ಬೆಂಗಳೂರು: ರಾಜ್ಯದ ರಾಜಕಾರಣ ನಿಂತ ನೀರಲ್ಲ. ಸಾಕಷ್ಟು ಮಳೆಯಾಗಿ ಜಲಾಶಯಗಳು ಭರ್ತಿಯಾಗಿದ್ದು, ಕ್ರಸ್ಟ್ ಗೇಟ್ ತೆರೆದು ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು ಅಂತ ಕೇಂದ್ರ ಸಚಿವ ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಾವು ಯಾವುದೇ ಸರ್ಕಾರವನ್ನು ಬೀಳಿಸುವ ಕೆಲಸ ಮಾಡಲ್ಲ. ಸರ್ಕಾರವೇ ತನ್ನಷ್ಟಕ್ಕೆ ತಾನೇ ಉರುಳಿಹೋಗುತ್ತೆ. ಇದನ್ನು ರಾಜ್ಯದ ಜನ ತೀರ್ಮಾನ ಮಾಡಿದ್ದಾರೆ. ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ. ರಾಜ್ಯದ ರಾಜಕಾರಣ ನಿಂತ ನೀರಲ್ಲ. ಕ್ರಸ್ಟ್ ಗೇಟ್ ತೆರೆದು ಜಲಾಶಯಗಳಲ್ಲಿ ನೀರು ಹೊರಬಿಡುವಂತೆ ಯಾವುದೇ ಕ್ಷಣದಲ್ಲಿ ಬೇಕಾದರೂ ಸರ್ಕಾರ ಬೀಳಬಹುದು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಸಿದರು.
ಇದೇ ವೇಳೆ ಮುಂದೆ ಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಹಾಗೂ ಬಿಜೆಪಿ ಅವರಿಗೆ ಬುದ್ಧಿ ಕಲಿಸುತ್ತಾರೆ. ಅದ್ದರಿಂದ 70% ರಷ್ಟು ಸ್ಥಾನಗಳು ಬಿಜೆಪಿಗೆ ಸಿಗುತ್ತವೆ ಎಂಬ ವಿಶ್ವಾಸವಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕಾಲದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ಹಗರಣಗಳು ಮುಂದುವರಿದ್ದು, ಮೊದಲು ಅವರು ಒಬ್ಬರೇ ಲೂಟಿ ಮಾಡುತ್ತಿದ್ದರು. ಈಗ ಇಬ್ಬರು ಸೇರಿಕೊಂಡು ಲೂಟಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಲೂಟಿ ಮಾಡುವ ಸರ್ಕಾರವಿದ್ದು, ಭ್ರಷ್ಟಾಚಾರಕ್ಕೆ ಇಬ್ಬರು ಕ್ಯಾಪ್ಟನ್ ಗಳಾಗಿದ್ದಾರೆ. ತಮ್ಮ ತಪ್ಪುಗಳನ್ನ ಮರೆಮಾಚಲು ಪ್ರತ್ಯೇಕ ಉತ್ತರ ಕರ್ನಾಟಕ ವಿಚಾರವನ್ನು ಎಳೆದು ತಂದಿದ್ದಾರೆ ಎಂದು ಆರೋಪಿಸಿದರು.
ಸಿಎಂ ಕಣ್ಣೀರಿಗೆ ವ್ಯಂಗ್ಯ:
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಸಿಎಂ ಆಗಬೇಕಿತ್ತೆಂಬ ನೋವು ಎಲ್ಲರ ಮನಸ್ಸಿನಲ್ಲಿ ಇದ್ದು, ಸಣ್ಣ ಪುಟ್ಟ ಕಾರಣಗಳಿಂದ ಕೇಂದ್ರ ನಿರೀಕ್ಷೆಯಂತೆ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಸಿಎಂ ಆಗುವವರಿಗೆ ಎದೆಗಾರಿಗೆ ಇರಬೇಕು. ಜನರ ಸಮಸ್ಯೆ ಎಷ್ಟೇ ಕಠಿಣವಾಗಿದ್ದರೂ ಅದಕ್ಕೆ ಪರಿಹಾರ ಕಂಡು ಹಿಡಿರುವ ಶಕ್ತಿ ಇರಬೇಕು. ಆದರೆ ಕಣ್ಣೀರು ಹಾಕೋಕು ಇತಿಮಿತಿ ಇದೆ. ಎರಡು ಮೂರು ಕರ್ಚಿಫ್ ಒದ್ದೆ ಆಗೋಷ್ಟು ಕಣ್ಣೀರು ಮುಖ್ಯಮಂತ್ರಿ ಹಾಕುತ್ತಾರೆ ಎಂದರೇ ಆ ಕರ್ಚಿಫ್ ಅಲ್ಲಿ ಅದೇನಿತ್ತೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.