ಕೋಲಾರ: 2019 ಲೋಕಾಸಭಾ ಚುನಾವಣೆಗೆ ಬಿಜೆಪಿ ತನ್ನ 5ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೋಲಾರ ಕ್ಷೇತ್ರಕ್ಕೆ ಅಚ್ಚರಿಯ ಆಯ್ಕೆಯಾಗಿ ಎಸ್.ಮುನಿಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಯಲುವಗುಳಿ ಗ್ರಾಮದ ಮೂಲದವಾಗಿರುವ ಮುನಿಯಪ್ಪ ಅವರು, ಸದ್ಯ ಬೆಂಗಳೂರು ಮಹದೇವಪುರ ಕ್ಷೇತ್ರದ ಆಡುಗೋಡಿ ಬಿಬಿಎಂಪಿ ಸದಸ್ಯರಾಗಿದ್ದಾರೆ. ಪರಿಶಿಷ್ಟ ಜಾತಿ (ಬಲಗೈ) ಸಮುದಾಯದಯಕ್ಕೆ ಸೇರಿದ್ದಾರೆ.
ಕೋಲಾರ ಕ್ಷೇತ್ರದಿಂದ ಬಿಜೆಪಿಗೆ ಟಿಕೆಟ್ಗೆ ಮೂವರಿಗಿಂತ ಹೆಚ್ಚಿನ ಮಂದಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಛಲವಾದಿ ನಾರಾಯಣಸ್ವಾಮಿ, ಡಿಎಸ್ ವೀರಯ್ಯ ಅವರ ಹೆಸರು ಟಿಕೆಟ್ ರೇಸ್ನಲ್ಲಿ ಕೇಳಿ ಬಂದಿತ್ತು. ಸದ್ಯ ರಾಜ್ಯ ನಾಯಕರಿಗೆ ಶಾಕ್ ನೀಡಿರುವ ಬಿಜೆಪಿ ಹೈಕಮಾಂಡ್ ಎಸ್.ಮುನಿಸ್ವಾಮಿ ಅವರ ಹೆಸರನ್ನು ಅಧಿಕೃತಗೊಳಿಸಿದೆ.
ಕೋಲಾರ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಹಾಲಿ ಸಂಸದ ಕೆಎಚ್ ಮುನಿಯಪ್ಪ ವಿರುದ್ಧ ಕಾಂಗ್ರೆಸ್ ಪಕ್ಷದಲ್ಲೇ ಶಾಸಕರು ಬಂಡಾಯ ಭಾವುಟ ಹಾರಿಸಿದ್ದಾರೆ. ಕಾಂಗ್ರೆಸ್ ನಲ್ಲೇ ವಿರೋಧಿ ಬಣ ನಿರ್ಮಾಣ ಆಗಿರುವುದರಿಂದ ಟಿಕೆಟ್ಗಾಗಿ ತಿಕ್ಕಾಟ ಆರಂಭವಾಗಿದೆ. ಅಲ್ಲದೇ ಚುನಾವಣೆಯ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ಕೆಲ ಮುಖಂಡರು ಕೂಡ ಬಿಜೆಪಿಗೆ ಸೇರ್ಪಡೆಯಾಗಿದ್ದರು.
2014ರ ಲೋಕಸಭಾ ಚುನಾವಣೆಯಲ್ಲಿ 4,18,926 ಮತ ಪಡೆದಿದ್ದ ಕೆಎಚ್ ಮುನಿಯಪ್ಪ ಎದುರಾಳಿ ಜೆಡಿಎಸ್ ಅಭ್ಯರ್ಥಿ ಕೋಲಾರ ಕೇಶವ ಅವರ ವಿರುದ್ಧ 47,850 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಕೋಲಾರ ಕೇಶವ 3,71,076 ಮತಗಳು ಗಳಿಸಿದ್ದರು.