ರಷ್ಯಾ ಜೊತೆಗೆ ಮಾತುಕತೆಗೂ ಮುನ್ನ ಷರತ್ತು ವಿಧಿಸಿದ ಉಕ್ರೇನ್

Public TV
2 Min Read

ಕೀವ್: ರಷ್ಯಾ, ಉಕ್ರೇನ್ ವಿರುದ್ಧ ಯುದ್ಧ ಸಾರಿ ಐದು ದಿನಗಳು ಕಳೆದಿದೆ. ಇದೀಗ ರಷ್ಯಾ ಮತ್ತು ಉಕ್ರೇನ್ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಕದನ ವಿರಾಮ ಘೋಷಿಸಿ ಸೇನಾ ಪಡೆಗಳನ್ನು ಹಿಂಪಡೆಯಲಿ ಎಂದು ಉಕ್ರೇನ್ ಷರತ್ತು ವಿಧಿಸಿದೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾದ ದಿನಗಳಿಂದ ವಿಶ್ವದ ಇತರ ರಾಷ್ಟ್ರಗಳು ವಿರೋಧಿಸುತ್ತಿದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಅಭಿಪ್ರಾಯಪಟ್ಟಿದೆ. ಈ ನಡುವೆ ಎರಡು ದೇಶಗಳು ಕೂಡ ಸಂಧಾನಕ್ಕೆ ಮುಂದಾಗಿದ್ದು, ಬೆಲಾರಸ್‍ನ ಗಡಿ ಪ್ರದೇಶದಲ್ಲಿ ಸಂಧಾನ ಸಭೆಗಾಗಿ ಉಭಯ ದೇಶಗಳ ಪ್ರಮುಖರು ಸೇರಿದ್ದಾರೆ. ಇದನ್ನೂ ಓದಿ: ದಿಢೀರ್‌ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್‌ ಬ್ಯಾಕ್‌

ಉಕ್ರೇನ್ ಷರತ್ತು:
ರಷ್ಯಾದೊಂದಿಗೆ ಸಂಧಾನ ಮಾತುಕತೆಗೆ ಒಪ್ಪಿರುವ ಉಕ್ರೇನ್ ಮೊಟ್ಟ ಮೊದಲಾಗಿ ತಕ್ಷಣ ರಷ್ಯಾ ಸೇನಾಪಡೆ ಕದನ ವಿರಾಮ ಘೋಷಿಸಿ ಉಕ್ರೇನ್‍ನಿಂದ ಹೊರನಡೆಯಬೇಕೆಂದು ಪಟ್ಟು ಹಿಡಿದಿದೆ. ಅಲ್ಲದೆ ಈಗಾಗಲೇ ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದು, ಇನ್ನಾದರೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸಲು ಸಹಕರಿಸಿ ಎಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಉಕ್ರೇನ್ ಅಧ್ಯಕ್ಷನ ಹತ್ಯೆಗೆ 400 ರಷ್ಯಾ ಸೈನಿಕರು ಸಿದ್ಧತೆ

ಸಂಧಾನ ಸಭೆಯಲ್ಲಿರುವ ಪ್ರಮುಖರು:
ಸರ್ವೇಂಟ್ ಆಫ್ ದಿ ಪೀಪಲ್ ಬಣದ ಅಧ್ಯಕ್ಷ ಡೇವಿಡ್ ಅರಾಖಮಿಯಾ
ಉಕ್ರೇನ್ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್
ಉಕ್ರೇನ್ ಅಧ್ಯಕ್ಷ ಕಚೇರಿಯ ಮುಖಸ್ಥ ಮಿಖಾಯಿಲ್ ಪೊಡ್ಯೊಲ್ಯಾಕ್
ತ್ರಿಪಕ್ಷೀಯ ಸಂಪರ್ಕ ಗುಂಪಿನ ಉಕ್ರೇನಿಯನ್ ನಿಯೋಗದ ಮೊದಲ ಉಪ ಮುಖ್ಯಸ್ಥ ಆಂಡ್ರೆ ಕೋಸ್ಟಿನ್
ಸಂಸತ್ತಿನ ಸದಸ್ಯ ರುಸ್ಟೆಮ್ ಉಮೆರೋವ್
ಉಕ್ರೇನ್ ವಿದೇಶಾಂಗ ವ್ಯವಹಾರಗಳ ಉಪಮುಖ್ಯಮಂತ್ರಿ ನಿಕೊಲಾಯ್ ಟೊಚಿಟ್ಸ್ಕಿ ಸಂಧಾನ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಈ ಮೊದಲು ಉಕ್ರೇನ್ ಸೇನಾ ಪಡೆಯ ಕುರಿತು ಮಾತನಾಡಿದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದೇಶವನ್ನು ರಕ್ಷಿಸಿ ನಿಮ್ಮವರ ರಕ್ಷಣೆಗಾಗಿ ಹೋರಾಡಿ. ನಾನು ಮಾತ್ರ ಈ ದೇಶದ ಅಧ್ಯಕ್ಷನಲ್ಲ ಇಲ್ಲಿರುವ ಪ್ರತಿಯೊಬ್ಬ ಪ್ರಜೆ ಕೂಡ ಅಧ್ಯಕ್ಷರೇ. ದೇಶದಲ್ಲಿರುವ ಪ್ರತಿಯೊಬ್ಬರು ಕೂಡ ಈ ದೇಶದ ಜವಾಬ್ದಾರಿಯುತ ಪ್ರಜೆಗಳಾಗಿದ್ದೀರಿ. ನಮ್ಮ ಸುಂದರ ಉಕ್ರೇನ್‍ನಲ್ಲಿ ಇದೀಗ ಅಶಾಂತಿ ಕಾಡುತ್ತಿದೆ. ಶಾಂತಿಗಾಗಿ ಎಲ್ಲಾ ಪ್ರಜೆಗಳು ಕೂಡ ಇದೀಗ ಯೋಧರಾಗಿ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‍ಗಡಿಗೆ ತಲುಪಿದ್ದರು ಭಾರತಕ್ಕೆ ಬರಲಾಗದೆ ಪರದಾಡುತ್ತಿರುವ ರಾಯಚೂರು ವಿದ್ಯಾರ್ಥಿಗಳು

ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಮಾತನಾಡಿದ ಭಾರತದ ಉಕ್ರೇನ್ ರಾಯಭಾರಿ, ಈಗಾಗಲೇ ಉಕ್ರೇನ್‍ನಲ್ಲಿ ಸಾಕಷ್ಟು ಸಾವುನೋವುಗಳು ಸಂಭವಿಸಿದೆ. 16 ಪುಟ್ಟ ಮಕ್ಕಳು ರಷ್ಯಾದ ಕ್ರೌರ್ಯಕ್ಕೆ ಬಲಿಯಾಗಿದ್ದಾರೆ. ಬಾಂಬ್ ಮತ್ತು ಕ್ಷಿಪಣಿಗಳ ಮೂಲಕ ರಷ್ಯಾ ಸೈನಿಕರು ಉಕ್ರೇನ್‍ನಲ್ಲಿ ರಕ್ತಪಾತ ನಡೆಸಿದ್ದಾರೆ. ಇದೀಗ ಸಂಧಾನಕ್ಕೆ ಮುಂದಾಗಿದ್ದು, ರಷ್ಯಾ ಕೂಡಲೇ ಉಕ್ರೇನ್‍ನಿಂದ ಹಿಂದೆ ಸರಿಯಲಿ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *