ಪ್ರತಿ ಪಕ್ಷಗಳ ಮಾಟ ಮಂತ್ರಕ್ಕೆ ನಮ್ಮ ನಾಯಕರ ಸಾವು: ಸಾಧ್ವಿ ಪ್ರಜ್ಞಾಸಿಂಗ್

Public TV
1 Min Read

ಭೋಪಾಲ್: ವಿವಾದತ್ಮಾಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಮತ್ತೊಮ್ಮೆ ವಿವಾದತ್ಮಾಕ ಹೇಳಿಕೆ ನೀಡಿದ್ದು, ತಮ್ಮ ಪಕ್ಷದ ಹಿರಿಯ ನಾಯಕರ ಸಾವಿಗೆ ಪ್ರತಿಪಕ್ಷದವರು ನಡೆಸುತ್ತಿರುವ ಮಾಟ ಮಂತ್ರ ಕಾರಣವೆಂದು ಆರೋಪ ಮಾಡಿದ್ದಾರೆ.

ಪಕ್ಷದ ಸಭೆಯೊಂದರಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಈ ಹಿಂದೆ ಮಹಾರಾಜ್ ಹೇಳಿದಂತೆ ನಾವು ಈಗ ವಿಪತ್ತಿನ ಸಮಯವನ್ನು ಎದುರಿಸುತ್ತಿದ್ದೇವೆ ಎಂದಿದ್ದಾರೆ.

ಕಳೆದ 20 ದಿನಗಳ ಅವಧಿಯಲ್ಲಿ ಬಿಜೆಪಿ ಕೇಂದ್ರ ನಾಯಕರಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರು ನಿಧನರಾಗಿದ್ದು, ಕಾರ್ಯಕರ್ತರಿಗೆ ತೀವ್ರ ದುಃಖವನ್ನು ಉಂಟು ಮಾಡಿತ್ತು. ಈ ಕುರಿತ ಮಾತನಾಡುವ ಸಂದರ್ಭದಲ್ಲಿ ಪ್ರಜ್ಞಾ ಸಿಂಗ್ ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧವಾಗಿ ಪ್ರತಿಪಕ್ಷದವರು ಮಾಟ ಮಂತ್ರ ಮಾಡುತ್ತಿದ್ದಾರೆ ಎಂದು ಮಹಾರಾಜ್ ಅವರು ನನಗೆ ಈ ಹಿಂದೆ ಹೇಳಿದ್ದರು. ಅವರ ಮಾತು ಈಗ ನಿಜವಾಗುತ್ತಿದೆ. ಆದರೆ ಅವರು ಈ ಹಿಂದೆ ತಮಗೆ ಹೇಳಿದ್ದ ಮಾತನ್ನು ನಾನು ಮರೆತು ಹೋಗಿದ್ದೆ. ಆದರೆ ಇಂದು ನಾಯಕರು ನಮ್ಮನ್ನು ಅಗಲಿ ಹೋಗುತ್ತಿರುವುದಿಂದ ಅವರು ಹೇಳಿದ ಮಾತು ಈಗ ನನಗೆ ನಿಜ ಎನಿಸುತ್ತಿದೆ ಎಂದರು.

ಕಳೆದ ತಿಂಗಳು ಸೆಹೋರೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಪ್ರಜ್ಞಾಸಿಂಗ್ ನೀಡಿದ್ದ ಹೇಳಿಕೆ ಭಾರೀ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಅವರು, ನಾನು ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಆಯ್ಕೆಯಾಗಿಲ್ಲ ಅರ್ಥ ಮಾಡಿಕೊಳ್ಳಿ. ನಾನು ಯಾವ ಕೆಲಸ ಮಾಡಲು ಚುನಾಯಿತಳಾಗಿದ್ದೇನೆ ಎನ್ನುವುದು ತಿಳಿದಿದೆ. ಆ ಕೆಲಸವನ್ನು ನಾನು ಮಾಡುತ್ತೇನೆ, ಈ ಕುರಿತು ಹಲವು ಬಾರಿ ಹೇಳಿದ್ದೇನೆ ಎಂದು ಆಕ್ರೋಶ ಭರಿತರಾಗಿ ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *