RSS ಅಂದ್ರೆ ‘ರೂಮರ್ಸ್‌ ಸ್ಪ್ರೆಡಿಂಗ್ ಸಂಘ್’: ಬಿ.ಕೆ.ಹರಿಪ್ರಸಾದ್ ಕಿಡಿ

Public TV
3 Min Read

– ಸಂಘಪರಿವಾರದಿಂದ ಹೋರಾಟ ಮಾಡಿದವರು ಒಂದೋ ಜೈಲಿಗೆ ಹೋಗ್ಬೇಕು, ಇಲ್ಲ ಸ್ಮಶಾನ ಸೇರಬೇಕು

ಬೆಂಗಳೂರು: ಆರ್‌ಎಸ್‌ಎಸ್ ಅಂದ್ರೆ ‘ರೂಮರ್ಸ್‌ ಸ್ಪ್ರೆಡಿಂಗ್ ಸಂಘ್’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ (B.K.Hariprasad) ಹೇಳಿಕೆ ನೀಡಿದರು.

ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ (RSS) ಅಂದ್ರೆ ‘ರೂಮರ್ಸ್‌ ಸ್ಪ್ರೆಡ್ಡಿಂಗ್ ಸಂಘ್’. ಅವರು ಕಳ್ಳನನ್ನು ಸುಳ್ಳ ಮಾಡ್ತಾರೆ, ಸುಳ್ಳನನ್ನು ಸತ್ಯವಂತ ಮಾಡ್ತಾರೆ. ಬಡವರು, ಅಮಾಯಕರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸುತ್ತಾರೆ ಎಂದು ಟೀಕಿಸಿದರು.

ಸಾಂದರ್ಭಿಕ ಚಿತ್ರ

ಎಬಿವಿಪಿಯವರು ಮೊದಲು ಮುಸ್ಲಿಮರ ಬಗ್ಗೆ ಹೇಳೋದಿಲ್ಲ. ಶೂದ್ರ ಹುಡುಗರು ಸಿಕ್ಕಿದರೆ ಮೊದಲು ರಾಷ್ಟ್ರ ಕಟ್ಟಬೇಕು ಅಂತಾರೆ. ಆಮೇಲೆ ನಿಧಾನವಾಗಿ ಅವರ ತಲೆಯಲ್ಲಿ ಮುಸ್ಲಿಂ ದ್ವೇಷದ ಗೊಬ್ಬರ ತುಂಬುತ್ತಾರೆ. ದೇಶಭಕ್ತರು ಎನ್ನುವ ಆರ್‌ಎಸ್‌ಎಸ್‌ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡಲ್ಲ. 52 ವರ್ಷ ಆರ್‌ಎಸ್‌ಎಸ್ ಕಚೇರಿ ಮೇಲೆ ಧ್ವಜ ಹಾರಿಸಿಲ್ಲ. ನಾವೆಲ್ಲ ಸಾಫ್ಟ್ ಹಿಂದುತ್ವದವರಲ್ಲ, ನಾವೆಲ್ಲ ಹಿಂದೂಗಳು. ನಮ್ಮ ಕಾಂಗ್ರೆಸ್‌ನಲ್ಲಿ ಕೆಲವರು ಸಾಫ್ಟ್ ಹಿಂದುತ್ವವಾದಿಗಳಿದ್ದಾರೆ ಎಂದರು.

ಬಿಜೆಪಿಯ ದೀನ್ ದಯಾಳ್ ಉಪಾಧ್ಯಾಯವರನ್ನು ಕೊಂದವರು ಯಾರು? ಅವರ ಕೊಲೆ ಮಾಡಿದ್ದು, ಯಾರು ಅಂತಾ ಸಂಘಪರಿವಾರ ಹೇಳಬೇಕು. ದೀನ್ ದಯಾಳ್ ಉಪಾಧ್ಯಾಯ ಕೊಲೆ ಆಗಿದ್ದು ಜನ ಸಂಘದ ಕಡೆಯೇ ತೋರಿಸುತ್ತದೆ. ಇದರ ಬಗ್ಗೆ ಯಾರೂ ಸ್ಪಷ್ಟವಾಗಿ ಹೇಳುತ್ತಲೇ ಇಲ್ಲ ಬಿಜೆಪಿಯವರು. ಆರ್‌ಎಸ್‌ಎಸ್ ಕಾಲಾಳುಗಳೆಲ್ಲ ಬಡವರೇ. ಅಧಿಕಾರ, ಸಂಪತ್ತು ಪಡೆಯುವವರು ಬೇರೆ, ಜೈಲಿಗೆ ಹೋಗುವವರು ಬೇರೆಯೇ. ಸಂಘ ಪರಿವಾರದ ಸಹವಾಸದಿಂದ ಹೋರಾಟ ಮಾಡಿದವರು ಒಂದೋ ಜೈಲಿಗೆ ಹೋಗಬೇಕು, ಇಲ್ಲ ಸ್ಮಶಾನ ಸೇರಬೇಕು. ಬೊಮ್ಮಾಯಿ ಮಗ, ಯಡಿಯೂರಪ್ಪ ಮಗ ಏನಾದರೂ ಬೀದಿಯಲ್ಲಿ ಹೋರಾಟ ಮಾಡಿದ್ರಾ? ಹೋರಾಟ ಮಾಡೋದೆಲ್ಲ ಪುನೀತ್ ಕೆರೆಹಳ್ಳಿ ಥರದವರು. ಬಿಸಿಸಿಐ ಅಧ್ಯಕ್ಷ ಆಗೋದು ಜಯ್ ಶಾ ಎಂದು ಟಾಂಗ್ ಕೊಟ್ಟರು.

ರಾಷ್ಟ್ರ ಇವತ್ತು ಕವಲು ದಾರಿಯಲ್ಲಿದೆ. ಗಾಂಧೀಯವರ ಚಿಂತನೆ ಪರಿಪಾಲನೆ ಒಂದೆಡೆ. ಗೋಡ್ಸೆ ವೈಭವೀಕರಿಸುವುದು ಮತ್ತೊಂದು ಕಡೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಬ್ರಿಟಿಷರು ದೋಚುತ್ತಿದ್ದರು. ರಾಜ ಮಹಾರಾಜರು ಆಸ್ತಿ ಸಂಪಾದಿಸುತ್ತಿದ್ದರು. ಚರ್ಚಿಲ್ ಭಾರತಕ್ಕೆ ಸ್ವಾತಂತ್ರ‍್ಯ ಕೊಟ್ಟಿದ್ದೇವೆ. ಆದರೆ ಅವರು ಹಸಿವಿನಿಂದ ಸಾಯ್ತಾರೆ ಎಂದಿದ್ದರು. ಆದರೆ ಭವ್ಯ ಭಾರತ ಕಟ್ಟುವ ಕೆಲಸ ಆಗಿದೆ. ಕಟ್ಟಕಡೆಯ ವ್ಯಕ್ತಿಗೂ ಸವಲತ್ತು ಸಿಕ್ಕಿವೆ ಎಂದು ತಿಳಿಸಿದರು.

ಹಿಂದೂ ರಾಷ್ಟ್ರ ಕಟ್ಟುವ ಮಾತನಾಡ್ತಾರೆ. ಇವತ್ತು ಪರಿಸ್ಥಿತಿ ಎಲ್ಲಿಗೆ ಹೋಗಿದೆ ನೋಡ್ತಿದ್ದೇವೆ. ನಾನು ಎಬಿವಿಪಿ, ಆರ್‌ಎಸ್‌ಎಸ್ ವಿರುದ್ಧ ಇದ್ದವನು. ವಿದ್ಯಾರ್ಥಿ ಸಂಘಟನೆಯಿಂದಲೇ ಬೆಳೆದವನು. ಕಾಂಗ್ರೆಸ್‌ನಲ್ಲಿ ಆಗ ಮೂರು ಗುಂಪು ಇದ್ದವು. ಅರಸು ಅವರದ್ದು ಒಂದು, ಗುಂಡೂರಾವ್ ಮತ್ತೊಂದು. ಉಳಿದವರದ್ದು ಇನ್ನೊಂದು ಗುಂಪು ಇತ್ತು. ಆದರೂ ನಮ್ಮದು ಕಾಂಗ್ರೆಸ್ ಗುಂಪು ಅಷ್ಟೇ. ಎಂದೂ ನಿಯಮ, ಸಿದ್ಧಾಂತ ಬಿಟ್ಟು ಹೋಗಲಿಲ್ಲ ಎಂದರು.

ಸುಳ್ಳು ಇತಿಹಾಸವನ್ನ ಹೇಳಿಕೊಂಡು ಓಡಾಡ್ತಾರೆ. ಹಿಂದೆ ಎಬಿವಿಪಿ ಇಂದಿನಷ್ಟು ಕೆಟ್ಟದ್ದಾಗಿರಲಿಲ್ಲ. ಹಿಂದೂ, ಮುಸ್ಲಿಂ ಅಂತಾ ಇವತ್ತು ತಂದಿಟ್ಟಿದ್ದಾರೆ. ಗೋಲ್ವಾಲ್ಕರ್ ಬಂಚ್ ಆಫ್ ಥಾಟ್ಸ್ ಬರೆದಿದ್ದರು. ಅದರಲ್ಲಿ ಹಿಂದೂ, ಜಾತಿಯ ಬಗ್ಗೆ ಬರೆದಿದ್ದರು. ಚಿಂತನಗಂಗಾದಲ್ಲಿ 175ನೇ ಪೇಜ್‌ನಲ್ಲಿದೆ. ಅದರಲ್ಲಿ ದ್ವೇಷದ ಬಗ್ಗೆ ಉಲ್ಲೇಖಿಸಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಮರ ಬಗ್ಗೆ ದ್ವೇಷ ಸಾಧಿಸಿದ್ದರು. ಸ್ವಾತಂತ್ರಕ್ಕಾಗಿ ಪ್ರಾಣಕೊಟ್ಟವರು ಅಲ್ಪಸಂಖ್ಯಾತರು, ಮುಸ್ಲಿಮರು, ಸಿಖ್ಖರು ಹೆಚ್ಚು ತ್ಯಾಗ ಮಾಡಿದ್ದವರು. ನಾವು ಸಾಫ್ಟ್ ಹಿಂದುತ್ವವಾದಿಗಳಲ್ಲ. ನಾವು ಹಿಂದೂಗಳೇ, ಆದರೆ ಹಿಂದುತ್ವವಾದಿಗಳಲ್ಲ. 10 ವರ್ಷ ಆಯ್ತು ಆಯೋಗ್ಯರು ಅಧಿಕಾರದಲ್ಲಿ ಕುಳಿತು. ಸುಭಾಷ್ ಚಂದ್ರಬೋಸ್ ಸಾವಿನ ತನಿಖೆ ಮಾಡಲಿಲ್ಲ. ಸುಭಾಷ್ ಚಂದ್ರರು, ಶಾಸ್ತ್ರಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ನಾನು ಹೇಳುವುದು ಸಾಕಷ್ಟಿದೆ. ಈಗ ಮಾತನಾಡಿದರೆ ಚುನಾವಣೆ ಮೇಲೆ ಎಫೆಕ್ಟ್ ಆಗಬಹುದು. ಹಾಗಾಗಿ ಮುಂದೆ ಮಾತನಾಡ್ತೇನೆ ಎಂದರು.

Share This Article