್ಟು ಇಬ್ರಾಹಿಂರಿಗೆ ಟಿಕೆಟ್ ಕೊಟ್ಟೆವು. ಆದರೆ ಅವರು ಗೆಲ್ಲಲಿಲ್ಲ, ಆದರೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದರು. ಎರಡು ವರ್ಷಗಳಿಂದ ಇಬ್ರಾಹಿಂ ಯಾವುದೇ ಚುನಾವಣೆ, ಪಕ್ಷದ ಕಾರ್ಯಕ್ರಮಗಳಿಗೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಂದಿನ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿ: ಡಾ. ಜಗದೀಶ್ ಬಾಳ

ಹರಿಪ್ರಸಾದ ಪಕ್ಷದ ನಿಷ್ಠಾವಂತರು. ಹೈಕಮಾಂಡ್ ಹರಿಪ್ರಸಾದರ ಸೇವೆ ಗುರುತಿಸಿ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಎಲ್ಲೋ ಒಂದು ರೀತಿ ಹೊಂದಾಣಿಕೆ ನಡಿತಿದೆ. ಬಿಜೆಪಿಯ ಬಿ ಟೀಂ ಜೆಡಿಎಸ್ ಅಂತಿದ್ದಾರೆ. ಅಂತಹ ಪಕ್ಷಕ್ಕೆ ಇಬ್ರಾಂಹಿ ಅವರು ಹೋಗಬಾರದು. ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ರಾಜ್ಯದ ಹಿತದೃಷ್ಟಿಯಿಂದ ಇಬ್ರಾಹಿಂರು ಕಾಂಗ್ರೆಸ್‍ನಲ್ಲಿ ಉಳಿತಾರೆ ಎಂಬ ವಿಶ್ವಾಸವಿದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *