ಕಲಬುರಗಿ: ಒಂದು ತಿಂಗಳಿನಿಂದ ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಚಿತ್ತಾಪುರ (Chittapur) ಆರ್ಎಸ್ಎಸ್ ಪಥಸಂಚಲನ (RSS Route March) ಕೊನೆಗೂ ಇಂದು ಯಶಸ್ವಿಯಾಗಿ ನಡೆದಿದೆ. ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತವರಿನಲ್ಲಿ ಭಗವಾ ಧ್ವಜ ಹಾರಿಸಿ ಆರ್ಎಸ್ಎಸ್ ಕಾರ್ಯಕರ್ತರು ಹೆಜ್ಜೆ ಹಾಕಿದರು.
ಚಿತ್ತಾಪುರದ ಬಜಾಜ್ ಕಲ್ಯಾಣ ಮಂಟಪದಿಂದ ಆರಂಭವಾಗಿ ಅಂಬೇಡ್ಕರ್ ಸರ್ಕಲ್, ಬಸವ ಆಸ್ಪತ್ರೆ,ಎಚ್ಡಿಎಫ್ಸಿ ಬ್ಯಾಂಕ್ ರಸ್ತೆ, ಬಸವೇಶ್ವರ ಸರ್ಕಲ್ ಮೂಲಕ ಸಾಗಿ ಬಜಾಜ್ ಕಲ್ಯಾಣ ಮಂಟಪದಲ್ಲಿ ಮುಕ್ತಾಯವಾಯಿತು. ಹೈಕೋರ್ಟ್ ಆದೇಶದಂತೆ 300 ಜನ ಗಣವೇಶಧಾರಿಗಳು ಹಾಗೂ 50 ಜನ ಬ್ಯಾಂಡ್ ವಾದಕರಿಗೆ ಮಾತ್ರ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
ಆರ್ಎಸ್ಎಸ್ 100 ವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಡೆದ ಪಥಸಂಚಲನದಲ್ಲಿ ಭಾಗಿಯಾದ ಗಣವೇಷಧಾರಿಗಳಿಗೆ ಮಹಿಳೆಯರು, ಮಕ್ಕಳು, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ನೀಡಿದರು.ರಸ್ತೆಯ ಎರಡೂ ಬದಿಯಲ್ಲಿ ನಿಂತು ಗಣವೇಷಧಾರಿಗಳ ಮೇಲೆ ಹೂವಿನ ಮಳೆ ಸುರಿಸಿದರು. ಇದನ್ನೂ ಓದಿ: ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ – ಯಾರು ಔಟ್? ಯಾರು ಇನ್?
ಮಧ್ಯಾಹ್ನ 3:45ಕ್ಕೆ ಆರಂಭವಾದ ಪಥ ಸಂಚಲನ 4:22ಕ್ಕೆ ಮುಕ್ತಾಯವಾಯಿತು. ಸರಿಸುಮಾರು 47 ನಿಮಿಷಗಳ ಕಾಲ ಒಟ್ಟು 1.25 ಕಿ.ಮೀ ಪಥಸಂಚಲನ ನಡೆಯಿತು.
ಬಿಗಿ ಭದ್ರತೆ:
ಪಥಸಂಚಲನ ನಡೆಯುವ 1.25 ಕಿ.ಮೀ. ಸಾಗುವ ದಾರಿಯಲ್ಲಿ ಪೊಲೀಸರು ಬಿಗಿ ಭದ್ರತೆ ಕಲ್ಪಿಸಿದ್ದರು. ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್, ಕೆಎಸ್ಆರ್ಪಿ ಡಿಎಆರ್ ತುಕಡಿ ಸೇರಿದಂತೆ 650ಜನ ಪೋಲಿಸರು 250ಜನ ಹೋಮ್ ಗಾರ್ಡ್ ನಿಯೋಜನೆ ಮಾಡಲಾಗಿತ್ತು.
ಪಥಸಂಚಲನ ನಡೆಯುವ ಮಾರ್ಗದಲ್ಲಿ ಪುರಸಭೆಯಿಂದ 12 ಹಾಗೂ ಪೋಲಿಸ್ ಇಲಾಖೆಯಿಂದ 44 ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 5 ಡ್ರೋಣ್ ಕ್ಯಾಮೆರಾ ಮೂಲಕ ಜನರ ಚಲನವಲನದ ಮೇಲು ಖಾಕಿ ಪಡೆ ಹದ್ದಿನ ಕಣ್ಣಿಟ್ಟಿತ್ತು. ಪಥ ಸಂಚಲನ ನಡೆಯುವ ಮಾರ್ಗದಲ್ಲಿ ಒಟ್ಟು 200 ಧ್ವಜ ಹಾಗೂ ಬಂಟಿಂಗ್, ಪ್ಲೆಕ್ಸ್, ಕಟ್ಟಲು ಪುರಸಭೆ ಅನುಮತಿ ನೀಡಿತ್ತು.
ಪಥಸಂಚಲನದಲ್ಲಿ ಭಾಗಿಯಾಗಲು ಬೇರೆ ಕಡೆಯಿಂದಲೂ ಕಾರ್ಯಕರ್ತರು ಆಗಮಿಸಿದ್ದರು. ಆದರೆ ಆರ್ಎಸ್ಎಸ್ ಮೊದಲೇ ಪಟ್ಟಿಯಲ್ಲಿ ನೀಡಿದ್ದ ವ್ಯಕ್ತಿಗಳಿಗೆ ಮಾತ್ರ ಪೊಲೀಸರು ಅನುಮತಿ ನೀಡಿದ್ದರು. ಚಿತ್ತಾಪುರ ಹೊರತು ಪಡಿಸಿ ಬೇರೆ ಕಡೆಯಿಂದ ಆಗಮಿಸಿದ ಕಾರ್ಯಕರ್ತರಿಗೆ ಪಥಸಂಚಲನದಲ್ಲಿ ಭಾಗಿಯಾಗಲು ಅವಕಾಶ ನೀಡಿರಲಿಲ್ಲ.
