ಕಾಂಗ್ರೆಸ್‍ನವರೇ ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು ಕೈಬಿಡಿ: ಎಸ್.ಟಿ ಸೋಮಶೇಖರ್

Public TV
1 Min Read

ಮೈಸೂರು: ಕಾಂಗ್ರೆಸ್‍ನವರು ಮೇಕೆದಾಟು ಯೋಜನೆಯ ಪಾದಯಾತ್ರೆಯನ್ನು ಕೈಬಿಡಬೇಕು ಎಂದು ಸಹಕಾರ ರಾಜ್ಯ ಸಚಿವ ಎಸ್.ಟಿ ಸೋಮಶೇಖರ್ ಮನವಿ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರ ಆರೋಗ್ಯದ ಹಿತ ದೃಷ್ಟಿಯಿಂದ ಕಾಂಗ್ರೆಸ್‍ನವರು ಪಾದಯಾತ್ರೆ ಕೈ ಬಿಡಬೇಕು. ಕೊರೊನಾ, ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಬೇರೆ ರಾಜ್ಯಗಳಲ್ಲಿ ವಿದೇಶಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಅನಾಹುತವಾಗಿದೆ. ಅದು ಮೂರನೇ ಅಲೆಯಲ್ಲಿ ಆಗಬಾರದು. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‍ಗೆ ಮಾಡಲು ಬೇರೆ ಏನು ಕೆಲಸ ಇಲ್ಲ. ಪಾದಯಾತ್ರೆ ಒಂದು ಚುನಾವಣಾ ಗಿಮಿಕ್ ಅಷ್ಟೇ. ಇಷ್ಟು ವರ್ಷ ಅವರು ಏನೂ ಮಾಡಲಿಲ್ಲ. ಸಮ್ಮಿಶ್ರ ಸರ್ಕಾರ ಇದ್ದಾಗಲೂ ಅವರು ಈ ಯೋಜನೆ ಬಗ್ಗೆ ಏನೂ ಮಾತನಾಡಲಿಲ್ಲ. ಈಗ ರಾಜಕೀಯ ಕಾರಣಕ್ಕೆ ಪಾದಯಾತ್ರೆ ಗಿಮಿಕ್ ಮಾಡುತ್ತಿದ್ದಾರೆ. ಇದು ಜನರಿಗೆ ಅರ್ಥವಾಗುತ್ತದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಲಾಕ್‍ಡೌನ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಹಾಗೂ ತಜ್ಞರ ಸಲಹೆ ಮೇರೆಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವರು ಕಠಿಣ ಕ್ರಮ ಸೇರಿ ಏನೇ ಸಲಹೆ ಕೊಟ್ಟರೂ ಪಾಲಿಸುತ್ತೇವೆ. ಸದ್ಯಕ್ಕೆ ಬೇರೆ ರಾಜ್ಯದಷ್ಟು ನಮ್ಮಲ್ಲಿ ಸಮಸ್ಯೆಯಾಗಿಲ್ಲ. ಜನರು ಈ ಬಗ್ಗೆ ಸಹಕಾರ ನೀಡುತ್ತಿದ್ದಾರೆ. ಎರಡು ದಿನಕ್ಕೊಮ್ಮೆ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ತಜ್ಞರ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಎರಡನೇ ಅಲೆಯಿಂದ ಆದ ಅನಾಹುತದಿಂದ ಜನರು ಎಚ್ಚೆತ್ತುಕೊಂಡಿದ್ದಾರೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *