ಯುದ್ಧ ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ – ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ

Public TV
1 Min Read

ಕೀವ್: ಉಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತ ವಾಡ್ಲಿಮಿರ್ ಪುಟಿನ್ ನಾಯಕತ್ವದ ಪರ ಇದೆ ಎಂದು ನಿನ್ನೆಯಷ್ಟೇ ಅಮೆರಿಕ ಬಹಿರಂಗವಾಗಿ ಅಸಮಾಧಾನ ಹೊರಹಾಕಿತ್ತು. ಈ ಬೆಳವಣಿಗೆ ನಡುವೆ ರಷ್ಯಾ ಈ ಕೂಡ್ಲೇ ಯುದ್ಧ ನಿಲ್ಲಿಸಬೇಕು ಎಂದು ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಆದೇಶ ನೀಡಿದೆ.

15 ನ್ಯಾಯಮೂರ್ತಿಗಳ ಪೀಠ 13-2ರ ಅಂತರದಿಂದ ಈ ಆದೇಶ ನೀಡಿದೆ. ಈ ಆದೇಶವನ್ನು ಸಮರ್ಥಿಸಿ ರಷ್ಯಾ ವಿರುದ್ಧ ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ ಹಾಕಿರುವುದು ವಿಶೇಷ. ಇದು ಚರ್ಚೆಗೆ ಗ್ರಾಸವಾಗಿದೆ. ಆದರೆ ಚೀನಾ ಮಾತ್ರ ಐಸಿಜೆಯಲ್ಲೂ ರಷ್ಯಾ ಪರವಾಗಿ ನಿಂತಿದೆ.  ಇದನ್ನೂ ಓದಿ: ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಿದ ಭಾರತದ ನ್ಯಾಯಾಧೀಶ

ರಷ್ಯಾ-ಉಕ್ರೇನ್ ಯುದ್ಧ ಶುರುವಾಗಿ ಇಂದಿಗೆ 22ನೇ ದಿನ. ಆದರೂ ರಷ್ಯಾಗೆ ಈವರೆಗೂ ಮೇಲುಗೈ ಸಾಧಿಸಲು ಆಗ್ತಿಲ್ಲ. ಉಕ್ರೇನ್ ಸೈನಿಕರ ಸಮರ್ಥ ದಾಳಿಗಳಿಂದ ಕಂಗಟ್ಟಿರುವ ರಷ್ಯಾ ಪಡೆಗಳು ಹೆಚ್ಚುಕಡಿಮೆ ಮುಂದಕ್ಕೆ ಚಲಿಸಲಾಗದ ಚಕ್ರವ್ಯೂಹದಲ್ಲಿ ಸಿಲುಕಿವೆ. ಭೂಮಿ, ಸಮುದ್ರ, ಆಕಾಶ ಮಾರ್ಗವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ರಷ್ಯಾ ಸೇನೆಗೆ ಆಗ್ತಿಲ್ಲ. ಬದಲಾಗಿ ಭಾರಿ ನಷ್ಟ ವಾಗುತ್ತಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ನಡುವೆ ಚೆರ್ನಿಹೀವ್‍ನಲ್ಲಿ ಬ್ರೆಡ್ ಪಡೆಯಲು ಸಾಲುಗಟ್ಟಿದ್ದವರ ಮೇಲೆ ರಷ್ಯಾ ದಾಳಿ ನಡೆಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುಟಿನ್‍ನನ್ನು ‘ಯುದ್ಧಾಪರಾಧಿ’ ಎಂದ ಬೈಡನ್

ಒಂದು ಹಂತದಲ್ಲಿ ತೀವ್ರ ಒತ್ತಡದಲ್ಲಿರುವ ರಷ್ಯಾ ಪಡೆಗಳು, ಜನವಸತಿ ಪ್ರದೇಶಗಳನ್ನು ಟಾರ್ಗೆಟ್ ಮಾಡ್ತಿವೆ ಎಂದು ಉಕ್ರೇನ್ ಆರೋಪಿಸಿದೆ. ಇದಕ್ಕೆ ಪೂರಕವಾಗಿ ಇಂದು ಮರಿಯುಪೋಲ್‍ನ ರಂಗಮಂದಿರದ ಮೇಲೆ ರಷ್ಯಾ ಬಾಂಬ್ ಹಾಕಿದ್ದು, ರಕ್ತದೋಕುಳಿಯೇ ಹರಿದಿದೆ. ಇಲ್ಲಿ ಮಕ್ಕಳು ಸೇರಿ, 1,200ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದರು. ಇವರೆಲ್ಲಾ ಸತ್ತು ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಿಡ್ನಾಪ್ ಆಗಿದ್ದ ಮೆಲಿಟಪೋಲ್ ಮೇಯರ್‍ರನ್ನು ರಷ್ಯಾ ರಿಲೀಸ್ ಮಾಡಿದೆ. ಇದಕ್ಕೆ ಪ್ರತಿಯಾಗಿ ರಷ್ಯಾದ 9 ಸೈನಿಕರನ್ನು ಉಕ್ರೇನ್ ಬಿಡುಗಡೆ ಮಾಡಿದೆ. ಈ ಮಧ್ಯೆ, ಪುಟಿನ್‍ರನ್ನು ಯುದ್ಧಾಪರಾಧಿ ಎಂದು ಬೈಡನ್ ಕರೆದಿರುವುದು ಕ್ರೆಮ್ಲಿನ್ ಸಿಟ್ಟಿಗೆ ಕಾರಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *