ರಿಯಾಲಿಟಿ ಶೋನಲ್ಲಿ ಭಾವುಕರಾದ ಸಾಧು ಕೋಕಿಲ

Public TV
1 Min Read

ಬೆಂಗಳೂರು: ಚಂದನವನದ ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಭಾನುವಾರ ನಡೆದ ರಿಯಾಲಿಟಿ ಶೋನಲ್ಲಿ ಭಾವುಕರಾಗಿದ್ದಾರೆ.

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಸಿಂಗಿಂಗ್ ರಿಯಾಲಿಟಿ ಶೋದಲ್ಲಿ ಸಾಧುಕೋಕಿಲ ಮೊದಲ ಬಾರಿಗೆ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಬ್ಬ ಹಾಸ್ಯ ನಟನ ಜೊತೆಗೆ ಓರ್ವ ಒಳ್ಳೆಯ ಸಂಗೀತ ನಿರ್ದೇಶಕರಾಗಿರುವ ಸಾಧು ಕೋಕಿಲ, ಶೋನಲ್ಲಿ ಸ್ಪರ್ಧಿಗಳಿಗೆ ಒಳ್ಳೆಯ ಸಲಹೆ ನೀಡುತ್ತಿದ್ದಾರೆ.

ಭಾನುವಾರ ಪ್ರಸಾರವಾದ ಸಂಚಿಕೆಯಲ್ಲಿ ಎಲ್ಲ ಸ್ಪರ್ಧಿಗಳು 90ರ ದಶಕದ ಹಾಡುಗಳನ್ನು ಹಾಡುತ್ತಿದ್ದರು. ಸ್ಪರ್ಧಿ ಅಪೇಕ್ಷಾ ಪೈ ‘ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಎಂಬ ಲಾಲಿ ಹಾಡನ್ನು ಹಾಡಿದರು. ಹಾಡನ್ನು ಕೇಳಿದ ಸಾಧು ಕೋಕಿಲ ಒಂದು ಕ್ಷಣ ಭಾವುಕರಾದ್ರು. ನಾವು ಚಿಕ್ಕವರಿದ್ದಾಗ ನಮ್ಮ ತಾಯಿ ಇದೇ ಹಾಡನ್ನು ಹಾಡುತ್ತಿದ್ದರು. ಸದ್ಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಲೇ ಸಾಧು ಅವರ ಕಣ್ಣಾಲಿಗಳು ತುಂಬಿಕೊಂಡವು. ಅಮ್ಮನಿಗೆ ಪ್ರಪಂಚದಲ್ಲಿ ಸರಿಸಾಟಿಯಾದದ್ದು ಬೇರೆ ಏನೂ ಇಲ್ಲ. ಈ ಲಾಲಿ ಹಾಡುಗಳು ಪ್ರತಿಯೊಬ್ಬರ ಮನದಾಳಕ್ಕೆ ತಲುಪುತ್ತವೆ ಅಂತ ಕಣ್ಣೀರು ಹಾಕಿದ್ರು.

ತೀರ್ಪುಗಾರರಾಗಿರುವ ಅರ್ಚನಾ ಉಡುಪ ಸಹ ಮಕ್ಕಳನ್ನು ಮಲಗಿಸಲು ಇದೇ ಹಾಡನ್ನು ತೊಟ್ಟಿಲು ತೂಗುತ್ತಾ ಹೇಳುತ್ತಿದ್ದೆ. ಇಂದು ಆಪೇಕ್ಷಾ ಹಾಡು ಕೇಳಿ ಪರಮಾನಂದ ಆಯ್ತು ಎಂದು ಹೇಳಿದ್ರು. ಕನ್ನಡ ರ್ಯಾಪರ್ ಚಂದನ್ ಶೆಟ್ಟಿ ಸಹ ಶೋನ ತೀರ್ಪುಗಾರರಾಗಿದ್ದಾರೆ. ಇದೇ ಸಂಚಿಕೆಯಲ್ಲಿ ವಿಶೇಷ ಅತಿಥಿಗಳಾಗಿ ಹಿರಿಯ ನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಸಹ ಆಗಮಿಸಿದ್ದರು.

‘ಸೇವಂತಿಗೆ ಚೆಂಡಿನಂತಹ ಮುದ್ದು ಕೋಳಿ’ ಹಾಡು ಟಿ.ಜಿ.ಲಿಂಗಪ್ಪ ಸಂಗೀತ, ವಿಜಯನರಸಿಂಹ ಲೇಖನಿಯಲ್ಲಿ ಮೂಡಿಬಂದಿದೆ. ಸೂಲಮಂಗಲಂ ಮತ್ತು ಎಂ. ರಾಜಲಕ್ಷ್ಮೀ ಕಂಠದಲ್ಲಿ ಹಾಡು ಮೊದಲ ಬಾರಿಗೆ ಮೂಡಿಬಂದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *