ಪ್ರದ್ಯುಮನ್ ಕೊಲೆ ಪ್ರಕರಣ- ತಪ್ಪಾಗಿ ಅರೆಸ್ಟ್ ಆಗಿದ್ದ ಕಂಡಕ್ಟರ್ ಗೆ ನಾಳೆ ಬಿಡುಗಡೆ ಸಾಧ್ಯತೆ

Public TV
1 Min Read

ಗುರ್ಗಾಂವ್: ಬಾಲಕ ಪ್ರದ್ಯುಮನ್ ಕೊಲೆ ಪ್ರಕರಣದಲ್ಲಿ ಹರಿಯಾಣ ಪೊಲೀಸರು ತಪ್ಪಾಗಿ ಆರೋಪಿಯನ್ನಾಗಿಸಿದ್ದ ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್ ಮಂಗಳವಾರದಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಗುರುಗ್ರಾಮದ ಜಿಲ್ಲಾ ನ್ಯಾಯಾಲಯ ಕುಮಾರ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಾಯ್ದಿರಿಸಿದೆ.

ಅಶೋಕ್ ಕುಮಾರ್ ವಿರುದ್ಧ ಸಿಬಿಐ ಯಾವುದೇ ಸಾಕ್ಷಿ ಒದಗಿಸಲು ಸಾಧ್ಯವಾಗಿಲ್ಲ. ಹಾಗೂ ಡಿಎನ್‍ಎ ಕೂಡ ಹೊಂದಾಣಿಕೆ ಆಗಿಲ್ಲ ಎಂದು ಅಶೋಕ್ ಕುಮಾರ್ ಪರ ವಕೀಲರಾದ ಮೋಹಿತ್ ವರ್ಮಾ ಹೇಳಿದ್ದಾರೆ.

ಇಲ್ಲಿ ರಯಾನ್ ಶಾಲೆಯ ಟಾಯ್ಲೆಟ್‍ನಲ್ಲಿ 2ನೇ ಕ್ಲಾಸ್ ಬಾಲಕ ಪ್ರದ್ಯುಮನ್‍ನನ್ನು ಕತ್ತು ಸೀಳಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಬಸ್ ಕಂಡಕ್ಟರ್ ಅಶೋಕ್ ಕುಮಾರ್‍ರನ್ನು ಬಂಧಿಸಲಾಗಿತ್ತು. ಕಂಡಕ್ಟರ್ ಅಶೋಕ್ ಕುಮಾರ್ ಈ ಕೊಲೆ ಮಾಡಿದ್ದಾರೆಂದು ಹೇಳಲು ಸಾಕ್ಷಿಗಳು ಸಿಕ್ಕಿರುವುದಾಗಿ ಹರಿಯಾಣ ಪೊಲೀಸರು ಹೇಳಿದ್ದರು. ಆದರೂ ಅಶೋಕ್ ಕುಮಾರ್ ಕುಟುಂಬಸ್ಥರು ಹಾಗೂ ಪ್ರದ್ಯುಮನ್ ಪೋಷಕರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಸಿಬಿಐ ಗೆ ಪ್ರಕರಣವನ್ನು ವರ್ಗಾಯಿಸಿದ ನಂತರ ಸ್ಫೋಟಕ ತಿರುವು ಸಿಕ್ಕಿತ್ತು. ಈ ತಿಂಗಳ ಆರಂಭದಲ್ಲಿ ಸಿಬಿಐ ಕೊಲೆಗೆ ಸಂಬಂಧಿಸಿದಂತೆ ಇದೇ ಶಾಲೆಯ 11ನೇ ತರಗತಿ ವಿದ್ಯಾರ್ಥಿನ್ನು ಬಂಧಿಸಿತ್ತು. ಪರೀಕ್ಷೆ ಮುಂದೂಡುವ ಸಲುವಾಗಿ ಪ್ರದ್ಯುಮನ್‍ನನ್ನು ಕೊಲೆ ಮಾಡಿದ್ದಾಗಿ ಆರೋಪಿ ವಿದ್ಯಾರ್ಥಿ ಹೇಳಿಕೆ ನೀಡಿದ್ದ.

ಅಶೋಕ್‍ರನ್ನು ಆರೋಪಿಯಾಗಿಸುವ ವಿಷಯದಲ್ಲಿ ತಪ್ಪಾಗಿರುವುದಾಗಿ ಹರಿಯಾಣ ಪೊಲೀಸರು ಕೂಡ ಒಪ್ಪಿಕೊಂಡಿದ್ದರು. ಅಶೋಕ್‍ರನ್ನು ಬಂಧಿಸಿದ ತಂಡ ಸೂಕ್ಷ್ಮವಾಗಿ ಸಿಸಿಟಿವಿ ದೃಶ್ಯವನ್ನು ನೋಡಿರಲಿಲ್ಲ ಎಂದು ಒಪ್ಪಿಕೊಂಡಿತ್ತು.

Share This Article
Leave a Comment

Leave a Reply

Your email address will not be published. Required fields are marked *